Hulikal Ghat Road / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ತೀರ್ಥಹಳ್ಳಿ-ಕುಂದಾಪುರ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ-52 ರ ವ್ಯಾಪ್ತಿಗೆ ಬರುವ ಬಾಳೆಬರೆ ಘಾಟಿ ಅಥವಾ ಹುಲಿಕಲ್ ಘಾಟಿ ಇದೀಗ ರಿಪೇರಿ ಕಂಡಿದೆ. ಧರೆ ಕುಸಿದು ಮೂವರನ್ನ ಬಲಿ ಪಡೆದ ದುರಂತದ ಬಳಿಕ ಪೂರ್ತಿ ಬಂದ್ ಆಗಿದ್ದ ಘಾಟಿ ದಾರಿ, ಇವತ್ತು ಪೂರ್ತಿ ಸ್ವರೂಪದಲ್ಲಿ ಓಪನ್ ಆಗಿದೆ. ಇದರಿಂದಾಗಿ ಸ್ಥಳೀಯರಿಗೆ ಸಂಪರ್ಕ ಸಾಧ್ಯವಾಗುವುದಷ್ಟೆ ಅಲ್ಲದೆ, ಆಗುಂಬೆ ಘಾಟಿಯ ಮೇಲಿನ ಭಾರ ಕಡಿಮೆಯಾಗಲಿದೆ.

ಜಿಲ್ಲಾಡಳಿತ ರಸ್ತೆಯ ತಡೆಗೋಡೆ ಮರು ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ದಿನಾಂಕ 12.06.2026 ರಿಂದ ಅನ್ವಯವಾಗುವಂತೆ ಲಘು ವಾಹನಗಳ ಸಂಚಾರಕ್ಕೆ ಅಧಿಕೃತವಾಗಿ ಅವಕಾಶ ಕಲ್ಪಿಸಿದೆ. ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಅವರು ನೂತನವಾಗಿ ದುರಸ್ತಿಗೊಂಡ ಘಾಟಿ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಅಧಿಕೃತವಾಗಿ ಚಾಲನೆ ನೀಡಿದ್ದಾರೆ.
ಕಳೆದ ಏಪ್ರಿಲ್ 09, 2026 ರಂದು ಹುಲಿಕಲ್ ಘಾಟ್ ವ್ಯಾಪ್ತಿಯ ಹೇರ್ಪಿನ್ ತಿರುವಿನಲ್ಲಿ ತಳಪಾಯದ ಕಾಮಗಾರಿ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಸುಮಾರು 12 ಮೀಟರ್ ಎತ್ತರದ ಮಣ್ಣು ಕುಸಿದಿತ್ತು. ಕಾಂಕ್ರೀಟ್ ರಸ್ತೆಯ ಕೆಳಭಾಗದಲ್ಲಿದ್ದ ಮಣ್ಣು ಸಡಿಲಗೊಂಡು ಸುಮಾರು 5 ಅಡಿ ಅಗಲದಷ್ಟು ಜಾಗದಿಂದ ಜರಿದು ಅಲ್ಲಿದ್ದ ಕಾರ್ಮಿಕರ ಮೇಲೆ ಬಿದ್ದಿತ್ತು. ಅಲ್ಲದೆ ಘಟನೆಯಿಂದಾಗಿ ಕಾಂಕ್ರೀಟ್ ರಸ್ತೆಯ ಮೇಲ್ಮೈನಲ್ಲಿ ಅಲ್ಲಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದವು.

ಈ ಘಟನೆ ಬೆನ್ನಲ್ಲೆ ಜಿಲ್ಲಾಡಳಿತ, ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಮಾಸ್ತಿಕಟ್ಟೆಯಿಂದ ಹೊಸಂಗಡಿಯವರೆಗೆ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿತ್ತಷ್ಟೆ ಅಲ್ಲದೆ ಬದಲಿ ಮಾರ್ಗದಲ್ಲಿ ಸಂಚರಿಸುವಂತೆ ಆದೇಶ ಹೊರಡಿಸಿತ್ತು. ಈ ಮಧ್ಯೆ ಸ್ಥಳೀಯರು ಒತ್ತಾಯಿಸಿದ ಕಾರಣಕ್ಕಾಗಿ ಎರಡು ತಿಂಗಳ ಅವಧಿಯಲ್ಲಿ, ಪ್ರಯಾಣಿಕರ ತುರ್ತು ಅನುಕೂಲಕ್ಕಾಗಿ ಬಾಳೆಬರೆ (ಹುಲಿಕಲ್ ಘಾಟ್) ವ್ಯಾಪ್ತಿಯಲ್ಲಿ ಬರುವ ಚಂಡಿಕಾಂಬ ದೇವಸ್ಥಾನದ ಬಳಿಯಿರುವ ಮೆಟ್ಟಿಲುಗಳನ್ನು ಬಳಸಿಕೊಂಡು ವಾಹನಗಳ ಅದಲು ಬದಲು ಮೂಲಕ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು.

ಈ ಮಧ್ಯೆ ಅಪಾಯಕಾರಿ ಸ್ಥಳದಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿಯನ್ನು ಮುಂದುವರಿಸಿದ ಲೋಕೋಪಯೋಗಿ ಇಲಾಖೆ ಹಾಗೂ ಗುತ್ತಿಗೆದಾರರು, ಕಾಮಗಾರಿಯನ್ನು ಮುಗಿಸಿ ಲಘು ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಪ್ರಸ್ತುತ ಹೇರ್ಪಿನ್ ತಿರುವಿನಲ್ಲಿ ರಸ್ತೆ ಮಟ್ಟದವರೆಗೆ ತಡೆಗೋಡೆಯನ್ನು ನಿರ್ಮಿಸಲಾಗಿದೆ ಹಾಗೂ ರಸ್ತೆಯ ಭಾಗದಲ್ಲಿ ಲೀನ್ ಕಾಂಕ್ರೀಟ್ ಅಳವಡಿಸುವ ಕಾರ್ಯವೂ ಮುಕ್ತಾಯಗೊಂಡಿದೆ. ರೀಟೈನಿಂಗ್ ವಾಲ್ ಸೇರಿದಂತೆ ರಕ್ಷಣಾತ್ಮಕ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿತ್ತು.

ಈ ಹಿನ್ನೆಲೆಯಲ್ಲಿ, ಪ್ರಯಾಣಿಕರ ಸಂಚಾರಕ್ಕೆ ಅನುವಾಗುವಂತೆ ಬಸ್ ಸೇರಿದಂತೆ ಇತರೆ ಪ್ರಯಾಣಿಕರು ಸಂಚರಿಸುವ ವಾಹನಗಳು ಹಾಗೂ ಲಘು ಗೂಡ್ಸ್ ವಾಹನಗಳು ಸಂಚರಿಸಲು ಸೂಕ್ತ ಮಾರ್ಪಾಡು ಮಾಡುವಂತೆ ಶಿವಮೊಗ್ಗ ವಿಭಾಗದ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಅವರು ಪ್ರಸ್ತಾವನೆ ಸಲ್ಲಿಸಿದ್ದರು. ಇದಕ್ಕೆ ಪೂರಕವಾಗಿ ಶಿವಮೊಗ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಸಾಗರದ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ವರದಿ ನೀಢಿದ್ದರು.

ಸಂಬಂಧಪಟ್ಟ ಎಲ್ಲಾ ಇಲಾಖೆಗಳ ವರದಿಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರ, ಶಿವಮೊಗ್ಗ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಹಾಗೂ ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಅಭಿಷೇಕ್ ವಿ. ಅವರು ನೂತನ ಅಧಿಸೂಚನೆ ಹೊರಡಿಸಿದ್ದಾರೆ. ಮೋಟಾರು ವಾಹನ ಕಾಯ್ದೆ 1988 ರ ಕಲಂ 115 ಹಾಗೂ 116 ರನ್ವಯ ಈ ಹಿಂದೆ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಿ ಹೊರಡಿಸಲಾಗಿದ್ದ ಆದೇಶವನ್ನು ಅಧಿಕೃತವಾಗಿ ರದ್ದುಗೊಳಿಸಲಾಗಿದೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ರಾಜ್ಯ ಹೆದ್ದಾರಿ-52 ರ ಬಾಳೆಬರೆ ಘಾಟಿ (ಹುಲಿಕಲ್ ಘಾಟಿ) ಮೂಲಕ ಲಘು ವಾಹನಗಳ ಸಂಚಾರಕ್ಕೆ ಮುಕ್ತ ಅವಕಾಶ ಕಲ್ಪಿಸಿ ಅವರು ಆದೇಶಿಸಿದ್ದಾರೆ.
ಅಂತಿಮವಾಗಿ ರಾಜ್ಯ ಹೆದ್ದಾರಿ-52 ರ ಬಾಳೆಬರೆ ಘಾಟ್ನಲ್ಲಿ ಭವಿಷ್ಯದಲ್ಲಿ ಮತ್ತೆ ಭೂಕುಸಿತ ಉಂಟಾಗುವ ಸಂಭವವಿರುವುದರಿಂದ, ಘಾಟಿಯಲ್ಲಿ ಸಂಚರಿಸುವ ವಾಹನ ಸವಾರರು ಹಾಗೂ ಪ್ರಯಾಣಿಕರ ಗರಿಷ್ಠ ಸುರಕ್ಷತೆಗಾಗಿ ತಡೆಗೋಡೆ, ಎಚ್ಚರಿಕೆ ಫಲಕಗಳು, ಮಾಹಿತಿ ಮತ್ತು ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ವಿಶೇಷವಾಗಿ ರಾತ್ರಿ ವೇಳೆ ವಾಹನಗಳ ಸುರಕ್ಷಿತ ಸಂಚಾರಕ್ಕಾಗಿ ರಸ್ತೆಗೆ ಕ್ಯಾಟ್ ಐಸ್ ಹಾಗೂ ಸೋಲಾರ್ ಸ್ಟಡ್ಸ್ ಅಳವಡಿಕೆ ಮುಂತಾದ ಮೂಲಭೂತವಾದ ಎಲ್ಲಾ ಅಗತ್ಯ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಲಾಗಿದೆ.
