ಶಿವಮೊಗ್ಗ: ಭದ್ರಾವತಿಯಲ್ಲಿ ನಿನ್ನೆ ನಡೆದಿದ್ದ ದಂಪತಿಯ ನಿಗೂಢ ಸಾವು ಪ್ರಕರಣವನ್ನು ಶಿವಮೊಗ್ಗ ಪೊಲೀಸರು ಭೇದಿಸಿದ್ದು, ನಡೆದ ಘಟನೆ ಬಗ್ಗೆ ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ ಬಿ ಮಾಹಿತಿ ನೀಡಿದ್ದಾರೆ.
ಈ ಕುರಿತು ಇಂದು ನಗರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಮೃತ ಚಂದ್ರಪ್ಪ ಅವರ ಸ್ವಂತ ತಮ್ಮ ಪಾಲಾಕ್ಷಪ್ಪನ ಮಗ, ವೃತ್ತಿಯಲ್ಲಿ ಬಿ.ಎ.ಎಂ.ಎಸ್ ವೈದ್ಯನಾಗಿರುವ ಡಾ. ಮಲ್ಲೇಶ್ ಎಂಬಾತನೇ ಕೃತ್ಯ ಎಸಗಿದ್ದಾನೆ. ವಿಪರೀತ ಸಾಲದ ಸುಳಿಯಲ್ಲಿ ಸಿಲುಕಿದ್ದ ಈತ, ಅದನ್ನು ತೀರಿಸಲು ತನ್ನ ದೊಡ್ಡಪ್ಪ-ದೊಡ್ಡಮ್ಮನನ್ನೇ ಬಲಿಪಡೆದಿದ್ದಾನೆ. ಈ ಹಿಂದೆ ಚಂದ್ರಪ್ಪ ಅವರ ಬಳಿ 15 ಲಕ್ಷ ರೂಪಾಯಿ ಸಾಲ ಕೇಳಿದ್ದ ಮಲ್ಲೇಶ್ಗೆ, ಅವರು ಹಣ ನೀಡಲು ನಿರಾಕರಿಸಿದ್ದರು. ಇದೇ ದ್ವೇಷ ಹಾಗೂ ಹಣದ ಹಪಾಹಪಿಯಿಂದ ದಂಪತಿಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದನು.

ತಾನು ಕೆಲಸ ಮಾಡುತ್ತಿದ್ದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ನೆಪದಲ್ಲಿ ಚಂದ್ರಪ್ಪ ಮತ್ತು ಅವರ ಪತ್ನಿಗೆ ತಲಾ 50 ಎಂ.ಜಿ ಪ್ರೊಫೊಲಾನ್ ಎಂಬ ಅರಿವಳಿಕೆ (Anesthesia) ಇಂಜೆಕ್ಷನ್ ನೀಡಿದ್ದಾನೆ. ಅತಿಯಾದ ಡೋಸ್ನಿಂದ ದಂಪತಿ ಸಾವನ್ನಪ್ಪುತ್ತಿದ್ದಂತೆಯೇ, ಅವರ ಮೈಮೇಲಿದ್ದ ಸುಮಾರು 80 ಗ್ರಾಂ ಚಿನ್ನಾಭರಣಗಳನ್ನು ದೋಚಿದ್ದಾನೆ. ಒಂದೇ ದಿನದಲ್ಲಿ ಕೊಲೆ ಮಾಡಿ, ಚಿನ್ನವನ್ನು ಅಡವಿಟ್ಟು ಸಾಲ ತೀರಿಸಲು ಮುಂದಾಗಿದ್ದ ಎಂದಿದ್ದಾರೆ.
