ಮಲೆನಾಡು ಟುಡೆ ಸುದ್ದಿ | ಶಿವಮೊಗ್ಗ : ರಿಪ್ಪನ್ಪೇಟೆ ಸಮೀಪದ ಹೆದ್ದಾರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಂಬಳ್ಳಿ ದಟ್ಟ ಅರಣ್ಯ ಪ್ರದೇಶದಲ್ಲಿ ತಮ್ಮ ಮಾರುತಿ ಸ್ವಿಫ್ಟ್ ಕಾರನ್ನು ಬಿಟ್ಟು ನಾಪತ್ತೆಯಾಗಿದ್ದ ಕುಡುಮಲ್ಲಿಗೆ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮದನ್ ಅವರು ಭಟ್ಕಳದಲ್ಲಿ ಸುರಕ್ಷಿತವಾಗಿ ಪತ್ತೆಯಾಗಿದ್ದು, ಇದೀಗ ಮನೆಗೆ ಮರಳಿದ್ದಾರೆ
ಶುಕ್ರವಾರ ತೀರ್ಥಹಳ್ಳಿಯ ತಮ್ಮ ನಿವಾಸದಿಂದ ಹೊರಟಿದ್ದ ಮದನ್ ಅವರು ದಿಢೀರ್ ನಾಪತ್ತೆಯಾಗಿದ್ದರು. ಬಳಿಕ ಜಂಬಳ್ಳಿ ಅರಣ್ಯದಲ್ಲಿ ಪತ್ತೆಯಾದ ಅವರ ಕಾರಿನಲ್ಲಿ ಕೀಲಿಕೈ, ಮೊಬೈಲ್ ಫೋನ್ ಹಾಗೂ ಸೊಸೈಟಿಯ ಮಹತ್ವದ ಲೆಕ್ಕದ ಪುಸ್ತಕಗಳು ಪತ್ತೆಯಾಗಿದ್ದು, ಕುಟುಂಬಸ್ಥರು ಹಾಗೂ ಸ್ಥಳೀಯರಲ್ಲಿಆತಂಕ ಮೂಡಿಸಿತ್ತು. ಸೊಸೈಟಿಯಲ್ಲಿ ಕೇಳಿಬಂದಿದ್ದ ಭ್ರಷ್ಟಾಚಾರದ ದೂರುಗಳ ಬೆನ್ನಲ್ಲೇ ಈ ಘಟನೆ ನಡೆದಿದ್ದರಿಂದ ಹಲವು ಅನುಮಾನಗಳು ವ್ಯಕ್ತವಾಗಿದ್ದವು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಹಾಗೂ ಕುಟುಂಬಸ್ಥರು ಅರಣ್ಯದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದರು
ಇದೀಗ ಮದನ್ ಸುರಕ್ಷಿತವಾಗಿ ಮನೆಗೆ ಮರಳಿರುವುದನ್ನು ಸೊಸೈಟಿಯ ನಿರ್ದೇಶಕ ಸಂಜಯ್ ಹಾಗೂ ಕುಟುಂಬಸ್ಥರು ದೃಢಪಡಿಸಿದ್ದು, ಎಲ್ಲರೂ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ, ನಿರ್ಜನ ಅರಣ್ಯದಲ್ಲೇ ಕಾರು, ಮೊಬೈಲ್ ಹಾಗೂ ದಾಖಲೆಗಳನ್ನು ಬಿಟ್ಟು ಅವರು ಭಟ್ಕಳಕ್ಕೆ ತಲುಪಿದ್ದು ಹೇಗೆ ಮತ್ತು ಏಕೆ ಎಂಬ ಪ್ರಶ್ನೆಗಳಿಗೆ ಪೊಲೀಸ್ ತನಿಖೆಯಿಂದಷ್ಟೇ ಉತ್ತರ ಸಿಗಬೇಕಿದೆ.
