ಶಿವಮೊಗ್ಗ: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಕೈಬಿಡಲು ಆಗ್ರಹಿಸಿ, ಏಪ್ರಿಲ್ 16 ರಂದು ನಗರದಲ್ಲಿ ಬೃಹತ್ ಸೈಕಲ್, ಕಾರು ಹಾಗೂ ಬೈಕ್ ಜಾತ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಸರಕ್ಕಾಗಿ ನಾವು ಹಾಗೂ ರಾಷ್ಟ್ರಭಕ್ತರ ಬಳಗದ ಸಂಯುಕ್ತಾಶ್ರಯದಲ್ಲಿ ಈ ಬೃಹತ್ ಪ್ರತಿಭಟನಾ ರ್ಯಾಲಿ ನಡೆಯಲಿದೆ. ಅಂದು ಬೆಳಿಗ್ಗೆ ಫ್ರೀಡಂ ಪಾರ್ಕ್ನಿಂದ ಸುಮಾರು 12 ಕಿಲೋ ಮೀಟರ್ಗಳವರೆಗೆ ಜಾತ ಸಾಗಲಿದ್ದು, ಸರ್ಕಾರದ ವಿರುದ್ಧ ಪರಿಸರಾಸಕ್ತರು ಧ್ವನಿ ಎತ್ತಲಿದ್ದಾರೆ. ಸದ್ಯದಲ್ಲಿಯೇ ಜಾತದ ರೂಟ್ ಮಾರ್ಚ್ನ್ನು ತಿಳಿಸಲಾಗುವುದು ಎಂದರು.
ಈಗಾಗಲೇ ಈ ಯೋಜನೆಯ ವಿರುದ್ಧ 65,000ಕ್ಕೂ ಅಧಿಕ ಆನ್ಲೈನ್ ಸಹಿ ಸಂಗ್ರಹ, ಅಹೋರಾತ್ರಿ ಧರಣಿಗಳು ನಡೆದಿವೆ. ಈ ಹಿಂದೆ ಕೆಪಿಸಿಎಲ್ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ನಮ್ಮ ತಜ್ಞರ ತಂಡ 32ಕ್ಕೂ ಹೆಚ್ಚು ಪ್ರಶ್ನೆಗಳನ್ನು ಕೇಳಿತ್ತು. ಆದರೆ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ. ಮೇಲಾಧಿಕಾರಿಗಳ ಒತ್ತಡಕ್ಕೆ ಮಣಿದು ಉತ್ತರ ನೀಡಲು ನಿರಾಕರಿಸುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಅವರು ಗಂಭೀರ ಆರೋಪ ಮಾಡಿದರು.
ಪಶ್ಚಿಮ ಘಟ್ಟಗಳ ಉಳಿವಿಗಾಗಿ ನಡೆಸುತ್ತಿರುವ ಈ ಹೋರಾಟಕ್ಕೆ ರಾಜ್ಯಾದ್ಯಂತ ಬೆಂಬಲ ವ್ಯಕ್ತವಾಗುತ್ತಿದೆ. ಖ್ಯಾತ ಪರಿಸರವಾದಿಗಳು ಹಾಗೂ ಸಂಘ ಸಂಸ್ಥೆಗಳು ಸಾಥ್ ನೀಡುತ್ತಿರುವುದು ನಮ್ಮ ಶಕ್ತಿಯನ್ನು ಹೆಚ್ಚಿಸಿದೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಈ ಯೋಜನೆಯನ್ನು ರದ್ದುಪಡಿಸದಿದ್ದರೆ, ಮುಂದಿನ ದಿನಗಳಲ್ಲಿ ರಾಜ್ಯವ್ಯಾಪಿ ತೀವ್ರ ಸ್ವರೂಪದ ಹೋರಾಟ ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
Shimoga Protest Against Sharavathi Pumped Storage

