ಬೇಸಿಗೆ ರಜೆಯ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಪ್ರವಾಸಕ್ಕಾಗಿ ಆಗಮಿಸಿದ್ದ ಕೇರಳ ಮೂಲದ 15 ವರ್ಷದ ಬಾಲಕಿಯೊಬ್ಬಳು ಚಂದ್ರದ್ರೋಣ ಪರ್ವತ ಶ್ರೇಣಿಯ ದತ್ತಪೀಠದ ಸಮೀಪವಿರುವ ಪ್ರಸಿದ್ಧ ಮಾಣಿಕ್ಯಾಧಾರ ಜಲಪಾತದ ಬಳಿ ನಿಗೂಢವಾಗಿ ನಾಪತ್ತೆಯಾಗಿದ್ದಾಳೆ. ಘಟನೆ ನಡೆದು 24 ಗಂಟೆಗಳು ಕಳೆದರೂ ಆಕೆಯ ಬಗ್ಗೆ ಯಾವುದೇ ನಿಖರ ಸುಳಿವು ಲಭ್ಯವಾಗಿಲ್ಲ.
ಮಾಣಿಕ್ಯಧಾರ ಜಲಪಾತದ ಬಳಿ ಘಟನೆ
ಒಟ್ಟು 40 ಮಂದಿಯಿದ್ದ ಕುಟುಂಬ ಮಂಗಳವಾರ ಇಲ್ಲಿಗೆ ಆಗಮಿಸಿತ್ತು. ಅಂದು ಸಂಜೆ 5.30ರ ಸುಮಾರಿಗೆ ಜಲಪಾತದ ಪರಿಸರದಲ್ಲಿ ಬಾಲಕಿ ಶ್ರೀನಂದಾ ದಿಢೀರನೆ ನಾಪತ್ತೆಯಾಗಿದ್ದಾಳೆ. ತಕ್ಷಣವೇ ಎಚ್ಚೆತ್ತ ಕುಟುಂಬಸ್ಥರು ಹಾಗೂ ಸ್ಥಳೀಯ ಆಡಳಿತ ಶೋಧ ಕಾರ್ಯ ಆರಂಭಿಸಿದೆ. ಬಾಲಕಿಯನ್ನು ಪತ್ತೆ ಹಚ್ಚುವ ಉದ್ದೇಶದಿಂದ 60ಕ್ಕೂ ಹೆಚ್ಚು ಸಿಬ್ಬಂದಿಯನ್ನು ಒಳಗೊಂಡ 5 ಪ್ರತ್ಯೇಕ ತಂಡಗಳನ್ನು ರಚಿಸಲಾಗಿದ್ದು, ಈ ತಂಡಗಳು ದಟ್ಟ ಕಾಡಿನೊಳಗೆ ತೀವ್ರ ಸ್ವರೂಪದ ಹುಡುಕಾಟದಲ್ಲಿ ತೊಡಗಿವೆ.

ಈ ಚಾರಣ ಮಾರ್ಗವು ನೇರವಾಗಿ ಅರಣ್ಯ ಇಲಾಖೆಯ ವ್ಯಾಪ್ತಿಗೆ ಒಳಪಡುವುದಿಲ್ಲ. ಆದಾಗ್ಯೂ, ನಾಪತ್ತೆಯಾಗಿರುವ ಬಾಲಕಿಯ ಶೋಧ ಕಾರ್ಯಾಚರಣೆಗೆ ಬೆಂಬಲ ನೀಡುವಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಶೋಧ ಕಾರ್ಯವನ್ನು ಚುರುಕುಗೊಳಿಸಲು ನುರಿತ ಅರಣ್ಯ ಸಿಬ್ಬಂದಿಯನ್ನು ನಿಯೋಜಿಸಬೇಕು ಹಾಗೂ ಥರ್ಮಲ್ ಡ್ರೋನ್ ಕ್ಯಾಮೆರಾಗಳಂತಹ ಆಧುನಿಕ ತಂತ್ರಜ್ಞಾನ ಉಪಕರಣಗಳನ್ನು ಬಳಸಿಕೊಂಡು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಸಂಪೂರ್ಣ ನೆರವು ಒದಗಿಸಬೇಕು ಎಂದು ಅವರು ಸೂಚಿಸಿದ್ದಾರೆ.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw
