ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಹೊಳಲೂರು ಗ್ರಾಮದ ಗೋಡಾನ್ನ ಜಾಲರಿ ಮುರಿದು ಒಳನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಒಣ ಅಡಕೆಯನ್ನು ಕಳವು ಮಾಡಿರುವ ಘಟನೆ ನಿನ್ನೆ ದಿನ ವರದಿಯಾಗಿದೆ. ಇಲ್ಲಿನ ಅಡಕೆ ವ್ಯಾಪಾರಿ ಅಕ್ರವುಲ್ಲಾಖಾನ್ ಅವರಿಗೆ ಸೇರಿದ ಗೋಡಾನ್ನಲ್ಲಿ ಕಳವು ನಡೆದಿದೆ. ಗೋಡಾನ್ನಲ್ಲಿ ಒಟ್ಟು 80 ಮೂಟೆ ಅಡಕೆಯನ್ನು ಸಂಗ್ರಹಿಸಿಡಲಾಗಿತ್ತು ಎಂದು ಉಲ್ಲೇಖಿಸಲಾಗಿದೆ.
ಕಳವು ನಡೆದಿರುವುದು ಗೊತ್ತಾದ ಬಳಿಕ ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಕಳ್ಳರು ರಾತ್ರಿ ವೇಳೆ ಗೋಡಾನ್ನ ಜಾಲರಿ ಎತ್ತಿ ಒಳಗೆ ನುಗ್ಗಿರುವುದು ಕಂಡುಬಂದಿದೆ. ಗೋಡಾನ್ನಲ್ಲಿದ್ದ 6 ಮೂಟೆಗಳಲ್ಲಿ ಸುಮಾರು 4 ಕ್ವಿಂಟಾಲ್ 80 ಕೆಜಿ ಒಣ ಅಡಕೆಯನ್ನು ಕಳ್ಳರು ದೋಚಿದ್ದಾರೆ. ಕಳವಾದ ಅಡಕೆಯ ಮೌಲ್ಯ ಸುಮಾರು ₹2.50 ಲಕ್ಷ ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ (Shivamogga Rural Police station) ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
