ಕೊಡಚಾದ್ರಿಯಲ್ಲಿ ಖ್ಯಾತ ನಿರ್ಮಾಪಕ ಬಾಮಾ ಹರೀಶ್ ಪುತ್ರ ಹೃದಯಾಘಾತದಿಂದ ನಿಧನ!

ಶಿವಮೊಗ್ಗ: ಸ್ಯಾಂಡಲ್‌ವುಡ್‌ನ  ಚಲನಚಿತ್ರ ನಿರ್ಮಾಪಕ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷರಾದ ಬಾಮಾ ಹರೀಶ್ ಪುತ್ರ ಉಲ್ಲಾಸ್ ಗೌಡ (28) ಸಾವನ್ನಪ್ಪಿದ್ದಾರೆ. ಅವರು ಶಿವಮೊಗ್ಗ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಕೊಡಚಾದ್ರಿ ಬೆಟ್ಟಕ್ಕೆ ಗೆಳೆಯರೊಂದಿಗೆ ಟ್ರೆಕ್ಕಿಂಗ್ ತೆರಳಿದ್ದಾಗ ಆಕಸ್ಮಿಕವಾಗಿ ಸಂಭವಿಸಿದ ಭೀಕರ ಹೃದಯಾಘಾತದಿಂದಾಗಿ ಕೊನೆಯುಸಿರೆಳೆದಿದ್ದಾರೆ .

ಉಲ್ಲಾಸ್ ಗೌಡ ಚಿತ್ರರಂಗದಲ್ಲೂ ಸಕ್ರಿಯರಾಗಿದ್ದು, ಸ್ಕೂಲ್ ಆಫ್ ಸಿನಿಮಾಸ್ ಹೆಸರಿನಲ್ಲಿ ನಾಟಕ ಶಾಲೆಯನ್ನು ಮುನ್ನಡೆಸುತ್ತಿದ್ದರು. ಇತ್ತೀಚೆಗಷ್ಟೇ ಇವರಿಗೆ ಚಂದನಾ ಗೌಡ ಎಂಬ ಯುವತಿಯೊಂದಿಗೆ ನಿಶ್ಚಿತಾರ್ಥ ನೆರವೇರಿತ್ತು. ಮುಂಬರುವ ಡಿಸೆಂಬರ್ ತಿಂಗಳಿನಲ್ಲಿ ವಿವಾಹ ಮಹೋತ್ಸವ ಜರುಗಬೇಕಿತ್ತು. ಇನ್ನೇನು ಕೆಲವೇ ತಿಂಗಳುಗಳಲ್ಲಿ ಹಸೆಮಣೆ ಏರಿ ಹೊಸ ಜೀವನಕ್ಕೆ ಕಾಲಿಡಬೇಕಾಗಿದ್ದ ಯುವಕ ಸಾವನ್ನಪ್ಪಿತ್ತು ಕುಟುಂಬಸ್ಥರ ಕಣ್ಣಿರಿಗೆ ಕಾರಣವಾಗಿದೆ. 

ಕೊಡಚಾದ್ರಿ ಬೆಟ್ಟದ ಕಠಿಣ ಹಾದಿಯಲ್ಲಿ ಸ್ನೇಹಿತರೊಂದಿಗೆ ಚಾರಣ ಮಾಡುತ್ತಿದ್ದ ಸಂದರ್ಭದಲ್ಲಿ ಉಲ್ಲಾಸ್ ಅವರಿಗೆ ಇದ್ದಕ್ಕಿದ್ದಂತೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ತಕ್ಷಣವೇ ಅವರು ಅಲ್ಲಿಯೇ ಕುಸಿದು ಬಿದ್ದಿದ್ದು, ಹೃದಯಾಘಾತದಿಂದಾಗಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಅವರ ಪಾರ್ಥಿವ ಶರೀರವನ್ನು ಮರಣೋತ್ತರ ಪರೀಕ್ಷೆಯ ನಂತರ ಬೆಂಗಳೂರಿನ ನಿವಾಸಕ್ಕೆ ತರಲು ಸಕಲ ವ್ಯವಸ್ಥೆಗಳನ್ನು ಮಾಡಲಾಗುತ್ತಿದ್ದು, ಈ ಕುರಿತಾದ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ. 

Producer Bhama Harish s Son Ullas Gowda Dies