ಶಿವಮೊಗ್ಗ: ಕೆಲವೊಂದು ಘಟನೆಗಳಲ್ಲಿ ಅಕ್ಕಪಡೆ ಸಿಬ್ಬಂದಿ ತೋರುವ ಕಾಳಜಿ ಹಾಗೂ ಮಾನವೀಯತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತದೆ. ಅಂತಹದ್ದೇ ಮತ್ತೊಂದು ಘಟನೆ ಶಿವಮೊಗ್ಗದಲ್ಲಿ ನಡೆದಿದ್ದು, ಅಡ್ವೋಕೇಟ್ ಎಂದು ಹೇಳಿಕೊಂಡು ನ್ಯಾಯಾಲಯಕ್ಕೆ ಹೋಗುತ್ತಿದ್ದ ಮಹಿಳೆಯೊಬ್ಬರನ್ನು ಅಕ್ಕಪಡೆ ಸಿಬ್ಬಂದಿ ರಕ್ಷಿಸಿದ್ದಾರೆ.
ಅಯ್ಯೋ, ನ್ಯಾಯಾಲಯಕ್ಕೆ ಅಡ್ವೋಕೇಟ್ ಹೋಗುವುದರಲ್ಲಿ ತಪ್ಪೇನಿದೆ ಎಂದು ಈ ಸಂದರ್ಭದಲ್ಲಿ ಅನ್ನಿಸಬಹುದು. ಆದರೆ ವಿಚಾರವೇ ಬೇರೆಯಿದೆ. ಅದೇನೆಂದರೆ ಈ ಮಹಿಳೆ ಸ್ವಲ್ಪ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಪ್ರತಿದಿನ ನ್ಯಾಯಾಲಯಕ್ಕೆ ತೆರಳಿ ನಾನು ಅಡ್ವೋಕೇಟ್ ಎಂದು ಮಾನಸಿಕ ಅಸ್ವಸ್ಥರಂತೆ ವರ್ತಿಸುತ್ತಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯರು ಈ ಮಾಹಿತಿಯನ್ನು ಅಕ್ಕಪಡೆ ಸಿಬ್ಬಂದಿಗೆ ತಿಳಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಅಕ್ಕಪಡೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ. ನಂತರ ಮಹಿಳೆಯ ಬಳಿ ಊರಿನ ವಿಳಾಸ ಕೇಳಿದಾಗ, ಆಕೆ ತನ್ನ ವಿಳಾಸ ನಿದಿಗೆ ಗ್ರಾಮಎಂದು ತಿಳಿಸಿದ್ದಾಳೆ. ಈ ಮಹಿಳೆಯ ಕುರಿತಾಗಿ ಊರಿನವರ ಬಳಿ ವಿಚಾರಿಸಿದಾಗ, ಆಕೆ ಪತಿಯಿಂದ ದೂರವಾದ ನಂತರ ಈ ರೀತಿ ವರ್ತಿಸುತ್ತಿದ್ದಾಳೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯ ಸುರಕ್ಷಿತ ಆಶ್ರಯಕ್ಕಾಗಿ ಆಕೆಯನ್ನು ರಾಜ್ಯ ಮಹಿಳಾ ನಿಲಯಕ್ಕೆ ಸೇರಿಸಿ ಅಕ್ಕಪಡೆ ಸಿಬ್ಬಂದಿ ಮಾನವೀಯತೆ ಮೆರೆದಿದ್ದಾರೆ.
