Malathi River Near Agumbe / ಮಲೆನಾಡು ಟುಡೆ ಸುದ್ದಿ / ತೀರ್ಥಹಳ್ಳಿ / ಜಿಲ್ಲೆಯಲ್ಲಿ ಮಳೆ ವ್ಯಾಪಕವಾದ ಬೆನ್ನಲ್ಲೆ ನದಿಪಾತ್ರದಲ್ಲಿ ಅಪಾಯಗಳು ಹೆಚ್ಚು ಸಂಭವಿಸುತ್ತಿದೆ. ಇದಕ್ಕೆ ಪೂರಕ ಎಂಬಂತೆ ನಿನ್ನೆ ದಿನ ಸೋಮವಾರ, ಮಾಲತಿ ನದಿಯಲ್ಲಿ ವೃದ್ಧರೊಬ್ಬರು ಕೊಚ್ಚಿ ಹೋಗಿದ್ದಾರೆ ಎಂಬ ವರದಿ ಹೊರಬಿದ್ದಿದೆ.
ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆ ಸಮೀಪದ ಕೇಳೂರು ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಮಾಲತಿ ನದಿಯಲ್ಲಿ ನೀರಿನ ಸೆಳೆತಕ್ಕೆ ಸಿಲುಕಿ 65 ವರ್ಷದ ವೃದ್ಧರೊಬ್ಬರು ಕೊಚ್ಚಿ ಹೋಗಿರುವ ಸಾಧ್ಯತೆಗಳಿವೆ ಎಂದು ಶಂಕಿಸಲಾಗಿದ್ದು, ಅವರ ಪತ್ತೆಗಾಗಿ ಪೊಲೀಸ್ ಇಲಾಖೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ.

ಆಗುಂಬೆ ಸಮೀಪದಲ್ಲಿ ಬರುವ ಅರೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೇಳೂರು ಗ್ರಾಮದ ನಿವಾಸಿ 65 ವರ್ಷ ವಯಸ್ಸಿನ ರಾಮಪ್ಪ ಎಂಬವರು ಮಿಸ್ಸಿಂಗ್ಆಗಿದ್ದಾರೆ. ತೋಟದ ಕೆಲಸಕ್ಕೆ ಹೋದವರು ವಾಪಸ್ ಆಗಿರಲಿಲ್ಲ. ಹೀಗಾಗಿ ಮನೆಯವರೆಲ್ಲಾ ಹುಡುಕಾಡಿದ್ದಾರೆ. ಕೊನೆಗೆ ತೋಟದ ಪಕ್ಕದಲ್ಲಿಯೇ ಹರಿಯುವ ಹೊಳೆ ದಂಡೆ ಮೇಲೆ ರಾಮಪ್ಪ ಅವರಿಗೆ ಸೇರಿದ ಬಟ್ಟೆ ಹಾಗೂ ಚಪ್ಪಲಿ ಸಿಕ್ಕಿವೆ.
ಇದರಿಂದಾಗಿ ನದಿಗೆ ಕಾಲು ತೊಳೆಯಲು ಇಳಿದಾಗ ನೀರು ಪಾಲಾಗಿರಬೇಕು ಎಂದು ಅನುಮಾನಿಸಲಾಗಿದೆ.ಇನ್ನೂ ವಿಷಯ ತಿಳಿದು ಆಗುಂಬೆ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಶಿವಣ್ಣ ಗೌಡ ಪಾಟೀಲ್ ಹಾಗೂ ಅಗ್ನಿಶಾಮಕ ದಳದ ಅಧಿಕಾರಿ ಶಿವಕುಮಾರ್ ನೇತೃತ್ವದ ಸಿಬ್ಬಂದಿ ತಂಡ ಸ್ಥಳಕ್ಕೆ ಭೇಟಿ ನೀಡಿದೆ. ಧಾರಾಕಾರ ಮಳೆ ನಡುವೆ ರಾಮಪ್ಪ ಅವರ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿಸಿತ್ತು,. ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿರುವುದರಿಂದ ವೃದ್ಧರಿಗಾಗಿ ಹುಡುಕಾಟ ಕೂಡ ಕಷ್ಟವಾಗಿದೆ. ಇವತ್ತು ಕೂಡ ಶೋಧ ಕಾರ್ಯ ಮುಂದುವರಿಯಲಿದೆ.
