ಮಲೆನಾಡು ಟುಡೆ ಸುದ್ದಿ / ಸಾಗರ / ಸಾಗರ ತಾಲೂಕಿನ ಮಡಸೂರು ಸಮೀಪದ (Madasuru in Sagara) ಸಿಂಪೆಕೆರೆ ಬಳಿ ಆನಂದ ಪೂಜಾರಿ (38) ಎಂಬುವವರ ಮೃತದೇಹ ನಿನ್ನೆ ದಿನ ಪತ್ತೆಯಾಗಿತ್ತು. ಈ ಬಗ್ಗೆ ಮಲೆನಾಡು ಟುಡೆ ಸುದ್ದಿ ಸಹ ಮಾಡಿತ್ತು. ಇದೀಗ ಘಟನೆ ಸಂಬಂಧಿಸಿದಂತೆ ಮತ್ತಷ್ಟು ಅಪ್ಡೇಟ್ ಸಿಕ್ಕಿದೆ. ಇದೊಂದು ಕೊಲೆ ಎಂಬ ಸಂಶಯ ವ್ಯಕ್ತವಾಗಿದ್ದು, ಘಟನೆಯಲ್ಲಿ ದುಷ್ಕರ್ಮಿಗಳು ಆನಂದ ಪೂಜಾರಿಯವರ ಮೆಲೆ ಹಿಂದಿನಿಂದ ಬಂದು ಮಚ್ಚಿನಿಂದ ಹೊಡೆದು ಕೊಲೆ ಮಾಡಿರಬಹುದು ಎಂದು ಪೊಲೀಸರು ಅನುಮಾನಿಸಿದ್ದಾರೆ.
ಮೂಲತಃ ಹೆಗ್ಗೋಡು ಸಮೀಪದ ಮುಂಡಿಗೆಸರ ಗ್ರಾಮದವರಾಗಿದ್ದ ಆನಂದ ಪೂಜಾರಿ, ಸುಮಾರು 15 ವರ್ಷಗಳ ಹಿಂದೆ ಮಡಸೂರು ಗ್ರಾಮದ ಯುವತಿಯೊಬ್ಬರನ್ನು ಪ್ರೀತಿಸಿ ವಿವಾಹವಾಗಿದ್ದರು. ಮದುವೆಯ ನಂತರ ಮಡಸೂರು ಗ್ರಾಮದಲ್ಲಿಯೇ ವಾಸವಾಗಿದ್ದರು ಎಂದು ಸ್ಥಳೀಯ ಮೂಲಗಳು ತಿಳಿಸಿದೆ. ಅಡಿಕೆ ತೋಟಗಳಲ್ಲಿ ಸಂಬಂಧಿಸಿದ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಆನಂದ ಪೂಜಾರಿ ಕೊನೆ ಕೊಯ್ಯುವುದು, ಔಷಧಿ ಹೊಡೆಯುವುದು ಸೇರಿದಂತೆ ಅದು ಇದು ಕೆಲಸ ಮಾಡ್ತಿದ್ರು,.
ಮೊನ್ನೆ ದಿನ ಅಂದರೆ ಮಂಗಳವಾರ ರಾತ್ರಿ ಸುಮಾರು 8 ಗಂಟೆ ವೇಳೆಗೆ ಆನಂದ ಪೂಜಾರಿ ಅವರ ಮೊಬೈಲ್ಗೆ ಯಾರೋ ಕರೆ ಮಾಡಿದ್ದರು ಎನ್ನಲಾಗಿದೆ. ಕರೆ ಬಂದ ಬಳಿಕ, ಹೊರಗೆ ಹೋಗಿ ಬರುತ್ತೇನೆ ಎಂದು ಮನೆಯವರಿಗೆ ತಿಳಿಸಿ ಬೈಕ್ ತೆಗೆದುಕೊಂಡು ಮನೆಯಿಂದ ಹೊರಟಿದ್ದರು. ಆದರೆ ರಾತ್ರಿ ತಡವಾದರೂ ಆನಂದ ಪೂಜಾರಿ ಮನೆಗೆ ವಾಪಸ್ ಬಂದಿರಲಿಲ್ಲ. ಹೀಗಾಗಿ ಕುಟುಂಬದವರು ಹುಡುಕಾಡಿದ್ದಾರೆ. ಮೊಬೈಲ್ಗೆ ಕಾಲ್ ಮಾಡಿದ್ದಾರೆ. ಮೊಬೈಲ್ ಸ್ವಿಚ್ ಆಫ್ ಬಂದಿದೆ. ಆನಂತರ ಮಡಸೂರು ಗ್ರಾಮದ ಕೆರೆ ಪಕ್ಕದ ರಸ್ತೆಯ ಬದಿಯಲ್ಲಿ ಬೈಕ್ ಸಿಕ್ಕಿದೆ. ಅಲ್ಲಿಯೇ ಮುಂದೆ ಹುಡುಕಾಡಿದಾಗ ಆನಂದ ಪೂಜಾರಿ ಅವರ ಶವ ಪತ್ತೆಯಾಗಿದೆ.
ಇನ್ನೂ ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ, ಆನಂದ ಪೂಜಾರಿ ಮೇಲೆ ಯಾರೋ ಹಿಂದಿನಿಂದ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆದರೆ ಕೊಲೆಗೆ ಕಾರಣವೇನು, ಆನಂದ ಪೂಜಾರಿ ಅವರಿಗೆ ರಾತ್ರಿ ಕರೆ ಮಾಡಿದ್ದವರು ಯಾರು, ಅವರು ಮನೆಯಿಂದ ಹೊರಟ ನಂತರ ಎಲ್ಲಿಗೆ ತೆರಳಿದ್ದರು ಎಂಬ ವಿಚಾರಗಳು ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ.
