Life imprisonment for 302 case / ಮಲೆನಾಡು ಟುಡೆ ಶಿವಮೊಗ್ಗ / ಐಪಿಸಿ 302 ಕೇಸ್ ಒಂದರಲ್ಲಿ ಆರೋಪಿಯೊಬ್ಬನಿಗೆ ಶಿವಮೊಗ್ಗ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ಈ ಸಂಬಂಧ ಶಿವಮೊಗ್ಗ ಪೊಲೀಸ್ ಇಲಾಖೆ ನೀಡಿರುವ ಪ್ರಕಟಣೆಯ ವಿವರ ಹೀಗಿದೆ.
ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ
ಸುತ್ತುಕೋಟೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿರುವ ಮನೆಯೊಂದರಲ್ಲಿ ಈ ಕೃತ್ಯ ನಡೆದಿತ್ತು. ಆರೋಪಿ ಹನುಮಂತ್ ನಾಯ್ಕ್ನ ಮನೆಯಲ್ಲಿ ಆರೋಪಿ ಜ್ಯೋತಿ ಬಾಯಿ ವಾಸವಿದ್ದರು. ಮೃತ ರತ್ನಾಬಾಯಿ ಅವರು ಆಸ್ತಿ ಹಂಚಿಕೆ ವಿಚಾರದಲ್ಲಿ ಮೋಸ ಮಾಡಿದ್ದಾರೆ ಎಂಬ ದ್ವೇಷ ಹಾಗೂ ಊರಿನವರ ಮುಂದೆ ತಮ್ಮನ್ನು ಕೆಟ್ಟದಾಗಿ ಮಾತನಾಡುತ್ತಾರೆ ಎಂಬ ವೈಷಮ್ಯದ ಹಿನ್ನೆಲೆಯಲ್ಲಿ, ಜ್ಯೋತಿ ಬಾಯಿ ಮತ್ತು ಹನುಮಂತ್ ನಾಯ್ಕ್ ಸೇರಿಕೊಂಡು ರತ್ನಾಬಾಯಿ ಅವರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು.
ದಿನಾಂಕ 15/03/2023 ರಂದು ರಾತ್ರಿ 8.30 ಗಂಟೆ ಸಮಯದಲ್ಲಿ, ಹನುಮಂತ್ ನಾಯ್ಕ್ನ ಮನೆಯ ಮುಂದಿನ ಕಟ್ಟೆಯ ಮೇಲೆ ರತ್ನಾಬಾಯಿ ಮಲಗಿದ್ದಾಗ, ಹನುಮಂತ್ ನಾಯ್ಕ್ ಚಾಕುವಿನಿಂದ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದನು. ಈ ಸಂಬಂಧ ಕುಂಸಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 302, 201 ಹಾಗೂ 34 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ನ್ಯಾಯಾಲಯದ ತೀರ್ಪು
ಅಂದಿನ ತನಿಖಾಧಿಕಾರಿ ತಿಪ್ಪೆಸ್ವಾಮಿ ಅವರು ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಮಮತಾ ಬಿ.ಎಸ್. ಅವರು ವಾದ ಮಂಡಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಅಭಯ್ ಧನಪಾಲ್ ಚೌಗಲ ಅವರು, ಆರೋಪಿತರ ವಿರುದ್ಧದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ದಿನಾಂಕ 24-06-2026 ರಂದು ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ ಒಟ್ಟು 30,000 ರೂಪಾಯಿ ದಂಡ ವಿಧಿಸಿ ಆದೇಶಿಸಿದ್ದಾರೆ.
ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw
