ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನಗರದ ಪುರದಾಳು ರಸ್ತೆಯಲ್ಲಿ ಸ್ನೇಹಿತೆಯರಿಗಾಗಿ ಕಾರು ನಿಲ್ಲಿಸಿಕೊಂಡು ಕಾಯುತ್ತಿದ್ದ ಕಾಲೇಜು ವಿದ್ಯಾರ್ಥಿನಿಗೆ (college student) ಅಪರಿಚಿತ ವ್ಯಕ್ತಿಯೊಬ್ಬ ಬೆದರಿಕೆ ಹಾಕಿ, 15 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾದ ಘಟನೆ ಶುಕ್ರವಾರ ನಡೆದಿದೆ. ಈ ಸಂಬಂಧ ತುಂಗಾನಗರ ಪೊಲೀಸ್ ಸ್ಟೇಷನ್ ನಲ್ಲಿ ದಾಖಲಾಗಿರುವ ಎಫ್ಐಆರ್ನ ಪ್ರಕಾರ ನಡೆದ ಘಟನೆಯ ವಿವರ ಹೀಗಿದೆ.
ಕಾಲೇಜು ವಿದ್ಯಾರ್ಥಿನಿ ಒಬ್ಬರು ತನ್ನ ಸ್ನೇಹಿತೆಯರೊಂದಿಗೆ ಸೇರಿಕೊಂಡು ಪುರದಾಳು ಡ್ಯಾಂಗೆ ತೆರಳುತ್ತಿದ್ದರು. ವಿದ್ಯಾರ್ಥಿನಿ ಕಾರಿನಲ್ಲಿ ತೆರಳುತ್ತಿದ್ದರೆ, ಆಕೆಯ ಸ್ನೇಹಿತೆಯರು ಸ್ಕೂಟಿಯಲ್ಲಿ ಹಿಂದಿನಿಂದ ಬರುತ್ತಿದ್ದರು ಎನ್ನಲಾಗಿದೆ. ಸ್ನೇಹಿತೆಯರು ಹಿಂದೆ ಉಳಿದಿದ್ದರಿಂದ ಅವರು ಬರುವವರೆಗೆ ಕಾಯಲು ವಿದ್ಯಾರ್ಥಿನಿ ಪುರದಾಳು ರಸ್ತೆಯ ಪಕ್ಕದಲ್ಲಿ ಕಾರನ್ನು ನಿಲ್ಲಿಸಿಕೊಂಡಿದ್ದರು. ಈ ವೇಳೆ ಅಲ್ಲಿಗೆ ಬಂದ ಅಪರಿಚಿತ ವ್ಯಕ್ತಿ ಕೋಲಿನಿಂದ ಕಾರಿನ ಪಕ್ಕದ ಗಾಜನ್ನು ಒಡೆದಿದ್ದಾನೆ.
ಬಳಿಕ ವಿದ್ಯಾರ್ಥಿನಿಗೆ ಬೆದರಿಕೆ ಹಾಕಿದ ಅಪರಿಚಿತ ವ್ಯಕ್ತಿ, ಆಕೆ ಧರಿಸಿದ್ದ 15 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ಸಂಬಂಧ ತನಿಖೆ ಮುಂದುವರಿದಿದೆ.
