ಶಿವಮೊಗ್ಗ / ಶಿವಮೊಗ್ಗ ನಗರದಲ್ಲಿ ಸರಣಿ ಅಪರಾಧ ಕೃತ್ಯಗಳನ್ನು ಎಸಗಿದ ಆರೋಪ ಹೊತ್ತಿರುವ ಹಾಗೂ ಯಾಸೀನ್ ಖುರೇಶಿ ಹತ್ಯೆಯ ಪ್ರಮುಖ ಆರೋಪಿಯಾಗಿರುವ ರೌಡಿಶೀಟರ್ ಆದಿಲ್ ಮತ್ತು ಆತನ ಸಹಚರನೊಬ್ಬನನ್ನು ಡಿವೈಎಸ್ಪಿ ಸಂಜೀವ್ ಕುಮಾರ್ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ.
ಪರಪ್ಪನ ಅಗ್ರಹಾರಕ್ಕೆ ಶಿಫ್ಟ್
ಇತ್ತೀಚೆಗೆ ದೊಡ್ಡಪೇಟೆ ಪೊಲೀಸ್ ಸ್ಟೇಷನ್ ಲಿಮಿಟ್ಸ್ನಲ್ಲಿ ಕ್ರೈಂ ಎಸಗಿ ಪರಾರಿಯಾಗಿದ್ದ ಆದಿಲ್ನನ್ನು ಸೆರೆಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಈತನನ್ನು ಬಂಧಿಸಲಾಗಿದೆ ಎಂಬ ಮಾಹಿತಿಯಿದ್ದು, ಈತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ಹೆಚ್ಚಿನ ಭದ್ರತೆಗಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿದೆ.
ಬಂಧಿತ ಆರೋಪಿ ಆದಿಲ್ ಇತ್ತೀಚೆಗೆ ನ್ಯೂ ಮಂಡ್ಲಿಯ ಮೊಬೈಲ್ ಅಂಗಡಿಯೊಂದರಲ್ಲಿ ಕೆಲಸ ಕಲಿಯುತ್ತಿದ್ದ ಇರ್ಫಾನ್ ಎಂಬಾತನನ್ನು ಮೇ 09 ರಂದು ಇಬ್ಬರು ಅಪರಿಚಿತರ ಮೂಲಕ ಅಪಹರಿಸಿದ್ದ. ಇರ್ಫಾನ್ನನ್ನು ಬೈಪಾಸ್ನಿಂದ ಕಿಯಾ ಕಾರಿನಲ್ಲಿ ಕೂರಿಸಿಕೊಂಡು ಭದ್ರಾವತಿ ರಸ್ತೆಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಬಂಧನದಲ್ಲಿರಿಸಿ 5 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದ ಎಂದು ದೊಡ್ಡಪೇಟೆಯಲ್ಲಿ ದಾಖಲಾಗಿರುವ ಎಫ್ಐಆರ್ನಲ್ಲಿ ಆರೋಪಿಸಲಾಗಿದೆ.
ಇದೇ ಪ್ರಕರಣದಲ್ಲಿ ಪೊಲೀಸರ ದಾಳಿ ವೇಳೆ ತಲೆಮರೆಸಿಕೊಂಡಿದ್ದ ಆದಿಲ್ನನ್ನು ಇದೀಗ ಬಂಧಿಸಲಾಗಿದೆ. ಇನ್ನೂ ಇದೇ ಆದಿಲ್ ಮತ್ತು ಆತನ ಗ್ಯಾಂಗ್, ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಿನಾಂಕ 22-09-2025 ರಂದು ಇಬ್ಬರ ಮೇಲೆ ಹಲ್ಲೆ ನಡೆಸಿ, ಅಪಹರಿಸಿ ಜೀವಬೆದರಿಕೆ ಹಾಕಿದ ಪ್ರಕರಣದಲ್ಲಿಯೂ ಭಾಗಿಯಾಗಿದ್ದ ಆರೋಪವಿದೆ.. ಇನ್ನೂ ಆದಿಲ್ ಜೊತೆಗೆ ಇನ್ನೊಬ್ಬ ಆರೋಪಿ ಅರೆಸ್ಟ್ ಆಗಿರುವ ಮಾಹಿತಿಯಿದ್ದು, ಇಬ್ಬರನ್ನು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗಿದೆ
ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw
