Court Orders ಶಿವಮೊಗ್ಗ : ಹಣ ಪಡೆದು ಸೈಟ್ ನೀಡದೆ ವಂಚಿಸುವ ರಿಯಲ್ ಎಸ್ಟೇಟ್ ಡೆವಲಪರ್ಗಳಿಗೆ ಶಿವಮೊಗ್ಗ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಶಾಕ್ ನೀಡಿದೆ. ನಿವೇಶನ ಖರೀದಿದಾರರಿಗೆ ಸಕಾಲದಲ್ಲಿ ಕ್ರಯಪತ್ರ ಮಾಡಿಕೊಡದೆ ಸೇವಾನ್ಯೂನತೆ ಎಸಗಿದ ಬೆಂಗಳೂರಿನ ಡೆವಲಪರ್ಸ್ ಸಂಸ್ಥೆಗೆ, ಗ್ರಾಹಕರಿಂದ ಪಡೆದ ಪೂರ್ಣ ಮೊತ್ತವನ್ನು ಬಡ್ಡಿ ಸಮೇತ ಹಿಂದಿರುಗಿಸುವಂತೆ ತೀರ್ಪು ನೀಡಿದೆ.
ಘಟನೆ ವಿವರ
ಶಿವಮೊಗ್ಗದ ವಿನೋಬನಗರದ ನಿವಾಸಿ ವೆಂಕಟಲಕ್ಷ್ಮೀ ಅವರು ಬೆಂಗಳೂರಿನ ಡೆವಲಪರ್ಸ್ ಮತ್ತು ಪ್ರಮೋಟರ್ಸ್ ಒಂದರ ಪಾಲುದಾರರಾದ ಇಬ್ಬರ ವಿರುದ್ಧ ವಕೀಲರ ಮೂಲಕ ಈ ಕಾನೂನು ಹೋರಾಟ ನಡೆಸಿದ್ದರು. ದೂರುದಾರರು ನೆಲಮಂಗಲ ತಾಲೂಕಿನ ಯಲಚಗೆರೆಯಲ್ಲಿ ರೂ. 5.00 ಲಕ್ಷ ಮೌಲ್ಯದ 40/20 ಅಳತೆಯ ನಿವೇಶನಕ್ಕಾಗಿ ಅಕ್ಟೋಬರ್ 2024ರ ಒಳಗೆ ಹಂತ-ಹಂತವಾಗಿ ಒಟ್ಟು ರೂ. 4.99 ಲಕ್ಷ ಪಾವತಿಸಿದ್ದರು.
ಆದರೆ, 6 ತಿಂಗಳೊಳಗೆ ಕ್ರಯಪತ್ರ ಮಾಡಿಕೊಡುವುದಾಗಿ ನಂಬಿಸಿದ್ದ ಸಂಸ್ಥೆಯು ಮಾತು ತಪ್ಪಿದ್ದಲ್ಲದೆ, 2025ರಲ್ಲಿ ನೀಡಿದ ಲೀಗಲ್ ನೋಟಿಸ್ಗೂ ಕ್ಯಾರೆ ಎನ್ನದೆ ಗ್ರಾಹಕರಿಗೆ ದ್ರೋಹ ಬಗೆದಿತ್ತು. ಆಯೋಗದ ನೋಟಿಸ್ಗೂ ಹಾಜರಾಗದ ಎದುರುದಾರರ ವಿರುದ್ಧ ಏಕಪಕ್ಷೀಯವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಟಿ. ಶಿವಣ್ಣ ಮತ್ತು ಸದಸ್ಯರಾದ ಬಿ.ಡಿ. ಯೋಗಾನಂದ ಭಾಂಡ್ಯ ಅವರ ಪೀಠವು ಈ ಐತಿಹಾಸಿಕ ತೀರ್ಪು ಪ್ರಕಟಿಸಿದೆ. ಆದೇಶದ ಪ್ರಕಾರ, ಡೆವಲಪರ್ಸ್ ಸಂಸ್ಥೆಯು ಗ್ರಾಹಕರಿಗೆ ರೂ. 4.99 ಲಕ್ಷ ಮೊತ್ತವನ್ನು ವಾರ್ಷಿಕ ಶೇ. 9 ರ ಬಡ್ಡಿಯೊಂದಿಗೆ45 ದಿನಗಳೊಳಗೆ ನೀಡಬೇಕು. ವಿಳಂಬವಾದರೆ ಶೇ. 12 ರಷ್ಟು ಬಡ್ಡಿ ತೆರಬೇಕಾಗುತ್ತದೆ. ಇದರೊಂದಿಗೆ ಮಾನಸಿಕ ಹಿಂಸೆಗೆ ರೂ. 50,000 ಹಾಗೂ ಕೋರ್ಟ್ ವೆಚ್ಚಕ್ಕಾಗಿ ರೂ. 10,000 ಪರಿಹಾರ ನೀಡಲು ಕಟ್ಟುನಿಟ್ಟಿನ ಆದೇಶ ಮಾಡಲಾಗಿದೆ.
