ಭದ್ರಾವತಿ : ಭದ್ರಾವತಿ ಗ್ರಾಮಾಂತರ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಲಕ್ಷಾಂತರ ರೂಪಾಯಿ ಬೆಳೆಬಾಳುವ ಚಿನ್ನದ ಸರವನ್ನು ಕದ್ದ ಆರೋಪಿಗಳನ್ನು 2 ದಿನದೊಳಗೆ ಬಂಧಿಸಿದ್ದಾರೆ. ಚಂದನ್ ನಾಯ್ಕ (20) ವೇಣುಗೋಪಾಲ, (26) ಬಂಧಿತ ಆರೋಪಿಗಳು.
ಘಟನೆ ವಿವರ
ಜನವರಿ 30 ರಂದು ಭದ್ರಾವತಿ ತಾಲೂಕಿನ ಕುವೆಂಪು ನಗರ ನಿವಾಸಿ ಜಯಂತ್ ಎನ್ನುವವರು ಬೈಕ್ನಲ್ಲಿ ಹೋಗುತ್ತಿದ್ದಾಗ, ಇಬ್ಬರು ಯುವಕರು ಜಯಂತ್ರನ್ನು ಅಡ್ಡಗಟ್ಟಿದ್ದಾರೆ. ಅಷ್ಟೇ ಅಲ್ಲದೆ ಅವರ ಮೇಲೆ ಹಲ್ಲೆ ಮಾಡಿ ಅವರ ಕೊರಳಲ್ಲಿದ್ದ 14 ಗ್ರಾಂ ತೂಕದ 1,50,000 ರೂ ಬೆಲೆ ಬಾಳುವ ಬಂಗಾರದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ಹಿನ್ನೆಲೆ ಜಯಂತ್ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಕಳ್ಳರ ಪತ್ತೆಗಾಗಿ ಪೊಲೀಸರು ತಂಡ ರಚಿಸಿ ಶೋಧ ಕಾರ್ಯ ನಡೆಸಿದ್ದು, 2 ದಿನದೊಳಗೆ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿತರಿಂದ ಸುಲಿಗೆ ಮಾಡಿದ 10ಗ್ರಾಂ ಬಂಗಾರದ ಸರ ಅಂದಾಜು ಮೌಲ್ಯ 1,50,000 ರೂಪಾಯಿ ಹಾಗೂ ಆರೋಪಿತರು ಕೃತ್ಯಕ್ಕೆ ಬಳಸಿದ ಬೈಕ್ನ್ನು ವಶಪಡಿಸಿಕೊಂಡಿದ್ದಾರೆ.
Bhadravathi Police Arrest Gold Snatchers Within 48 Hours

