MALENADUTODAY.COM |SHIVAMOGGA| #KANNADANEWSWEB
ಇದು ಕಳ್ಳತನ ಪ್ರಕರಣವೊಂದರಲ್ಲಿ ಜೈಲಿಗೆ ಬಂದು ಕಲಾವಿದನಾದವನ ರೋಚಕ ಸ್ಟೋರಿ… ಇದು ಕೆಟ್ಟಗಳಿಗೆಯೊಂದರಲ್ಲಿ, ಬದುಕನ್ನೇ ರೈಲಿನ ಹಳಿಗಿಟ್ಟು ಜೀವತ್ತೆತ್ತವನ ಜೀವನದ ಸ್ಟೋರಿ.. ಇವತ್ತ ಆತನಿಲ್ಲ ಆದರೆ, ಅವನ ಕೈಯಲ್ಲಿ ಅರಳಿದ ಕಲಾಚಿತ್ರಗಳು ನಾಡಿನ ಗಣ್ಯಾತಿ ಗಣ್ಯರಿಗೆ ಉಡುಗೊರೆಯಾಗಿದೆ. ಪೆನ್ಸಿಲ್ ನಲ್ಲಿ ತಮ್ಮದೆ ಚಿತ್ರವೊಂದನ್ನ ಬರೆದುಕೊಟ್ಟವ ಈಗಿಲ್ಲ ಎಂದರೇ, ಸೆಲೆಬ್ರಿಟಿಗಳಿಗೂ ನಂಬಲಾಗುತ್ತಿಲ್ಲ. ಅಂತಹ ವ್ಯಕ್ತಿಯ ಬದುಕಿನ ಕಥೆಯನ್ನು ಹೇಳುತ್ತಿದ್ದೇವೆ..
ಕಳೆದ ಕೆಲ ದಿನಗಳ ಹಿಂದೆ ನಿಮ್ಮ ಮಲೆನಾಡು ಟುಡೆ ತಂಡ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನಲ್ಲಿ ರೈಲಿಗೆ ಸಿಲುಕಿ ಸ್ಥಳೀಯ ನಿವಾಸಿ ಸಾವು! ಅಡಿಯಲ್ಲಿ ಸುದ್ದಿಯೊಂದನ್ನ ಪ್ರಕಟಿಸಿತ್ತು. ಮುಂದೆಕ್ಕೆ ಓದುವ ಮೊದಲು ನಡೆದ ಘಟನೆಯ ವಿವರನ್ನ ಒಮ್ಮೆ ಓದಿ ಬಿಡಿ.

ಸಾವಿನಿಂದಲೇ ಆರಂಭವಾಯ್ತು ಆತನ ಬದುಕಿನ ಕಥೆ
ಅವತ್ತು ಅಲ್ಲಿ ಹೊಸನಗರ ತಾಲ್ಲೂಕಿನ ನೆವಟೂರು ಬಳಿ ಟ್ರೈನ್ಗೆ ತಲೆಕೊಟ್ಟವನು ಯಾರು ಎಂಬುದು ಗುರುತು ಹಿಡಿವುದು ಕಷ್ಟವಾಗಿತ್ತು. ಮೇಲಾಗಿ ಆತ್ಮಹತ್ಯೆ ಕೇಸ್ನಲ್ಲಿ ಸತ್ತವರು ಏಕೇ ಸತ್ತರು ಎಂಬುದು ತಿಳಿದರೇ ಕೇಸ್ ಮುಗೀತು.. ಅವರ ಪೂರ್ವಾಪರವೇನು? ಆತನ ಬದುಕು ಹೇಗಿತ್ತು ಎಂಬುದು ಗೊತ್ತಾಗುವುದಿಲ್ಲ. ಆದರೆ ಮಲೆನಾಡು ಟುಡೆಗೆ ಈ ವಿಚಾರದಲ್ಲಿ ವಿಚಾರಿಸಿದಯೇ ಸಂಗತಿಯೊಂದು ಸಿಕ್ಕಿತ್ತು. ಅದು ನೆವಟೂರು ಬಳಿ ಸಾವನ್ನಪ್ಪಿದ್ದ ವ್ಯಕ್ತಿಯ ಗುರುತು ಪರಿಚಯವಾಗಿತ್ತು. ಹಾಗೆ ಸಿಕ್ಕಿ ವಿಚಾರದ ಹಿಂದೆ ಬಿದ್ದವರಿಗೆ ಸಿಕ್ಕಿದ್ದು, ತೆರೆಮರೆಯಲ್ಲಿ ಕಂಬಿ ಹಿಂದೆಯೇ ಕುಳಿತು, ಸೆಲೆಬ್ರಿಟಿಗಳಿಗೆ ತನ್ನ ಸಹಿ ಹಾಕಿ ಕಲಾಕೃತಿ ನೀಡುತ್ತಿದ್ದ ಕಲಾವಿದನ ಕಥೆ. ಹೌದು ಸ್ನೇಹಿತರೇ, ಇದು ಶಿವಮೊಗ್ಗ ಸೆಂಟ್ರಲ್ ಜೈಲಿನಲ್ಲಿ ನಡೆದ ಸತ್ಯ ಕಥೆ. ಅಲ್ಲಿ ಯಾವುದೋ ಒಂದು ಕೇಸ್ನಲ್ಲಿ ಅಂದರ್ ಆಗಿದ್ದ ವ್ಯಕ್ತಿಯೊಬ್ಬನ ಬದುಕಿನ ಚಿತ್ರಣ
ಕಂಬಿ ಹಿಂದಿನ ಕೈದಿ ಕಲಾವಿದನಾದ
ತಾನು ಮಾಡದ ತಪ್ಪಿಗೆ ಇಲ್ಲಿಗೆ ಬಂದೆ ಎಂಬ ಅನಾಥ ಭಾವ ಆತನಿಗೆ ಕಾಡಿದ್ದರೂ ಆತ ಶಿಕ್ಷೆಯನ್ನು ಅನುಭವಿಸಿದರೆ ಬೇರೆ ವಿಧಿ ಇರಲಿಲ್ಲ. ನಾನು ಕಳ್ಳತನ ಮಾಡಿಲ್ಲ ಎಂದರೆ ಅದನ್ನು ಒಪ್ಪುವ ಸ್ಥಿತಿಯಲ್ಲಿ ಪೊಲೀಸರಿರಲಿಲ್ಲ. ಎರಡು ವರ್ಷಗಳ ಜೈಲು ಶಿಕ್ಷೆಗೊಳಗಾದ ಆತನಿಗೆ ಜೈಲಿನಲ್ಲಿ ತಾನೇನು ಮಾಡ ಬೇಕೆಂಬುದು ಅರಿಯದಾಗಿತ್ತು. ಆದರೆ ಜೈಲು ಆತನಿಗೊಂದು ಬದುಕುಕೊಟ್ಟಿತ್ತು. ಆತನಿಗೊಂದು ಗೌರವ ತಂದುಕೊಟ್ಟಿತ್ತು. ಆತನಿಗೊಂದಿಷ್ಟು ಹೆಸರು ತಂದುಕೊಟ್ಟಿತ್ತು. ಕೈದಿಯಾದರೂ ನ್ಯಾಯಾದೀಶರೇ ಬೆನ್ನುತಟ್ಟಿ ಶಹಬ್ಬಾಸ್ ಎನ್ನುವಂತೆ ಮಾಡಿತ್ತು. ಅಂದರ್ ಆದ ಮೇಲೆ, ಬಿಡುಗಡೆಯಾಗುವರೆಗೂ ಮಾಡೋದೇನು ಎನ್ನುತ್ತಿದ್ದ ಆತನ ಕಿವಿಯಲ್ಲಿ ಸದಾ ಇರುತ್ತಿದ್ದ ಪೆನ್ಸಿಲ್ ಆತನ ಕೈಗೆ ಬಂದಿತ್ತು. ವೃತ್ತಿಯಲ್ಲಿ ಕಾರ್ಪೆಂಟರ್ ಆಗಿದ್ದ, ಆತ, ಕೈಗೆತ್ತಿಕೊಂಡಿದ್ದ ಪೆನ್ಸಿಲ್ನಲ್ಲಿ ಚಿತ್ರ ಬರೆಯುತ್ತಾ ಹೋದ.. ಮುಂದೆ ನಡೆದಿದ್ದೆಲ್ಲವೂ ವಿಶೇಷ.. ಆತನ ಹೆಸರು ಸುರೇಶ್ ಆಚಾರಿ…
ಶಿವಮೊಗ್ಗದ ವಿವಿಐಪಿಗಳಿಗೆಲ್ಲಾ ಗೊತ್ತಿದ್ದ ಕಲಾವಿದ
ಜೈಲಿನ ಗ್ರಂಥಾಲಯವನ್ನೇ ತನ್ನ ದೇಗುಲವನ್ನಾಗಿ ಮಾಡಿಕೊಂಡ ಸುರೇಶ್ ಚಿತ್ರ ಬಿಡಿಸಲು ಆರಂಭಿಸಿದ. ಈತನಿಗೆ ಜೈಲು ಶಿಕ್ಷಕರಾಗಿರೋ ಲೀಲಾ ಮೇಡಂ ಅಕ್ಷರಶಃ ತಾಯಿ ಸ್ಥಾನದಲ್ಲಿ ನಿಂತು ಪ್ರೋತ್ಸಾಹ ನೀಡಿದರು. ಮೊದಲು ಕಲಿಕೆ, ನಂತರ ಅಭ್ಯಾಸ, ಆನಂತರ ನುರಿತ ಅನುಭವ, ಸುರೇಶ್ ಆಚಾರಿ ಒಂದೊಳ್ಳೆ ಕಲಾವಿದನಾದ.. ಕಲೆಯಲ್ಲಿಯೇ ತಲ್ಲೀನನಾದ, ಮುಂದೆ ನಡೆದಿದ್ದೆಲ್ಲಾ ಮಿರಾಕಲ್. ದೇವರು, ದೇಶ ಭಕ್ತರು, ನಾಡಿನ ಗಣ್ಯ ವ್ಯಕ್ತಿಗಳು ರಾಜಕಾರಣಿಗಳ ಚಿತ್ರಗಳನ್ನು ಪೆನ್ಸಿಲ್ ನಿಂದ ಬರೆಯುತ್ತಾ ಸಾಗಿದ ಸುರೇಶ್ ಜೈಲಿನಲ್ಲಿ ಒಂದು ರೀತಿಯ ಸೆಲೆಬ್ರಿಟಿಯಾದ. ಜೈಲಿನ ಕಾರ್ಯಕ್ರಮಗಳಿಗೆ ಬರುವ ವಿವಿಐಪಿಗಳ ಬಗ್ಗೆ ತಿಳುದು ಚಿತ್ರ ಬಿಡಿಸಿ, ಕೊನೆಯಲ್ಲಿ ತನ್ನದೊಂದು ಸಹಿ ಗೀಚಿ,, ಉಡುಗೊರೆಯಾಗಿ ಕೊಡಿ ಎಂದು ಅಧಿಕಾರಿಗಳಿಗೆ ಕೊಟ್ಟುಬಿಡುತ್ತಿದ್ದ. ಅಧಿಕಾರಿಗಳು ಸಹ , ಸರ್ಕಾರಿ ಕಾರ್ಯಕ್ರಮಗಳಲ್ಲಿ ಈತ ಬಿಡಿಸಿದ ಕಲಾಕೃತಿಗಳನ್ನ ಬಳಸಿಕೊಳ್ಳುತ್ತಿದ್ದರು.
ಕಲೆಗೆ ಸಾಕ್ಷಿಯಾದವರು
ಹಾಸ್ಯ ಕಲಾವಿದ ಪ್ರಾಣೇಶ್ ರವರಿಗೆ ಅವರ ಭಾವಚಿತ್ರವನ್ನೇ ಸುರೇಶ್ ಬಿಡಿಸಿದ್ದನ್ನು ಜೈಲು ಅಧಿಕಾರಿಗಳು ಉಡುಗೊರೆಯಾಗಿ ನೀಡಿದ್ದರು.ಕಾರಾಗಹ ಡಿಜಿಪಿಯಾಗಿದ್ದ ಅಲೋಕ್ ಮೋಹನ್ ರವರಿಗೂ,ಸಹ ಸುರೇಶ್ ಬಿಡಿಸಿದ ಕಲಾಚಿತ್ರವನ್ನೇ ಉಡುಗೊರೆಯಾಗಿ ನೀಡಲಾಗಿದೆ. ಶಿವಮೊಗ್ಗ ಲೋಕಸಭಾ ಸಂಸದ ಬಿ.ವೈ ರಾಘವೇಂದ್ರ, ಬಿ.ಎಸ್.ಯಡಿಯೂರಪ್ಪನವರ ಪುತ್ರಿ ಅರುಣಾದೇವಿ, ಈ ಹಿಂದೆ ಡಿಸಿಯಾಗಿದ್ದ ಶಿವಕುಮಾರ್, ಎಸ್ಪಿ ಶಾಂತಕುಮಾರ್, ಸಿಇಓ ಆಗಿದ್ದ ವೈಶಾಲಿ,..ಹೀಗೆ ಅನೇಕರ ಚಿತ್ರಗಳನ್ನು ಬಿಡಿಸಿದ ಸುರೇಶ್ ಆ ಗಣ್ಯರಿಗೆ ಚಿತ್ರಗಳನ್ನು ಉಡುಗೊರೆಯಾಗಿ ನೀಡಿದ್ದಾನೆ. ಸುಮಾರು 150 ಕ್ಕೂ ಹೆಚ್ಚು ಚಿತ್ರಗಳನ್ನು ಬಿಡಿಸಿರುವ ಸುರೇಶ್ ಆಚಾರಿಯ ಕಲಾಕೃತಿಗಳು ಅಧಿಕಾರಿಗಳಿಂದ ಹಿಡಿದು ನ್ಯಾಯಾದೀಶರವರೆಗೂ ತಲುಪಿದೆ. ಗಣ್ಯವ್ಯಕ್ತಿಗಳಿಗೆ ಅವರದ್ದೆ ಚಿತ್ರವನ್ನು ಬಿಡಿಸಿ ನೀಡುತ್ತಿದ್ದ ಸುರೇಶ್ ಆಚಾರಿಯ ಕಲಾಕೃತಿಗಳು ಇವತ್ತಿಗೂ ಹಲವರ ಮನೆಯ ವಾಲ್ನಲ್ಲಿ ಭದ್ರವಾಗಿದೆ.
ಡೊಂಟ್ ವರಿ.. ಅಂದಿತ್ತು ಜೈಲು
ಜೈಲಿನ ಹಲವು ಸೆಲ್ ಗಳಲ್ಲಿ ಕೈದಿಗಳು ಸುರೇಶ್ ಬಿಡಿಸಿದ ಚಿತ್ರಗಳನ್ನೇ ಹಾಕಿಕೊಂಡು ಪ್ರತಿದಿನ ಪ್ರಾರ್ಥಿಸುತ್ತಾರೆ. ಥರ್ಮೋಕೋಲ್ ನಿಂದ ಮಾಡಿರುವ ತಾಜ್ ಮಹಲ್ ಈಗಲೂ ಜೈಲಿನಲ್ಲಿ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ತನ್ನ ಕಲಾವಂತಿಕೆಯಿಂದಲೇ ಸುರೇಶ್ ಜೈಲಿನ ಸಮಸ್ತ ಕೈದಿಗಳಿಗೂ ಚಿರಪರಿಚಿತ. ಸ್ನೇಹ ಜೀವಿಯಾಗಿದ್ದ. ಕಳ್ಳತನ ಪ್ರಕರಣದಿಂದ ಖುಲಾಸೆಗೊಂಡು ಜೈಲಿನಿಂದ ಬಿಡುಗಡೆಯಾದ ಸಂದರ್ಭದಲ್ಲಿ ಎಲ್ಲಾ ಕೈದಿಗಳು ಸುರೇಶ್ಗೆ ನೋವಿನಿಂದಲೇ ವಿದಾಯ ಹೇಳಿದ್ರು. ಅಮ್ಮಾ ಅಂತಾ ಕರೆಯುತ್ತಿದ್ದ ಲೀಲಾ ಮೇಡಂ ರವರು ಉತ್ತಮ ಬದುಕು ಕಟ್ಟಿಕೊ ಎಂದು ಹಾರೈಸಿ ಕಳಿಸಿದ್ರು. ಸುರೇಶ್ ನನ್ನು ತಿದ್ದಿತೀಡಿ ಒಬ್ಬ ಒಳ್ಳೆಯ ಮನುಷ್ಯನನ್ನಾಗಿ ಮಾಡಿದ್ರಲ್ಲಿ ಲೀಲಾರವರ ಪಾತ್ರ ತುಂಬಾನೆ ಇತ್ತು. ಕಂಬಿ ಹಿಂದಿನ ಕೈದಿ ಎಂದರೂ ಹೊಸಬದುಕಿಗೆ ಓಂಕಾರ ಹಾಕಿಕೊಟ್ಟಿದ್ದ ಶಿಕ್ಷಕಿಯನ್ನ ತಾಯಿಯೆಂದೆ ಪರಿಗಣಿಸಿದ್ದ ಸುರೇಶ್.. ಅಮ್ಮಾ ಎಂದೇ ಕರೆಯುತ್ತಿದ್ದ
ಒಳಗಿದ್ದ ಚೆನ್ನಾಗಿದ್ದ, ಹೊರಕ್ಕೆ ಬಂದ , ಹೊರಟು ಹೋದ
ಜೈಲಿಗೆ ಹೋಗಿದ್ದ ಕಣ್ರಿ ಅಂತೀವಿ.. ಆದರೆ ಸುರೇಶ್ ಜೈಲಿನಲ್ಲಿ ಚೆನ್ನಾಗಿಯೇ ಇದ್ದ. ತಪ್ಪಿತಸ್ತ ಎಂದು ಕಾನೂನು ಶಿಕ್ಷೆಕೊಟ್ಟರು, ಕೊಟ್ಟ ಶಿಕ್ಷೆಯ ನಡುವೆ ಸನ್ನಡತೆಯನ್ನೇ ಮೈಗೂಡಿಸಿಕೊಂಡಿದ್ದ. ಆದರೆ ಜೈಲಿನಿಂದ ಹೊರಕ್ಕೆ ಬಂದ ನಂತರ ಬಯಲಿನ ಬದುಕಿಗೆ ಆತ ಹೊಂದಿಕೊಳ್ಳದೇ ಹೋದ, ಸುರೇಶ್ ಜೈಲಿನಿಂದ ಬಿಡುಗಡೆಯಾಗಿ ಒಂದು ವರ್ಷದ ಮೇಲಾಗಿತ್ತು. ಜೈಲಿನಿಂದ ಬಿಡುಗಡೆಗೊಂಡ ನಂತರ ಆತ ಕಾರ್ಪೆಂಟರ್ ವೃತ್ತಿಯನ್ನೇ ಮುಂದುವರೆಸಿದ. ಆದರೆ ಕೌಟುಂಬಿಕ ವಿಚಾರದಲ್ಲಿ ಸುರೇಶ್ ತುಂಬಾ ಖಿನ್ನನಾಗಿದ್ದ. ಅದೇ ವಿಚಾರದಲ್ಲಿ ತಾನೇ ಒಂದು ನಿರ್ಧಾರಕ್ಕೆ ಬಂದು, ಆ ದಿನ ಶಿವಮೊಗ್ಗ ತಾಳಗುಪ್ಪ ಟ್ರೈನ್ ಗೆ ಸಿಲುಕಿ ಸರೇಶ್ ಆತ್ಮಹತ್ಯೆ ಮಾಡಿಕೊಂಡ..ಆತನ ಸಾವಿನ ವಿಚಾರ ತಿಳಿದಾಗ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಎಲ್ಲರೂ ಬೇಸರಗೊಂಡರು, ಛೇ ಹೀಗಾಗಬಾರದಿತ್ತು! ಅಧಿಕಾರಿಗಳು ನೊಂದುಕೊಂಡಿದ್ದರು. ಅಮ್ಮಾ ಎಂದೇ ಕರೆಸಿಕೊಳ್ತಿದ್ದ ಶಿಕ್ಷಕಿಯ ಕಣ್ಣಂಚಲ್ಲಿ ಕಣ್ಣೀರಿದಿಳಿತ್ತು. ಮಾತು ಬಾರದೇ ಮೌನಕ್ಕೆ ಶರಣಾಗಿಬಿಟ್ಟಿದ್ದರು.
ಜೈಲಿನಿಂದ ಸುಧಾರಣೆಗೊಂಡು ಹೊಸಬದುಕು ಕಟ್ಟಿಕೊಳ್ಳಲು ಪ್ರಯತ್ನಿಸುವವರಿಗೆ ಮತ್ತೆ ಮನಸ್ಸು ಘಾಸಿಗೊಳಿಸುವ ಸನ್ನಿವೇಶಗಳು ಎದುರಾದ್ರೆ..ಏನಾಗಬಹುದು ಎಂಬುದಕ್ಕೆ ಸುರೇಶ್ ಉದಾಹರಣೆಯಾದ. ಗಣ್ಯರ ಚಿತ್ರಗಳನ್ನು ಬಿಡಿಸಿದ ಸುರೇಶನ ಬದುಕನ್ನ ವಿಧಿ ಬೇರೆಯದ್ದೆ ರೀತಿಯಲ್ಲಿ ಚಿತ್ರಿಸಿತ್ತು. ಉಸಿರಾಡುವ ಪ್ರಪಂಚದಿಂದ ಆತನನ್ನ ಅಳಿಸಿತ್ತು. ಆದರೆ ಆತ ಬಿಡಸಿದ ಚಿತ್ರಗಳನ್ನೂ ಮಾತನಾಡುತ್ತಿವೆ. ಆತನದ್ದೇ ಹೆಸರನ್ನ ಹೇಳುತ್ತಿದೆ. ಆರ್ಟ್ ಬೈ ಸುರೇಶ್…ಎಂದು..
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
HASHTAGS : #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga