ಮಲೆನಾಡು ಟುಡೆ ಸುದ್ದಿ /ಶಿವಮೊಗ್ಗ; ಇತ್ತೀಚೆಗೆ ಸಾಗರ ತಾಲೂಕಿನ ಉಳ್ಳೂರು ಗ್ರಾಮದಲ್ಲಿ ಚಾಲಕನೋರ್ವ ಮದ್ಯಪಾನ ಮಾಡಿ ಲಾರಿಯನ್ನು ಕೆರೆಗೆ ಇಳಿಸಿದ ಬೆನ್ನಲ್ಲೇ, ಶಿವಮೊಗ್ಗದಲ್ಲಿ ಕ್ಯಾಂಟರ್ ಚಾಲಕನೋರ್ವ ಮದ್ಯಪಾನ ಮಾಡಿ ಭತ್ತ ತುಂಬಿದ್ದ ಲಾರಿಯನ್ನು ಪಲ್ಟಿ ಮಾಡಿದ್ದಾನೆ. ಶಿವಮೊಗ್ಗದ ಇಂದ್ರನಗರ- ಮಳಲಿಕೊಪ್ಪ ಬಳಿ ಈ ಘಟನೆ ಸಂಭವಿಸಿದೆ.
ಶಿವಮೊಗ್ಗ ನಗರದ ಹೊರವಲಯದ ಮತ್ತೂರು ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಭತ್ತ ತುಂಬಿದ್ದ ಕ್ಯಾಂಟರ್ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಮಗುಚಿಬಿದ್ದಿದೆ. ಅಪಘಾತದ ರಭಸಕ್ಕೆ ಕ್ಯಾಂಟರ್ನಲ್ಲಿದ್ದ 50 ಕ್ಕೂ ಹೆಚ್ಚು ಭತ್ತದ ಚೀಲಗಳು ರಸ್ತೆಗೆ ಬಿದ್ದು ಒಡೆದುಕೊಂಡಿದ್ದು, ಕ್ವಿಂಟಾಲ್ ಗಟ್ಟಲೇ ಭತ್ತ ರಸ್ತೆ ಪಾಲಾಗಿ ಚೆಲ್ಲಾಪಿಲ್ಲಿಯಾಗಿದೆ.
ಇನ್ನು ಅಪಘಾತ ಸಂಭವಿಸಿದ ತಕ್ಷಣ ವಾಹನದೊಳಗೆ ಸಿಲುಕಿಕೊಂಡಿದ್ದ ಚಾಲಕ ಹಾಗೂ ಕ್ಲೀನರ್ ಅನ್ನು ಸ್ಥಳೀಯರ ನೆರವಿನಿಂದ ರಕ್ಷಿಸಲಾಗಿದ್ದು, ಗಾಯಾಳುಗಳನ್ನು ತಕ್ಷಣವೇ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಚಾಲಕ ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದ ಶಂಕೆ ವ್ಯಕ್ತವಾಗಿದ್ದು,ಘಟನಾ ಸ್ಥಳಕ್ಕೆ ತುಂಗಾ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
