ಆಯನೂರು ಗೇಟ್​ನಲ್ಲಿ ಇನ್ಮೇಲೆ ನೋ ಎಂಟ್ರಿ! ಪೂರ್ತಿ ವಿಚಾರ ಓದಿ!

No Entry fo Vehicles near Ayanur Gate Signal ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ನಗರದ ಪಶ್ಚಿಮ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡುವ ಆಯನೂರು ಗೇಟ್ ಸಿಗ್ನಲ್ ಬಳಿ ಟ್ರಾಫಿಕ್​ ಕಂಟ್ರೋಲ್ ಮಾಡುವ ಉದ್ದೇಶಕ್ಕಾಗಿ ಒನ್​ ವೇ ಟ್ರಾಫಿಕ್ ನಿಯಮ ಜಾರಿ ಮಾಡಲಾಗಿದೆ. ಈ ಸಂಬಂಧ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಆಲ್ಗೊಳ ವೃತ್ತದ ಕಡೆಯಿಂದ ಬಂದು ಹೆಲಿಪ್ಯಾಡ್ ವೃತ್ತದ ಕಡೆಗೆ ಸಂಚರಿಸುವ ವಾಹನಗಳಿಗೆ ಎದುರಾಗಿ, ಆಟೋ ಕಾಂಪ್ಲೆಕ್ಸ್ ಕಡೆಗೆ ವಿರುದ್ಧ ದಿಕ್ಕಿನಲ್ಲಿ ಸಾಗುವ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಿ ‘ನೋ ಎಂಟ್ರಿ’ ಆದೇಶವನ್ನು ಹೊರಡಿಸಲಾಗಿದೆ. ಈ ಕುರಿತು ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಾರ್ಯಾಲಯದಿಂದ 08.06.2026 ರಂದು ಅಧಿಕೃತ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ.

Ayanur Gate Signal : ಜಿಲ್ಲಾಡಳಿತ ಪ್ರಕಟಣೆಯಲ್ಲಿ ಏನಿದೆ ಗಮನಿಸಿ

  • ಪಶ್ಚಿಮ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಆಯನೂರು ಗೇಟ್ ವೃತ್ತದಲ್ಲಿ ಪ್ರತಿದಿನ ಸಾವಿರಾರು ವಾಹನಗಳು ಓಡಾಡುತ್ತಿದ್ದು, ವಾಹನ ಹಾಗೂ ಸಂಚಾರ ದಟ್ಟಣೆ ವಿಪರೀತವಾಗಿ ಹೆಚ್ಚಾಗುತ್ತಿದೆ ಎಂದು ಶಿವಮೊಗ್ಗ ಪೊಲೀಸ್ ಅಧೀಕ್ಷಕರು 12.03.2026 ರಂದು ಬರೆದ ಪತ್ರದಲ್ಲಿ ಪ್ರಸ್ತಾವನೆ ಸಲ್ಲಿಸಿದ್ದರು.
  • ಆಯನೂರು ಗೇಟ್ ಸರ್ಕಲ್ ಎಂಬುದು ಹೆಲಿಪ್ಯಾಡ್ ಸರ್ಕಲ್ ಕಡೆಯಿಂದ ಸಾಗರ ಮಾರ್ಗಕ್ಕೆ, ಸಾಗರದಿಂದ ಹೆಲಿಪ್ಯಾಡ್ ವೃತ್ತಕ್ಕೆ, ಗೋಪಾಳ ಮತ್ತು ಶರಾವತಿ ನಗರದ ಕಡೆಗೆ ತೆರಳಲು ಸಂಪರ್ಕ ಕಲ್ಪಿಸುವ ಪ್ರಮುಖ 4 ರಸ್ತೆಗಳ ಕೂಡು ರಸ್ತೆಯಾಗಿದೆ.
  • ಇಲ್ಲಿನ ವಾಹನ ದಟ್ಟಣೆಯನ್ನು ನಿಯಂತ್ರಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ದೃಷ್ಟಿಯಿಂದ ಈಗಾಗಲೇ ಸಿಗ್ನಲ್ ಲೈಟ್‌ಗಳನ್ನು ಅಳವಡಿಸಲಾಗಿದೆ. ಆದರೆ, ಈ ಆಯನೂರು ಗೇಟ್ ಸರ್ಕಲ್ ಸಮೀಪದಲ್ಲಿಯೇ ಆಟೋ ಕಾಂಪ್ಲೆಕ್ಸ್ ಇದ್ದು, ಅಲ್ಲಿ ಹಲವಾರು ವಾಹನ ದುರಸ್ತಿ ಮಳಿಗೆಗಳು ಹಾಗೂ ಗ್ಯಾರೇಜ್‌ಗಳು ಇರುವುದರಿಂದ ವಾಹನಗಳ ಓಡಾಟವು ಮಿತಿಮೀರಿರುತ್ತದೆ.
  • ನಿಯಮದ ಪ್ರಕಾರ, ಆಟೋ ಕಾಂಪ್ಲೆಕ್ಸ್‌ಗೆ ತೆರಳುವ ವಾಹನ ಚಾಲಕರು ಎಪಿಎಂಸಿ ಮುಂಭಾಗದಲ್ಲಿ ನಿರ್ಮಿಸಲಾಗಿರುವ ರಸ್ತೆ ವಿಭಜಕವನ್ನು ಬಳಸಿ ಹೋಗಬೇಕಾಗಿದೆ. ಆದಾಗ್ಯೂ, ವಾಹನ ಸವಾರರು ಆ ಮಾರ್ಗವನ್ನು ಬಳಸದೆ, ಆಯನೂರು ಗೇಟ್ ಸಿಗ್ನಲ್ ಬಳಿ ಆಲ್ಗೊಳ ಸರ್ಕಲ್ ಕಡೆಯಿಂದ ಹೆಲಿಪ್ಯಾಡ್ ಸರ್ಕಲ್ ಕಡೆಗೆ ಬರುತ್ತಿರುವ ವಾಹನಗಳಿಗೆ ಮುಖಾಮುಖಿಯಾಗಿ ಆಟೋ ಕಾಂಪ್ಲೆಕ್ಸ್ ಕಡೆಗೆ ನುಗ್ಗುತ್ತಿದ್ದಾರೆ.
  • ಇದರಿಂದಾಗಿ ಆ ಭಾಗದಲ್ಲಿ ಅಪಘಾತಗಳು ಸಂಭವಿಸುವ ಅಪಾಯವು ಹೆಚ್ಚಾಗಿರುತ್ತದೆ ಎಂದು ಪೊಲೀಸ್ ಇಲಾಖೆಯು ಜಿಲ್ಲಾಡಳಿತದ ಗಮನಕ್ಕೆ ತಂದಿತ್ತು. ಪೊಲೀಸ್ ಅಧೀಕ್ಷಕರು ಸಲ್ಲಿಸಿದ್ದ ಈ ಪ್ರಸ್ತಾವನೆಯನ್ನು ಪರಿಗಣಿಸಿದ ಜಿಲ್ಲಾಡಳಿತವು, ಸಾರ್ವಜನಿಕರ ಹಿತರಕ್ಷಣೆ ಹಾಗೂ ಸುಗಮ ವಾಹನ ಸಂಚಾರದ ವ್ಯವಸ್ಥೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಜರುಗಿಸಿದೆ.
  • ಕೇಂದ್ರ ಮೋಟಾರು ವಾಹನ ಕಾಯ್ದೆ 1988 ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಮಾವಳಿಗಳು 1989 ರ ನಿಯಮ 221(ಎ)(5) ರ ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿರುವ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಯಾಗಿರುವ ಪ್ರಭುಲಿಂಗ ಕವಳಿಕಟ್ಟಿ (ಭಾ.ಆ.ಸೇ.) ಅವರು ಈ ವಾಹನ ಸಂಚಾರ ನಿಷೇಧ ಆದೇಶವನ್ನು ಜಾರಿಗೊಳಿಸಿದ್ದಾರೆ

Whatsapp https://chat.whatsapp.com/JrsZ8He4nN600n0r3tJItz