ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ /ಶಿವಮೊಗ್ಗದಿಂದ ತಿರುಪತಿಗೆ ವಂದೇ ಭಾರತ್ ಎಕ್ಸ್ಪ್ರೆಸ್ ಆರಂಭಿಸುವ ಬಹುನಿರೀಕ್ಷಿತ ಪ್ರಸ್ತಾವನೆ ಮತ್ತೆ ಮುನ್ನೆಲೆಗೆ ಬಂದಿದೆ. ತಿರುಪತಿ ಸಂಸದ ಮದ್ದಿಲ ಗುರುಮೂರ್ತಿ ಅವರು SMET–TPTY–SMET ವಂದೇ ಭಾರತ್ ಎಕ್ಸ್ಪ್ರೆಸ್ ಕುರಿತ ತಮ್ಮ ಮನವಿಯನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸಕಾರಾತ್ಮಕವಾಗಿ ಪರಿಗಣಿಸಿದ್ದಾರೆ ಎಂದು ತಿಳಿಸಿದ್ದು, ಉಳಿದ ಔಪಚಾರಿಕ ಪ್ರಕ್ರಿಯೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ರೈಲು ಸೇವೆಯನ್ನು ಆರಂಭಿಸುವಂತೆ ರೈಲ್ವೆ ಮಂಡಳಿಯನ್ನು ಒತ್ತಾಯಿಸಿದ್ದಾರೆ.
ಶಿವಮೊಗ್ಗಕ್ಕೊಂದು ವಂದೇಭಾರತ್ ಟ್ರೈನ್ ಬರುತ್ತೆ ಎಂಬುದು ವಂದೇ ಭಾರತ್ ಟ್ರೈನ್ ಸಂಚಾರ ದೇಶದಲ್ಲಿ ಆರಂಭವಾದಾಗಿನಿಂದ ಇದೆ. ಈ ನಿಟ್ಟಿನಲ್ಲಿ ಸಂಸದ ಬಿ.ವೈ.ರಾಘವೆಂದ್ರರವರು ಕೇಂದ್ರ ರೈಲ್ವೆ ಸಚಿವರಿಗೆ ಆಗಾಗ ಪ್ರಸ್ತಾಪ ಮುಂದಿಡುತ್ತಲೇ ಬಂದಿದ್ಧಾರೆ. ಈ ನಿಟ್ಟಿನಲ್ಲಿ ಕೇಂದ್ರ ಸಚಿವ ಸೋಮಣ್ಣ ಸಹ, ಹಲವು ಸಲ ಸಂಸದರ ಬೇಡಿಕೆಗೆ ಅಸ್ತು ಎಂದಿದ್ದರಷ್ಟೆ ಅಲ್ಲದೆ ರೈಲ್ವೆ ಸಚಿವರಿಗೂ ಈ ನಿಟ್ಟಿನಲ್ಲಿ ತಮ್ಮ ಕಡೆಯಿಂದ ಒತ್ತಡ ಹೇರಿದ್ದರು.
ಆದಾಗ್ಯು ಈಗ ಬರುತ್ತೆ ಆಗ ಬರುತ್ತೆ ಶಿವಮೊಗ್ಗಕ್ಕೆ ಎನ್ನಲಾಗುತ್ತಿದ್ದ ವಂದೇ ಭಾರತ್ ಎಕ್ಸ್ಪ್ರೆಸ್ ಇಲ್ಲಿವರೆಗೂ ಬಂದಿಲ್ಲ. 2025ರ ಜೂನ್ 27ರ ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗದ ಅಧಿಕೃತ ಪತ್ರವೊಂದರಲ್ಲಿ SMET–TPTY–SMET ವಂದೇ ಭಾರತ್ ರೈಲು ಆರಂಭಿಸುವ ತಾತ್ಕಾಲಿಕ ಕ್ರಿಯಾ ಯೋಜನೆ ದಾಖಲಾಗಿದೆ.ಸದ್ಯ ಈ ಪತ್ರವೂ ಸಹ ವೈರಲ್ ಆಗುತ್ತಿದೆ. ಕೋಟೆಗಂಗೂರು ಹೊಸ ಟರ್ಮಿನಲ್ನಲ್ಲಿ ರೈಲುಗಳನ್ನು ನಿರ್ವಹಿಸುವ ಕ್ರಿಯಾ ಯೋಜನೆಗೆ ಸಂಬಂಧಿಸಿದ ಈ ಪತ್ರದಲ್ಲಿ ಶಿವಮೊಗ್ಗ ಟೌನ್ ಮತ್ತು ತಿರುಪತಿ ನಡುವೆ ಹೊಸ ವಂದೇ ಭಾರತ್ ಎಕ್ಸ್ಪ್ರೆಸ್ ಆರಂಭಿಸುವ ಪ್ರಸ್ತಾವನೆ ಸೇರಿಸಲಾಗಿದೆಅಲ್ಲದೆ tentative action plan ನೀಡಿದ್ದ ಪತ್ರದಲ್ಲಿ, ಟ್ರೈನ್ ಅಂದಾಜಿನ ಸಮಯವನ್ನ ಸಹ ನೀಡಲಾಗಿತ್ತು. ಇದೇ ದಾಖಲೆಯಲ್ಲಿ 12089/12090 ಬೆಂಗಳೂರು–ಶಿವಮೊಗ್ಗ ರೈಲಿನ ಪ್ರಾಥಮಿಕ ನಿರ್ವಹಣೆಯನ್ನು ಕೋಟೆಗಂಗೂರಿಗೆ ಸ್ಥಳಾಂತರಿಸುವ ಸಾಧ್ಯತೆಯನ್ನೂ ಪರಿಶೀಲಿಸಲಾಗಿದೆ. ಆನಂತರ ತಿರುಪತಿಗೆ ಶಿವಮೊಗ್ಗದಿಂದ ವಂದೇಭಾರತ್ ಸಂಚರಿಸಲಿದೆ ಎಂಬ ವಿಚಾರವನ್ನ ಬಹುತೇಕರು ಹೇಳಿದರಾದರೂ ಇದುವರಗೂ ವಂದೇ ಭಾರತ್ ಟ್ರೈನ್ ಶಿವಮೊಗ್ಗಕ್ಕೆ ಬರಲಿಲ್ಲ.
ಇದೀಗ ವಂದೇ ಭಾರತ್ ಎಕ್ಸ್ಪ್ರೆಸ್ ಕುರಿತಾದ ತಿರುಪತಿ ಸಂಸದರ ಪ್ರಸ್ತಾಪ ಈ ವಿಚಾರಕ್ಕೆ ಹೊಸ ತಿರುವಿನ ಜೊತೆಗೆ ಹೆಚ್ಚು ವೇಗ ತಂದಿಟ್ಟಿದೆ. ಇಲ್ಲಿವರೆಗೂ ಸಂಸದ ಬಿ.ವೈ ರಾಘವೇಂದ್ರರ ಒತ್ತಾಯಕ್ಕೆ ಸೀಮಿತವಾಗಿದ್ದ ರೈಲಿನ ತಿರುಪತಿ ಸಂಸದ ಮದ್ದಿಲ ಗುರುಮೂರ್ತಿ ನೇರವಾಗಿ ರೈಲ್ವೆ ಸಚಿವರಿಗೆ ಧನ್ಯವಾದ ಹೇಳಿ, ‘remaining formalities’ ಅನ್ನು ಪೂರ್ಣಗೊಳಿಸಿ ಸೇವೆ ಆರಂಭಿಸುವಂತೆ ರೈಲ್ವೆ ಮಂಡಳಿಯನ್ನು ಒತ್ತಾಯಿಸಿರುವುದು ಹೊಸ ಬೆಳವಣಿಗೆ. ಅವರ ಹೇಳಿಕೆಯಲ್ಲಿ ಶಿವಮೊಗ್ಗ, ಬೆಂಗಳೂರು ಮತ್ತು ತಿರುಪತಿ ನಡುವಿನ ಸಂಪರ್ಕವನ್ನು ಈ ರೈಲು ಬಲಪಡಿಸಲಿದೆ ಎಂದು ತಿಳಿಸಲಾಗಿದೆ.ತಿರುಪತಿಗೆ ತೆರಳುವ ಯಾತ್ರಿಕರು ಮಾತ್ರವಲ್ಲದೆ ವಿದ್ಯಾರ್ಥಿಗಳು, ಚಿಕಿತ್ಸೆಗೆ ಹೋಗುವವರು ಹಾಗೂ ಸಾಮಾನ್ಯ ಪ್ರಯಾಣಿಕರಿಗೂ ಹೊಸ ರೈಲು ಅನುಕೂಲವಾಗಲಿದೆ ಎಂಬುದು ಅವರ ಅಭಿಪ್ರಾಯವಾಗಿದೆ.
“ಶಿವಮೊಗ್ಗ–ತಿರುಪತಿ–ಶಿವಮೊಗ್ಗ (SMET–TPTY–SMET) ವಂದೇ ಭಾರತ್ ಎಕ್ಸ್ಪ್ರೆಸ್ ಆರಂಭಿಸುವ ನನ್ನ ಮನವಿಯನ್ನು ಸಕಾರಾತ್ಮಕವಾಗಿ ಪರಿಗಣಿಸಿರುವ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಧನ್ಯವಾದಗಳು. ಉಳಿದಿರುವ ಔಪಚಾರಿಕ ಪ್ರಕ್ರಿಯೆಗಳನ್ನು ರೈಲ್ವೆ ಮಂಡಳಿ ತ್ವರಿತವಾಗಿ ಪೂರ್ಣಗೊಳಿಸಿ, ಸೇವೆಯನ್ನು ಆದಷ್ಟು ಬೇಗ ಆರಂಭಿಸಬೇಕು ಈ ರೈಲು ಆರಂಭವಾದರೆ ಶಿವಮೊಗ್ಗ–ಬೆಂಗಳೂರು–ತಿರುಪತಿ ಸಂಪರ್ಕ ಬಲವಾಗುತ್ತದೆ. ವಿಶೇಷವಾಗಿ ತಿರುಪತಿ ಯಾತ್ರಿಕರು, ವಿದ್ಯಾರ್ಥಿಗಳು, ಚಿಕಿತ್ಸೆಗೆ ತೆರಳುವ ರೋಗಿಗಳು ಹಾಗೂ ಇತರ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ
ತಿರುಪತಿ ಸಂಸದ ಮದ್ದಿಲ ಗುರುಮೂರ್ತಿ
