ಕೋಟೆ ಶ್ರೀ ಮಾರಿಕಾಂಬಾ ದೇವಿಗೆ ಚಿನ್ನದ ಮುಖ, ಬೆಳ್ಳಿಯ ಬಾಗಿಲು: ವಿಶೇಷವೇನು

Shivamogga ಶಿವಮೊಗ್ಗ: ನಗರದ ಅತ್ಯಂತ ಪುರಾತನ ಹಾಗೂ ಇತಿಹಾಸ ಪ್ರಸಿದ್ಧ ಕೋಟೆ ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ ಜುಲೈ 3 ರಂದು ವಿಶೇಷ ಧಾರ್ಮಿಕ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. ಅಂದು ಮಧ್ಯಾಹ್ನ 12 ಗಂಟೆಗೆ ದೇವಸ್ಥಾನದ ಆವರಣದಲ್ಲಿ ದೇವಿಗೆ ಸ್ವರ್ಣ ಮುಖ ಕವಚ ಹಾಗೂ ಗರ್ಭಗುಡಿಗೆ ರಜತಾದ್ವಾರ (ಬೆಳ್ಳಿಯ ಬಾಗಿಲು) ಸಮರ್ಪಣಾ ಸಮಾರಂಭವು ಅತ್ಯಂತ ಸಡಗರದಿಂದ ನೆರವೇರಲಿದೆ. 

ಶಿವಮೊಗ್ಗ ಬ್ರೇಕಿಂಗ್: ತಹಶೀಲ್ದಾರ್ ಕಚೇರಿ ಮೇಲೆ ಲೋಕಾಯುಕ್ತ ಭೇಟಿ: ದಾಖಲೆಗಳ ಪರಿಶೀಲನೆ

ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮದರ್ಶಿಗಳಾದ ಡಾ. ಜಿ. ಭೀಮೇಶ್ವರ ಜೋಷಿ ಅವರ ದಿವ್ಯ ಸಾನಿಧ್ಯದಲ್ಲಿ ಹಾಗೂ ಅವರ ಅಮೃತ ಹಸ್ತದಿಂದ ಈ ಪವಿತ್ರ ಸಮರ್ಪಣಾ ಕಾರ್ಯಕ್ರಮ ಜರುಗಲಿದೆ. ಈ ಐತಿಹಾಸಿಕ ಮಹೋತ್ಸವದ ಪೂರ್ವಭಾವಿಯಾಗಿ ಇಂದಿನಿಂದ (ಜೂನ್ 30) ಜುಲೈ 2 ರವರೆಗೆ ದೇವಸ್ಥಾನದಲ್ಲಿ ಗಣಪತಿ ಪೂಜೆ, ಪುಣ್ಯಾಹ ವಾಚನ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನಿರಂತರವಾಗಿ ಜರುಗಲಿವೆ. 

ಜುಲೈ 3 ರಂದು ಬೆಳಿಗ್ಗೆ 8.30ಕ್ಕೆ ಗಣಪತಿ ಪೂಜೆಯೊಂದಿಗೆ ಮುಖ್ಯ ಕಾರ್ಯಕ್ರಮಗಳು ಆರಂಭವಾಗಲಿದ್ದು, ದೇವಸ್ಥಾನದ ಪ್ರಧಾನ ಅರ್ಚಕರಾದ ಸಂತೋಷ್ ಭಾರದ್ವಾಜ್ ಅವರ ನೇತೃತ್ವದಲ್ಲಿ ಸಾಮೂಹಿಕ ಲಲಿತಾ ಹೋಮ ನೆರವೇರಲಿದೆ. ಬೆಳಿಗ್ಗೆ 11.30 ಕ್ಕೆ ಪೂರ್ಣಾಹುತಿ ಸಂಪನ್ನಗೊಂಡು, ಅಮ್ಮನವರಿಗೆ ಚಿನ್ನದ ಮುಖ ಕವಚ ಹಾಗೂ ಗರ್ಭಗುಡಿಯ ರಜತದ್ವಾರ ಸಮರ್ಪಣೆ ಮಾಡಲಾಗುವುದು. ನಂತರ ಮಧ್ಯಾಹ್ನ 1 ಗಂಟೆಗೆ ಮಹಾ ಮಂಗಳಾರತಿ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. 

ಸಭಾ ಕಾರ್ಯಕ್ರಮದಲ್ಲಿ ಡಾ. ಭೀಮೇಶ್ವರ ಜೋಷಿ ಅವರು ಆಶೀರ್ವಚನ ನೀಡಲಿದ್ದು, ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಎಸ್. ಕೆ. ಮರಿಯಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಿವಮೊಗ್ಗ ಕ್ಷೇತ್ರದ ಶಾಸಕ ಎಸ್. ಎನ್. ಚನ್ನಬಸಪ್ಪ, ಮಾಜಿ ಉಪ ಮುಖ್ಯಮಂತ್ರಿ ಕೆ. ಎಸ್. ಈಶ್ವರಪ್ಪ, ಮಾಜಿ ಶಾಸಕ ಕೆ. ಬಿ. ಪ್ರಸನ್ನ ಕುಮಾರ್ ಹಾಗೂ ಸಮಾಜ ಸೇವಕ ಎಂ. ಶ್ರೀಕಾಂತ್ ಪಾಲ್ಗೊಳ್ಳಲಿದ್ದಾರೆ ಎಂದು ದೇವಸ್ಥಾನ ಸಮಿತಿಯ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಮಾಹಿತಿ ನೀಡಿದ್ದಾರೆ.

ವಿಶೇಷ ಲಲಿತಾ ಸಹಸ್ರನಾಮ ಲಕ್ಷ ಕುಂಕುಮಾರ್ಚನೆ

ಜೂನ್ 30 ರಿಂದ ಜುಲೈ 2 ರವರೆಗೆ ಪ್ರತಿದಿನ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 12.30 ರವರೆಗೆ ಹಾಗೂ ಸಂಜೆ 5.30 ರಿಂದ ರಾತ್ರಿ 7.30 ರವರೆಗೆ ಮಹಿಳೆಯರಿಗಾಗಿ ‘ಲಲಿತಾ ಸಹಸ್ರನಾಮ ಲಕ್ಷ ಕುಂಕುಮಾರ್ಚನೆ’ ಸೇವೆ ಇರಲಿದೆ. ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ಸಮಿತಿ ಕೋರಿದೆ.

Shivamogga Kote Marikamba Temple Mega Event