ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನಿನ್ನೆ ದಿನ ಜಯನಗರ ಪೊಲೀಸ್ ಸ್ಟೇಷನ್ ಲಿಮಿಟ್ಸ್ ನಲ್ಲಿ (Jayanagar Police Station) ಮನೆ ಮುಂದೆ ನಿಲ್ಲಿಸಿದ್ದ ಎರಡು ಬೈಕ್ಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ಬಗ್ಗೆ ಮಲೆನಾಡು ಟುಡೆಯಲ್ಲಿಯೇ ವರದಿ ಮಾಡಿದ್ದೆವು. ಇದೀಗ ಪ್ರಕರಣ ಹಿಂದಿನ ಕಾರಣ ಮತ್ತು ಆರೋಪಿ ಯಾರು ಎಂಬುದು ಗೊತ್ತಾಗಿದೆ. ಘಟನೆಗೆ ಆರೋಪಿಯ ಪ್ರೇಮಾಗ್ನಿ ಕಾರಣ ಎನ್ನಲಾಗಿದೆ.
ಪೊಲೀಸ್ ಇಲಾಖೆಯ ಮೂಲಗಳ ಪ್ರಕಾರ, ತಾನು ಪ್ರೀತಿಸಿದ್ದ ಯುವತಿಯೊಬ್ಬರು ಬೇರೊಬ್ಬ ಯುವಕನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರಿಂದ ಆಕ್ರೋಶಗೊಂಡ ಯುವಕ, ಆಕೆಯ ಭಾವಿಪತಿ ಹಾಗೂ ಸಹೋದರನಿಗೆ ಸೇರಿದ ಎರಡು ಬೈಕ್ಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ ಎನ್ನಲಾಗಿದೆ. ವೆಂಕಟೇಶನಗರದಲ್ಲಿ ಕಳೆದ ಭಾನುವಾರ ಮಧ್ಯರಾತ್ರಿ ಈ ಕೃತ್ಯ ಎಸೆಗಿದ್ದ. ಸದ್ಯ ಆರೋಪಿ ಮಣಿಯನ್ನು ಪೊಲೀಸರು ಬಂಧಿಸಿದ್ದಾರೆ.
ಈ ಮಣಿ ಯುವತಿಯೊಬ್ಬರನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಆದರೆ, ಯುವತಿ ಈತನಿಂದ ದೂರವಾಗಿದ್ದರು. ಬಳಿಕ ಕುಟುಂಬದವರು ಆಕೆಗೆ ಬೇರೊಬ್ಬ ಯುವಕನೊಂದಿಗೆ ನಿಶ್ಚಿತಾರ್ಥ ಮಾಡಿದ್ದರು ಎಂದು ತಿಳಿದುಬಂದಿದೆ. ಯುವತಿಯ ನಿಶ್ಚಿತಾರ್ಥ ನಡೆದಿರುವುದರಿಂದ ಆಕ್ರೋಶಗೊಂಡಿದ್ದ ಮಣಿ, ಭಾನುವಾರ ಮಧ್ಯರಾತ್ರಿ ಎರಡು ಪಲ್ಸರ್ ಬೈಕ್ಗಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸ್ಥಳದಿಂದ ಪರಾರಿಯಾಗಿದ್ದ. ಪೊಲೀಸರು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದ ದೃಶ್ಯಗಳನ್ನ ಆಧರಿಸಿ ಆರೋಪಿ ಮಣಿಯನ್ನು ಪೊಲೀಸರು ಬಂಧಿಸಿದ್ದಾರೆ.
