ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನಗರದಲ್ಲಿ ಈಗಾಗಲೇ ಟ್ರಾಫಿಕ್ ಪೊಲೀಸರು, ಶಿವಮೊಗ್ಗ ನೋಂದಣಿ ಮಾಡಿಸದ ಆಟೋಗಳನ್ನ ವಶಕ್ಕೆ ಪಡೆಯುವ ಸಂಬಂಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಈ ಮಧ್ಯೆ ಹೊಸ ಆಟೊರಿಕ್ಷಾಗಳಿಗೆ ಪರ್ಮಿಟ್ ನೀಡುವುದನ್ನು ನಿಲ್ಲಿಸಬೇಕು ಎಂದು ಶಿವಮೊಗ್ಗ ನಗರ ಆಟೊ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಅಬ್ಬರ್ ಬಾಷಾ (Shivamogga Auto Drivers)ಒತ್ತಾಯಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ನಿನ್ನೆ ದಿನ ಶನಿವಾರ ಈ ಕುರಿತಾಗಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಗರದಲ್ಲಿ ಈಗಾಗಲೇ ಸಾವಿರಾರು ಆಟೊಗಳಿವೆ. ಇವುಗಳಲ್ಲಿ 1,900 ಆಟೊಗಳನ್ನು ಇಎಂಐ ಪಾವತಿಸದ ಕಾರಣಕ್ಕೆ ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು. ನಗರದಲ್ಲಿ ಆಟೊಗಳ ಸಂಖ್ಯೆ ಹೆಚ್ಚಾಗಿದ್ದರೂ, ಅದಕ್ಕೆ ಅನುಗುಣವಾಗಿ ಪ್ರಯಾಣಿಕರು ಸಿಗುತ್ತಿಲ್ಲ. ಇದರಿಂದ ಆಟೊ ಚಾಲಕರಿಗೆ ಅಗತ್ಯ ಪ್ರಮಾಣದಲ್ಲಿ ಬಾಡಿಗೆ ದೊರೆಯದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ಇಷ್ಟೆಲ್ಲ ಸಮಸ್ಯೆಗಳಿದ್ದರೂ, ಇತ್ತೀಚೆಗೆ ನಡೆದ ಆರ್ಟಿಒ ಸಭೆಯಲ್ಲಿ ಒಬ್ಬರಿಗೆ ಒಂದು ಪರ್ಮಿಟ್ ಮಾತ್ರ ನೀಡಲಾಗುವುದು ಎಂಬ ಆದೇಶ ಮಾಡಲಾಗಿದೆ. ಈ ಆದೇಶದಿಂದ ನಗರದಲ್ಲಿ ಆಟೊಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ. ಈಗಾಗಲೇ ಅಗತ್ಯ ಪ್ರಮಾಣದಲ್ಲಿ ಬಾಡಿಗೆ ದೊರೆಯದೆ ಸಂಕಷ್ಟ ಎದುರಿಸುತ್ತಿರುವ ಆಟೊ ಚಾಲಕರಿಗೆ ಜೀವನ ನಿರ್ವಹಣೆ ಮತ್ತಷ್ಟು ಕಷ್ಟವಾಗಲಿದೆ ಎಂದು ತಿಳಿಸಿದರು.
ಆಟೋ ಚಾಲಕರ ಬೇಡಿಕೆಗಳು
- ಜಿಲ್ಲಾಡಳಿತವು ಸೆಪ್ಟೆಂಬರ್ 1ರೊಳಗೆ ಹೊಸ ಪರ್ಮಿಟ್ ನೀಡುವ ಆದೇಶವನ್ನು ಹಿಂಪಡೆಯಬೇಕು. ಆದೇಶ ಹಿಂಪಡೆಯದಿದ್ದರೆ ಸಂಘದ ವತಿಯಿಂದ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
- ಜಿಲ್ಲಾಡಳಿತ ಮತ್ತು ಪ್ರಾದೇಶಿಕ ಸಾರಿಗೆ ಇಲಾಖೆಯು ಮುಂದಿನ 10 ವರ್ಷಗಳ ಅವಧಿಗೆ ಯಾವುದೇ ಹೊಸ ಆಟೊಗಳಿಗೆ ಪರ್ಮಿಟ್ ನೀಡಬಾರದು ಎಂದು ಒತ್ತಾಯಿಸಿದರು.
- ರಾತ್ರಿ 10ರಿಂದ ಬೆಳಗ್ಗೆ 5ರವರೆಗೆ ಜಾರಿಯಲ್ಲಿದ್ದ ಒನ್ ಆಂಡ್ ಹಾಫ್ ರೇಟ್ ನ ಅವಧಿಯನ್ನು ಬೆಳಗ್ಗೆ 5.30ರವರೆಗೆ ವಿಸ್ತರಿಸಲಾಗಿದೆ. ಈ ಕ್ರಮಕ್ಕಾಗಿ ಜಿಲ್ಲಾಡಳಿತಕ್ಕೆ ಧನ್ಯವಾದ ಸಲ್ಲಿಸುವುದಾಗಿ ಅಬ್ಬರ್ ಬಾಷಾ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಲ್ಲಾ ಭಕ್ಸ್, ಜಬೀವುಲ್ಲಾ, ಪರೀಶ್, ಮುಜೀಬುಲ್ಲಾ, ಎನ್. ಸಂತೋಷ್, ಮಂಜುನಾಥ, ಫೈರೋಜ್ ಮತ್ತಿತರರು ಉಪಸ್ಥಿತರಿದ್ದರು.
