ಮಲೆನಾಡು ಟುಡೆ ಸುದ್ದಿ/ ಶಿವಮೊಗ್ಗದಲ್ಲಿ ಆಶ್ರಯವಿಲ್ಲದೆ ಕಷ್ಟದಲ್ಲಿದ್ದ ನಿರಾಶ್ರಿತ ಮಹಿಳೆಯೊಬ್ಬರನ್ನು ಶಿವಮೊಗ್ಗದ ಅಕ್ಕ ಪಡೆಯ ಮಹಿಳಾ ಪೊಲೀಸರು ಸುರಕ್ಷಿತವಾಗಿ ರಕ್ಷಿಸಿ ಆಶ್ರಯ ಕೇಂದ್ರಕ್ಕೆ ಸೇರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಶಿವಮೊಗ್ಗ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಆವರಣದಲ್ಲಿ ಅಕ್ಕ ಪಡೆಯ ಅಧಿಕಾರಿಗಳು ಕರ್ತವ್ಯದ ನಿಮಿತ್ತ ಗಸ್ತು ತಿರುಗುತ್ತಿದ್ದಾಗ, ಮಹಿಳೆಯೊಬ್ಬರು ಹಲವು ಸಮಯದಿಂದ ಒಂಟಿಯಾಗಿ ಕುಳಿತಿರುವುದನ್ನು ಗಮನಿಸಿದ್ದಾರೆ. ತಕ್ಷಣ ಆಕೆಯ ಬಳಿ ತೆರಳಿ ವಿಚಾರಿಸಿದಾಗ, ಆಕೆಯ ಪರಿಸ್ಥಿತಿ ಬೆಳಕಿಗೆ ಬಂದಿದೆ.
ವಿಚಾರಣೆಯ ವೇಳೆ ಆ ಮಹಿಳೆಯು ತನ್ನ ಸ್ವಂತ ಊರು ತುಮಕೂರು ಎಂದು ತಿಳಿಸಿದ್ದು, ತಾನು ಸಂಪೂರ್ಣ ಅನಾಥೆ, ನೋಡಿಕೊಳ್ಳಲು ಯಾರೂ ಇಲ್ಲದ ಕಾರಣ ಕಳೆದ ಎರಡು-ಮೂರು ದಿನಗಳಿಂದ ಬಸ್ ನಿಲ್ದಾಣದಲ್ಲೇ ಕಾಲ ಕಳೆಯುತ್ತಿರುವುದಾಗಿ ತನ್ನ ಅಳಲನ್ನು ತೋಡಿಕೊಂಡಿದ್ದಾರೆ.
ಮಹಿಳೆಯ ಸುರಕ್ಷತೆ ಹಾಗೂ ಭದ್ರತೆಯ ಹಿತದೃಷ್ಟಿಯಿಂದ ತಕ್ಷಣ ಸ್ಪಂದಿಸಿದ ಅಕ್ಕ ಪಡೆಯ ಸಿಬ್ಬಂದಿ, ಆಕೆಗೆ ಸಾಂತ್ವನ ಹೇಳಿ ಸುರಕ್ಷಿತವಾಗಿ ಒನ್ ಸ್ಟಾಪ್ ಸೆಂಟರ್ ಆಶ್ರಯ ಧಾಮಕ್ಕೆ ತಲುಪಿಸಿ ದಾಖಲಿಸಿದ್ದಾರೆ.
