ಶಿವಮೊಗ್ಗ : ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಮತ್ತು ಅಶ್ಲೀಲವಾಗಿ ಕಮೆಂಟ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಕೃತ್ಯ ಎಸಗಿರುವ ಕಿಡಿಗೇಡಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ತೀರ್ಥಹಳ್ಳಿ ತಾಲೂಕು ಕಾಂಗ್ರೆಸ್ ಇಂಟೆಕ್ (INTUC) ಅಧ್ಯಕ್ಷ ಪ್ರೇಮಚಂದ್ರ ಅವರ ನೇತೃತ್ವದಲ್ಲಿ ಪೊಲೀಸರಿಗೆ ಅಧಿಕೃತವಾಗಿ ದೂರು ಸಲ್ಲಿಸಲಾಗಿದೆ.
ಮಾಜಿ ಸಚಿವರ ಸಂದರ್ಶನವೊಂದರ ವಿಡಿಯೋ ತುಣುಕಿಗೆ ಫೇಸ್ಬುಕ್/ಸಾಮಾಜಿಕ ಮಾಧ್ಯಮದಲ್ಲಿ ಗಣೇಶ್ ಎಂ.ಎನ್. ಎಂಬ ವ್ಯಕ್ತಿ ಅತ್ಯಂತ ಅಶ್ಲೀಲವಾದ ಮತ್ತು ನಿಂದನಾತ್ಮಕವಾದ ಕಮೆಂಟ್ ಪೋಸ್ಟ್ ಮಾಡಿದ್ದಾನೆ ಎನ್ನಲಾಗಿದೆ. ಸಾರ್ವಜನಿಕ ಜೀವನದಲ್ಲಿರುವ ಹಿರಿಯ ನಾಯಕರ ತೇಜೋವಧೆ ಮಾಡುವ ಉದ್ದೇಶದಿಂದಲೇ ಈ ರೀತಿ ಮಾಡಲಾಗಿದ್ದು, ಸದರಿ ಆರೋಪಿಯ ವಿರುದ್ಧ ತಕ್ಷಣವೇ ಐಟಿ ಕಾಯ್ದೆ ಹಾಗೂ ಸೈಬರ್ ಕ್ರೈಂ ಅಡಿಯಲ್ಲಿ ಪ್ರಕರಣ ದಾಖಲಿಸಿ, ಜೈಲಿಗಟ್ಟಬೇಕು ಎಂದು ಕಾಂಗ್ರೆಸ್ ಮುಖಂಡರು ಒತ್ತಾಯಿಸಿದ್ದಾರೆ.
ದೂರು ನೀಡುವ ಸಂದರ್ಭದಲ್ಲಿ ತೀರ್ಥಹಳ್ಳಿಯ ಯುವ ಕಾಂಗ್ರೆಸ್ ಪ್ರಮುಖ ಮುಖಂಡರಾದ ರವೀಶ್ ಹೊಸ್ಕೆರೆ, ಶ್ರೇಯಸ್ ರಾವ್, ಜಯಕರ ಶೆಟ್ಟಿ, ಪಣಿರಾಜ್ ಕಟ್ಟೇಹಕ್ಕಲು, ಪ್ರಶಾಂತ್ ಸಾಲಿಯಾನ, ಸಂದೀಪ ಹಾಗೂ ಮಹೇಂದ್ರ ಸೇರಿದಂತೆ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.
