ಶಿವಮೊಗ್ಗ: ಅಪಘಾತದಲ್ಲಿ ಮೃತಪಟ್ಟ ವಾಹನ ಮಾಲೀಕನ ವಿಮಾ ಮೊತ್ತವನ್ನು ನೀಡದೆ ಸತಾಯಿಸುತ್ತಿದ್ದ ವಿಮಾ ಕಂಪನಿಗೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಬಿಸಿ ಮುಟ್ಟಿಸಿದೆ. ವಿಮಾ ಮೊತ್ತ 15 ಲಕ್ಷ ರೂಪಾಯಿಗಳನ್ನು ಶೇ. 7ರ ಬಡ್ಡಿಯೊಂದಿಗೆ ನೀಡುವಂತೆ ಫ್ಯೂಚರ್ ಜನರಲ್ ಇನ್ಶೂರೆನ್ಸ್ ಕಂಪನಿಗೆ ಆಯೋಗದ ಅಧ್ಯಕ್ಷರಾದ ಟಿ. ಶಿವಣ್ಣ ಅವರ ಪೀಠವು ಕಟ್ಟುನಿಟ್ಟಿನ ಆದೇಶ ನೀಡಿದೆ.

ಪ್ರಕರಣದ ಹಿನ್ನೆಲೆ
ಶಿಕಾರಿಪುರ ತಾಲ್ಲೂಕಿನ ಅಮ್ಟೆಕೊಪ್ಪ ನಿವಾಸಿ ರತ್ನಮ್ಮ ಎಂಬುವವರ ಮಗ ಮಂಜುನಾಥ್ ಅವರು ಲೈಲ್ಯಾಂಡ್ ವಾಹನದ ಮಾಲೀಕರಾಗಿದ್ದರು. ಅವರು ಫ್ಯೂಚರ್ ಜನರಲ್ ಇನ್ಶೂರೆನ್ಸ್ ಕಂಪನಿಯಿಂದ ವೈಯಕ್ತಿಕ ಅಪಘಾತ ವಿಮೆಯನ್ನು ಪಡೆದಿದ್ದರು. 2023ರ ಅಕ್ಟೋಬರ್ 28ರಂದು ಆನಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಮಂಜುನಾಥ್ ಮೃತಪಟ್ಟಿದ್ದರು. ಮಗನ ಸಾವಿನ ನಂತರ ತಾಯಿ ರತ್ನಮ್ಮ ಅವರು ವಿಮಾ ಮೊತ್ತಕ್ಕಾಗಿ ಎಲ್ಲಾ ದಾಖಲೆಗಳನ್ನು ಸಲ್ಲಿಸಿದ್ದರೂ, ಕಂಪನಿಯು ಹಣ ನೀಡದೆ ಸೇವಾ ನ್ಯೂನ್ಯತೆ ಎಸಗಿತ್ತು.
ದೂರುದಾರರ ಪರವಾದ ವಾದ ಹಾಗೂ ದಾಖಲೆಗಳನ್ನು ಆಲಿಸಿದ ಆಯೋಗವು, ವಿಮಾ ಕಂಪನಿಯು ಉದ್ದೇಶಪೂರ್ವಕವಾಗಿ ವಿಳಂಬ ಮಾಡಿರುವುದು ಸೇವಾ ನ್ಯೂನ್ಯತೆಯಾಗಿದೆ ಎಂದು ತೀರ್ಮಾನಿಸಿತು. ಈ ಹಿನ್ನೆಲೆಯಲ್ಲಿ, ದೂರುದಾರರಿಗೆ 15 ಲಕ್ಷ ರೂ. ವಿಮಾ ಮೊತ್ತವನ್ನು ಫೆಬ್ರವರಿ 24, 2025 ರಿಂದ ಅನ್ವಯವಾಗುವಂತೆ ಶೇ. 7ರ ಬಡ್ಡಿಯೊಂದಿಗೆ 45 ದಿನಗಳೊಳಗೆ ಪಾವತಿಸಬೇಕು. ಒಂದು ವೇಳೆ ತಪ್ಪಿದಲ್ಲಿ ಶೇ. 9ರ ಬಡ್ಡಿ ಪಾವತಿಸಬೇಕೆಂದು ಆದೇಶಿಸಿದೆ. ಜೊತೆಗೆ ದೂರುದಾರರ ಮಾನಸಿಕ ಹಿಂಸೆ ಮತ್ತು ಕಾನೂನು ವೆಚ್ಚಕ್ಕಾಗಿ ಹೆಚ್ಚುವರಿಯಾಗಿ 35,000 ರೂ.ಗಳನ್ನು ನೀಡುವಂತೆ ಪೀಠವು ಆದೇಶಿಸಿದೆ.
Court Orders 15L Insurance Payout



