ಮಲೆನಾಡು ಟುಡೆ ಸುದ್ದಿ | ಶಿವಮೊಗ್ಗ : ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹ ಧಾಮದಲ್ಲಿ ಜನಿಸಿ ಬೆಳೆದಿದ್ದ 17 ವರ್ಷ ಪ್ರಾಯದ ದಶಮಿ ಹೆಸರಿನ ಹೆಣ್ಣು ಹುಲಿ ವಯೋಸಹಜ ಆರೋಗ್ಯ ಸಮಸ್ಯೆಗಳಿಂದಾಗಿ ನಿನ್ನೆ ಕೊನೆಯುಸಿರೆಳೆದಿದೆ.
ದಶಮಿ ಹುಲಿ ವಯೋಸಹಜ ಕಾಯಿಲೆಯಿಂದ ಬಳಲುತ್ತಿತ್ತು, ಹಾಗೆಯೇ ಹುಲಿಗೆ ದಿಢೀರನೆ ಪಾರ್ಶ್ವವಾಯು ಕಾಣಿಸಿಕೊಂಡಿತ್ತು. ಈ ಹಿನ್ನೆಲೆ ಕಳೆದ 10 ದಿನಗಳಿಂದ ದಶಮಿ ಹುಲಿಗೆ ಮೃಗಾಲಯದ ವೈದ್ಯ ಸಿಬ್ಬಂದಿ ನಿರಂತರ ಚಿಕಿತ್ಸೆ ನೀಡುತ್ತಿದ್ದರು. ಆದರೆ, ವಯೋಸಹಜ ದೈಹಿಕ ಬಲಹೀನತೆಯಿಂದಾಗಿ ಚಿಕಿತ್ಸೆ ಫಲಕಾರಿಯಾಗದೆ ಹುಲಿ ಸಾವನ್ನಪ್ಪಿದೆ .
ಶಿವಮೊಗ್ಗ ಪಶುವೈದ್ಯಕೀಯ ಕಾಲೇಜಿನ ರೋಗಶಾಸ್ತ್ರ ವಿಭಾಗದ ವೈದ್ಯರು, ಬೆಂಗಳೂರಿನ IAH&VB ಸಂಸ್ಥೆಯ ಶಿವಮೊಗ್ಗ ವಿಭಾಗದ ತಜ್ಞರು ಹಾಗೂ ಶಿವಮೊಗ್ಗ ಮೃಗಾಲಯದ ಪಶುವೈದ್ಯಾಧಿಕಾರಿಗಳ ತಂಡವು ಹುಲಿಯ ಮರಣೋತ್ತರ ಪರೀಕ್ಷೆಯನ್ನು ಪೂರ್ಣಗೊಳಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
