ತೀರ್ಥಹಳ್ಳಿ: ತುರ್ತು ಸಂದರ್ಭಗಳಲ್ಲಿ 112 ಸಿಬ್ಬಂದಿಗಳು ಅಂದರೆ ಹಾಗೇನೇ… ಯಾವುದೇ ಸಣ್ಣಪುಟ್ಟ ವಿಚಾರಗಳಿದ್ದರೂ ತಕ್ಷಣ ಸ್ಪಂದಿಸಿ ಕ್ಷಣ ಮಾತ್ರದಲ್ಲಿ ಸಮಸ್ಯೆಯನ್ನು ಬಗೆಹರಿಸಿ ಬಿಡುತ್ತಾರೆ. ಅಷ್ಟೇ ಅಲ್ಲದೇ, ಕೆಲವೊಮ್ಮೆ ಜೀವನವೇ ಬೇಡವೆಂದು ನಿರ್ಧರಿಸಿ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳಲು ಹೊರಟ ಎಷ್ಟೋ ಜೀವಗಳನ್ನು ಬದುಕಿಸಿದ ಶ್ರೇಯಸ್ಸು ಈ 112 ಪೊಲೀಸ್ ಪಡೆಗೆ ಸಲ್ಲುತ್ತದೆ.
ಶಿವಮೊಗ್ಗ: ಕಾರು ತೊಳೆಯುವಾಗ ಪಕ್ಕದ ಮನೆಯ ಗೋಡೆಗೆ ಹಾರಿತು ನೀರು, ಆಮೇಲೆ ಆಗಿದ್ದೇ ಬೇರೆ
ಇದೀಗ ಅಂತಹದ್ದೇ ಒಂದು ರೋಚಕ ಕಾರ್ಯಾಚರಣೆಯ ಮೂಲಕ ಇಬ್ಬರು 112 ಸಿಬ್ಬಂದಿಗಳು ತಮ್ಮ ಸಮಯ ಪ್ರಜ್ಞೆಯಿಂದ, ಪ್ರಾಣ ಕಳೆದುಕೊಳ್ಳಲು ನಿರ್ಧರಿಸಿದ್ದ ವೃದ್ಧರೊಬ್ಬರನ್ನು ರಕ್ಷಿಸಿ ಅವರ ಕುಟುಂಬಕ್ಕೆ ಒಪ್ಪಿಸುವ ಮೂಲಕ ಖಾಕಿಯ ಮಾನವೀಯತೆಯನ್ನು ಮೆರೆದಿದ್ದಾರೆ.
ನಡೆದದ್ದೇನು?
ಈ ಘಟನೆ ನಡೆದದ್ದು ತೀರ್ಥಹಳ್ಳಿಯ ಶಿವಮೊಗ್ಗ ಬಸ್ ಸ್ಟ್ಯಾಂಡ್ನಲ್ಲಿ. ಕಡೂರು ತಾಲೂಕಿನ ಜೋಗಿಹಳ್ಳಿಯ ವಿಶ್ವನಾಥ್ ಎಂಬುವವರಿಂದ ಬೆಳಗಿನ ಜಾವ ಕಂಟ್ರೋಲ್ ರೂಂಗೆ ಒಂದು ತುರ್ತು ಫೋನ್ ಕರೆ ಬರುತ್ತದೆ. ಆ ಕರೆಯಲ್ಲಿ, ನಮ್ಮ ತಂದೆ ಚಂದ್ರಪ್ಪ ಎಂಬುವವರು ಬೆಳಗ್ಗೆ 6:30ಕ್ಕೆ ಕಾಣೆಯಾಗಿದ್ದಾರೆ. ಅವರು ತಮ್ಮ ಸ್ನೇಹಿತರಿಗೆ ಫೋನ್ ಮಾಡಿ ನನಗೆ ಜೀವನ ಬೇಸರವಾಗಿದೆ, ನಾನು ಆಗುಂಬೆಗೆ ಹೋಗಿ ಪ್ರಾಣ ಕಳೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗುತ್ತದೆ.
ಮಾಹಿತಿ ಸಿಗುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ಪೊಲೀಸರು ಸುತ್ತಮುತ್ತಲ್ಲೆಲ್ಲಾ ಜಾಲಾಡುತ್ತಾರೆ. ಆದರೆ ಸಂಜೆಯವರೆಗೂ ಯಾವುದೇ ಸುಳಿವು ಸಿಗುವುದಿಲ್ಲ. ಕೊನೆಗೆ ಸಂಜೆ ಸುಮಾರು 4:30ಕ್ಕೆ ಈ ಪ್ರಕರಣ ತೀರ್ಥಹಳ್ಳಿ 112 ಸಿಬ್ಬಂದಿಗಳಿಗೆ ಶಿಫ್ಟ್ ಆಗುತ್ತದೆ. ಕೂಡಲೇ ಸಿಬ್ಬಂದಿ ಜಾಫರ್ ಹಾಗೂ ಡ್ರೈವರ್ ಲೋಕೇಶ್ ಅವರು ವ್ಯಕ್ತಿಯ ಫೋಟೋ ಮತ್ತು ವಿವರಗಳನ್ನು ಹಿಡಿದುಕೊಂಡು ಹುಡುಕಾಟ ಆರಂಭಿಸುತ್ತಾರೆ.
ಹೀಗೆ ತಪಾಸಣೆ ನಡೆಸುತ್ತಿದ್ದಾಗ, ತೀರ್ಥಹಳ್ಳಿಯ ಶಿವಮೊಗ್ಗ ಬಸ್ ಸ್ಟ್ಯಾಂಡ್ನಲ್ಲಿ ವೃದ್ಧರೊಬ್ಬರು ಅತ್ಯಂತ ಬೇಸರದಿಂದ ಕುಳಿತಿರುವುದು ಪೊಲೀಸರ ಗಮನಕ್ಕೆ ಬರುತ್ತದೆ. ತಕ್ಷಣ ಅವರನ್ನು ಗುರುತಿಸಿದ ಸಿಬ್ಬಂದಿಗಳು, ಅವರು ಚಂದ್ರಪ್ಪನವರೇ ಎಂದು ಖಚಿತಪಡಿಸಿಕೊಳ್ಳುತ್ತಾರೆ. ಕೂಡಲೇ ವಿಷಯವನ್ನು ಲಿಂಗದಹಳ್ಳಿ ಪೊಲೀಸ್ ಠಾಣೆಗೆ ತಿಳಿಸಿ, ಅವರ ಮಗ ವಿಶ್ವನಾಥ್ ಅವರನ್ನು ಸ್ಥಳಕ್ಕೆ ಕರೆಸಿಕೊಂಡು ವೃದ್ಧರನ್ನು ಸುರಕ್ಷಿತವಾಗಿ ಹಸ್ತಾಂತರಿಸಿದ್ದಾರೆ.

ಈ ಹಿಂದೆಯೂ ಸಹ 112 ಸಿಬ್ಬಂದಿಗಳು ಇಂತಹ ಅನೇಕ ಆತ್ಮಹತ್ಯೆ ಯತ್ನಗಳನ್ನು ತಡೆದು ಜೀವ ಉಳಿಸಿದ್ದಾರೆ. ಬಿಸಿಲಿರಲಿ, ಮಳೆಯಿರಲಿ ಏನೇ ಇರಲಿ, ಒಂದು ಫೋನ್ ಕಾಲ್ ಮಾಡಿದರೆ ಸಾಕು ಸೇವೆಗೆ ಸದಾ ಸಿದ್ಧ ಎನ್ನುವಂತೆ ಸ್ಥಳದಲ್ಲಿ ಹಾಜರಿರುವ ಈ ಸಿಬ್ಬಂದಿಗಳ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.
ಸಮಯ ಪ್ರಜ್ಞೆ ಮೆರೆದು ಒಂದು ಜೀವವನ್ನು ಉಳಿಸಿದ ಸಿಬ್ಬಂದಿಗಳಾದ ಜಾಫರ್ ಮತ್ತು ಲೋಕೇಶ್ವರಿಗೆ ಮಲೆನಾಡು ಟುಡೆ ವತಿಯಿಂದ ಆತ್ಮೀಯ ಅಭಿನಂದನೆಗಳು.
#RescueMission”Emotional Rescue Thirthahalli Police Save Elderly Man

