ಮಲೆನಾಡು ಟುಡೆ ಸುದ್ದಿ / ತೀರ್ಥಹಳ್ಳಿ / ಈಗೀಗ ಜಗಳ ನಡೆಯುವುದಕ್ಕೆ ಕಾರಣಗಳು ತೀರಾ ಸಿಲ್ಲಿ ಅನಿಸಿದ್ರೂ ಸಹ ಮನುಷ್ಯರ ಮನಸ್ಸೂ ಅಷ್ಟು ಸೂಕ್ಷ್ಮವಾಗುತ್ತಿದೆ ಎಂದು ಎನಿಸದೆ ಇರದು. ಈ ಸಾಲಿಗೆ ಸೇರುವಂತಹ ಬೆಕ್ಕಿನ ಸುದ್ದಿಯೊಂದು ಬೆಂಗಳೂರಲ್ಲಿ ನಡೆದಿತ್ತು. ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ಬೆಕ್ಕಿಗಾಗಿ ಅಕ್ಕಪಕ್ಕದ ಮನೆಯವರು ಹೊಡೆದಾಡಿದ್ದರು. ಇದೀಗ ಶಿವಮೊಗ್ಗದಲ್ಲಿಯು ಇಂತಹದ್ದೊಂದು ಘಟನೆ ನಡೆದಿದೆ.
ತೀರ್ಥಹಳ್ಳಿ ತಾಲ್ಲೂಕಿನ ನಮ್ಮ ಸ್ನೇಹಿತ ವರದಿಗಾರರು ಈ ಸುದ್ದಿ ಕಳುಹಿಸಿಕೊಟ್ಟಿದ್ದಾರೆ. ವಿಷಯ ಏನಂದರೆ, ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ಬೆಕ್ಕೊಂದು ಮನೆ ಹೊಕ್ಕಿದ ಕಾರಣಕ್ಕೆ ವಿಚಾರ ಹೊಡೆದಾಡೋ ವರೆಗೂ ಹೋಗಿದೆ.
ಇಲ್ಲಿನ ನಿವಾಸಿ ಗಣೇಶ (ಹೆಸರು ಬದ್ಲು ಮಾಡೀವಿ) ಎಂಬವರ ಮನೆಗೆ ನೆರೆಮನೆಯ ಬೆಕ್ಕು ನುಗ್ಗಿದೆ. ಗಣೇಶರವರ ಮನೆಯಲ್ಲಿದ್ದ ಹೆಣ್ಣು ಬೆಕ್ಕನ್ನು ಹುಡುಕಿಕೊಂಡು ಪಕ್ಕದ ಮನೆಯ ಗಂಡು ಬೆಕ್ಕು,, ಇವರ ಮನೆಗೆ ರಂಗಪ್ರವೇಶ ಮಾಡಿದೆ. ಈ ವಿಷಯಕ್ಕೆ ಸಿಟ್ಟಾದ ಗಣೇಶ್ರವರು ಪಕ್ಕದಮನೆಯವರನ್ನು ಸಂಪರ್ಕಿಸಿ ನಿಮ್ಮನೆ ಬೆಕ್ಕು ನಮ್ಮನೆಗೆ ಬರದಂತೆ ನೋಡಿಕೊಳ್ಳಿ ಎಂದಿದ್ದಾರೆ. ಅದಕ್ಕೆಂತ ಮರ್ರೆ, ಮನುಷ್ಯರಾದ್ರೆ ಹೇಳ್ಬಹುದು, ಈ ಮೂಕ್ ಪ್ರಾಣಿನಾ ಕಟ್ ಹಾಕಕೆ ಆಗತ್ತೇನ್ರಿ ಅಂತಾ ಮಾತು ಶುರುವಾಗಿದೆ. ಕೊನೆಗೆ ಅವರ ಮಾತಿಗೆ ಇವರು, ಇವರ ಬಾಯಿಗೆ ಅವರು ಅಡ್ಡಬಂದು, ವಿಚಾರ ದೊಡ್ಡಾಗಿ, ಜೋರ್ ವಾಗ್ವಾದ ಆಗಿತ್ತು.
ಪಕ್ಕದಮನೆಯ ಮಾರ್ಜಾಲ ಮೇಲೆ ಗುಂಡು ಹಾರಿಸಿದ ಮಾಲೀಕ!
ಈ ಘಟನೆ ನಡೆದ ಮಾರನೇ ದಿನವೇ, ಅದೇ ಬೆಕ್ಕು ಮರಳಿ ಗಣೇಶ್ರವರ ಮನೆಗೆ ಬಂದಿದೆ. ತಗೋ ಇದಕ್ಕೆ ಸಿಟ್ಟಾದ ಗಣೇಶ್ರವರು ಏರ್ ಗನ್ ಮೂಲಕ ಗುಂಡು ಹಾರಿಸಿದ್ದಾರೆ. ಏರ್ ಗನ್ ಶಬ್ದದಿಂದ ಬೆದರಿದ ಬೆಕ್ಕು ಅಲ್ಲಿಂದ ದಿಕ್ಕಾಪಾಲಾಗಿ ಓಡಿಹೋಗಿದೆ. ಇದೆಂತಾ ಅವಸ್ಥೆ ಮರ್ರೆ ಅಂದುಕೊಂಡ ಪಕ್ಕದಮನೆಯವರು, ಹಿಂಗಲ್ಲ ಸರಿಯಾಗಲ್ಲ ಅಂದ್ಕೊಂಡು ಆಗುಂಬೆ ಪೊಲೀಸರ ಮೊರೆ ಹೋಗಿದ್ದಾರೆ. ಅವರು ಕೊಟ್ರು ಎಂದು ಇವರು ಸಹ ದೂರಿನ ಕಾಗದ ನೀಡಿದ್ದಾರೆ.
ಈ ಮಧ್ಯೆ ಸ್ಪಾಟ್ ವಿಸಿಟ್ಗೆ ಬಂದ ಪೊಲೀಸರು ಮಹಜರ್ ನಡೆಸ್ತಿದ್ದಾಗ ಎರಡು ಮನೆಯವರು ಎದುರು ಬದುರಾಗಿ ಪರಸ್ಪರ ಬೈದಾಡಿಕೊಂಡು, ಕೈ ಕೈ ಮಿಲಾಯಿಸಿ ಹೊಯ್ ಕೈ ನಡೆಸಿದ್ರಷ್ಟೆ ಅಲ್ಲದೆ ಪೆಟ್ಟಾಗಿ ಜೆಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬಲ್ಲಿಗೆ ಸುದ್ದಿ ಬಂದು ನಿಂತಿದೆ. ಮುಂದೆ ಏನಾಗುತ್ತೆ ನೋಡಬೇಕಿದೆ.
ಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw
