ಹಣದ ಆಮಿಷ, ಬೆದರಿಕೆ, ಅಪಘಾತ , ಏನಿದು ಬಂಗಾರಮಕ್ಕಿ ಮಾರುತಿ ಗುರೂಜಿ ಆರೋಪ!

This Article Written by / ajjimane ganesh / ಜುಲೈ 2, 2026

Bangaramakki Guruji Alleges Bribery and Threats

Bangaramakki Guruji / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಮಲೆನಾಡು ಭಾಗದಲ್ಲಿ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿ ಹೋರಾಟವನ್ನು ಹತ್ತಿಕ್ಕಲು ಅಧಿಕಾರಿಗಳು ಹಾಗೂ ಖಾಸಗಿ ಕಂಪನಿಗಳು ವಾಮಮಾರ್ಗವನ್ನು ಅನುಸರಿಸುತ್ತಿವೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಈ ಬಗ್ಗೆ ಸ್ವತಃ ಬಂಗಾರಮಕ್ಕಿ ಮಾರುತಿ ಗುರೂಜಿ ಆರೋಪಿಸಿದ್ದಾರೆ.

ಶಿವಮೊಗ್ಗ ಪ್ರೆಸ್ ಟ್ರಸ್ಟ್‌ನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಇಂದು ಮಾತನಾಡಿದ ಬಂಗಾರಮಕ್ಕಿ ಗುರೂಜಿ ಅವರು ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿ) ಅಧಿಕಾರಿಗಳು ಹಾಗೂ ಯೋಜನೆಯ ಬೆನ್ನಿಗಿರುವ ಖಾಸಗಿ ಸಂಸ್ಥೆಗಳ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ. ಪರಿಸರ ಉಳಿಸುವ ಈ ಹೋರಾಟದಿಂದ ಹಿಂದೆ ಸರಿಯುವಂತೆ ಮಾಡಲು ಕೋಟ್ಯಂತರ ರೂಪಾಯಿ ಹಣದ ಆಮಿಷವನ್ನು ಒಡ್ಡಲಾಗುತ್ತಿದೆ ಹಾಗೂ ಇದಕ್ಕೆ ಬಗ್ಗದಿದ್ದಾಗ ಪ್ರಾಣ ಬೆದರಿಕೆ ತಂತ್ರಗಳನ್ನು ಪ್ರಯೋಗಿಸಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.

ಬಂಗಾರಮಕ್ಕಿ ಗುರೂಜಿಯವರ ಪ್ರಮುಖ ಆರೋಪ

  • ಕೆಪಿಸಿ ಅಧಿಕಾರಿಗಳೇ ಖುದ್ದಾಗಿ ಬಂದು ಹಣದ ಆಮಿಷ ಒಡ್ಡಿದ್ದಾರೆ ಎಂದು ಗುರೂಜಿ ಅವರು ನೇರವಾಗಿ ಆರೋಪಿಸಿದ್ದಾರೆ.
  • ಹೋರಾಟದ ನೇತೃತ್ವ ವಹಿಸಿರುವ ಪ್ರಮುಖರಿಗೆ ದೊಡ್ಡ ಮೊತ್ತದ ಹಣವನ್ನು ನೀಡಿ, ಸ್ಥಳವನ್ನು ಬಿಟ್ಟುಕೊಡುವಂತೆ ಹಾಗೂ ಹೋರಾಟವನ್ನು ಕೈಬಿಡುವಂತೆ ಒತ್ತಡ ಹೇರಲಾಗುತ್ತಿದೆ.
  • ಆದರೆ, ಮಲೆನಾಡಿನ ಪರಿಸರ ಹಾಗೂ ಜನರ ಭವಿಷ್ಯದ ದೃಷ್ಟಿಯಿಂದ ನಾವು ಯಾವುದೇ ರೀತಿಯ ದುಡ್ಡಿನ ಆಮಿಷಕ್ಕೆ ಒಳಗಾಗುವುದಿಲ್ಲ ಎಂದಿದ್ದಾರೆ.
  • ಈ ಭೂಮಿ ಹಾಗೂ ಪರಿಸರವನ್ನು ಉಳಿಸಿಕೊಳ್ಳುವುದಕ್ಕಾಗಿ ನಮ್ಮ ಪ್ರಾಣ ಬೇಕಾದರೂ ತೆತ್ತೇವು, ಆದರೆ ಹಣದ ಆಸೆಗೆ ಬಲಿಯಾಗಿ ಮಲೆನಾಡನ್ನು ಮಾರಿಕೊಳ್ಳುವ ಪ್ರಶ್ನೆಯೇ ಇಲ್ಲ
  • ಹಣದ ಮೂಲಕ ಎಲ್ಲವನ್ನೂ ಕೊಂಡುಕೊಳ್ಳಬಹುದು ಎಂಬ ಅಧಿಕಾರಿಗಳ ಭ್ರಮೆಯನ್ನು ಅವರು ತೀವ್ರವಾಗಿ ಖಂಡಿಸಿದ್ದಾರೆ.

ಹಣದ ಆಮಿಷಕ್ಕೆ ಮಣಿಯದ ಕಾರಣಕ್ಕೆ ಈಗ ನೇರವಾದ ಬೆದರಿಕೆ ಹಾಗೂ ದೈಹಿಕ ಹಲ್ಲೆಯ ತಂತ್ರಗಳನ್ನು ರೂಪಿಸಲಾಗುತ್ತಿದೆ, ಯೋಜನೆಯ ಪರವಾಗಿರುವ ಒಂದು ಖಾಸಗಿ ಕಂಪನಿಯವರು ಇತ್ತೀಚೆಗೆ ತಮ್ಮ ಕಾರಿಗೆ ಉದ್ದೇಶಪೂರ್ವಕವಾಗಿ ಅಪಘಾತವನ್ನು ಸಹ ಮಾಡಿಸಿದ್ದಾರೆ ಇದಲ್ಲದೆ, ಹೋರಾಟಗಾರರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸುವ ಮೂಲಕ ಜೈಲಿಗೆ ಅಟ್ಟುವ ಬೆದರಿಕೆಗಳನ್ನು ನಿರಂತರವಾಗಿ ಹಾಕಲಾಗುತ್ತಿದೆ. ಬೇರೆ ಬೇರೆ ರಾಜ್ಯಗಳ ವಾಹನಗಳು ಈ ಸ್ಥಳಗಳಲ್ಲಿ ಓಡಾಡುತ್ತಿದ್ದು, ಬೆದರಿಸುವ ಕಾರ್ಯಗಳು ನಡೆಯುತ್ತಿವೆ. ಈ ಕುರಿತಂತೆ ಸೈಬರ್ ಕ್ರೈಮ್‌ ವಿಭಾಗಕ್ಕೂ ದೂರು ನೀಡಲಾಗಿದೆ

ಬಂಗಾರಮಕ್ಕಿ ಮಾರುತಿ ಗುರೂಜಿ ,ಶ್ರೀ ಬಂಗಾರಮಕ್ಕಿ ವೀರಾಂಜನೇಯ ದೇವಸ್ಥಾನ

ಒಡೆದು ಆಳುವ ನೀತಿಯನ್ನು ಅನುಸರಿಸುವ ಮೂಲಕ ಹೋರಾಟಗಾರರ ಮನಸ್ಥೈರ್ಯವನ್ನು ಕುಗ್ಗಿಸುವ ಕುತಂತ್ರ ನಡೆಯುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಸಮಿತಿಯ ಮುಂಚೂಣಿಯಲ್ಲಿರುವವರ ಮೇಲೆ ವೈಯಕ್ತಿಕವಾಗಿ ಪ್ರಕರಣಗಳನ್ನು ದಾಖಲಿಸುವುದು, ಅವರಿಗೆ ಮಾನಸಿಕ ಹಿಂಸೆ ನೀಡುವುದು ಹಾಗೂ ಬೆದರಿಸುವ ಮೂಲಕ ಒಗ್ಗಟ್ಟನ್ನು ಮುರಿಯುವ ಪ್ರಯತ್ನಗಳು ನಿರಂತರವಾಗಿ ನಡೆದಿವೆ. ಆದರೆ, ಇಂತಹ ಯಾವುದೇ ಕುತಂತ್ರಗಳಿಗೆ ತಾವು ಬಗ್ಗುವುದಿಲ್ಲ ಎಂದು ಬಂಗಾರಮಕ್ಕಿ ಮಾರುತಿ ಗುರೂಜಿ ಸವಾಲು ಹಾಕಿದ್ದಾರೆ.

ನಿಮ್ಮ ವಾಟ್ಸಾಪ್​ಗೆ ಸುದ್ದಿ ಕಳುಹಿಸಲು ಕ್ಲಿಕ್​ ಮಾಡಿ ಗ್ರೂಪ್​ಗೆ ಜಾಯಿನ್ ಆಗಿ :  Whatsapp / https://chat.whatsapp.com/JrsZ8He4nN600n0r3tJItz

This Article Written by / ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯ್​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ

ಮುಂದಿನ ಸುದ್ದಿ ಒದಿ