ಶಿವಮೊಗ್ಗ : ವ್ಯಾಪಾರದ ಹೆಸರಿನಲ್ಲಿ ಸ್ನೇಹಿತನ ಬ್ಯಾಂಕ್ ಖಾತೆಯನ್ನು ಪಡೆದು, ಅದನ್ನು ಸೈಬರ್ ವಂಚನೆಗೆ ಬಳಸಿ ಲಕ್ಷಾಂತರ ರೂಪಾಯಿ ಹಣ ದುರುಪಯೋಗಪಡಿಸಿಕೊಂಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಈ ಸಂಬಂಧ ನಗರದ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಶಿವಮೊಗ್ಗ-ತೀರ್ಥಹಳ್ಳಿ ರಸ್ತೆ ಸಂಚಾರದಲ್ಲಿ ಈ ದಿನ ಮಾರ್ಗ ಬದಲಾವಣೆ: ಯಾವಾಗ, ಏಕೆ..?
ದೂರುದಾರ ವ್ಯಕ್ತಿಗೆ ಸುಧೀಂದ್ರ ಎಂಬಾತ ಕಳೆದ 15 ವರ್ಷಗಳಿಂದ ಪರಿಚಯವಿದ್ದ ಸ್ನೇಹಿತ. ತಾನು ಹೊಸದಾಗಿ ವ್ಯಾಪಾರ ಮಾಡಬೇಕಿದೆ, ನಿನ್ನದು ಕರೆಂಟ್ ಖಾತೆ ಇರುವುದರಿಂದ ಹಣದ ವಹಿವಾಟಿಗೆ ಅನುಕೂಲವಾಗುತ್ತದೆ ಎಂದು ನಂಬಿಸಿದ್ದಾನೆ. ಅಷ್ಟೇ ಅಲ್ಲದೆ, ಹಳೆಯ ಮೊಬೈಲ್ ನಂಬರ್ ಬದಲಿಸಿ ಹೊಸ ಸಿಮ್ ಕಾರ್ಡ್ ಲಿಂಕ್ ಮಾಡಿಸಿ ಕೊಡುವಂತೆ ಕೇಳಿದ್ದಾನೆ. ತನ್ನ ಸ್ನೇಹಿತನನ್ನು ಹೆಚ್ಚಾಗಿ ನಂಬಿದ್ದ ದೂರುದಾರ, ಹೊಸ ಸಿಮ್ ಕಾರ್ಡ್ ಪಡೆದು ಬ್ಯಾಂಕ್ ಖಾತೆಗೆ ಲಿಂಕ್ ಮಾಡಿಸಿ, ಪಾಸ್ ಬುಕ್, ಎಟಿಎಂ ಕಾರ್ಡ್ ಹಾಗೂ ಚೆಕ್ ಬುಕ್ ಎಲ್ಲವನ್ನೂ ಆತನ ಕೈಗಿಟ್ಟಿದ್ದಾರೆ.
ಕೆಲ ದಿನಗಳ ನಂತರ ಅನುಮಾನಗೊಂಡು ದೂರುದಾರರು ಬ್ಯಾಂಕ್ಗೆ ಹೋಗಿ ವಿಚಾರಿಸಿದಾಗ ಅವರಿಗೆ ದೊಡ್ಡ ಶಾಕ್ ಕಾದಿತ್ತು. ಅವರ ಬ್ಯಾಂಕ್ ಖಾತೆಯು ವಿವಿಧ ರಾಜ್ಯಗಳಲ್ಲಿ ದಾಖಲಾದ ಐದು ಪ್ರತ್ಯೇಕ ಸೈಬರ್ ಕ್ರೈಂ ಪ್ರಕರಣಗಳಿಗೆ ಸಂಬಂಧಿಸಿದಂತೆ ಫ್ರೀಜ್ (Freeze) ಆಗಿರುವುದು ತಿಳಿದುಬಂದಿದೆ. ಸುಧೀಂದ್ರ ಎಂಬಾತ ಈ ಬ್ಯಾಂಕ್ ಖಾತೆಯನ್ನು ಬಳಸಿಕೊಂಡು ಲಕ್ಷಾಂತರ ರೂಪಾಯಿಗಳ ಅಕ್ರಮ ವಹಿವಾಟು ನಡೆಸಿರುವುದು ದೃಢಪಟ್ಟಿದೆ.
ಸದ್ಯ ಸೀಗೆಹಳ್ಳಿ ನಿವಾಸಿ ಸುಧೀಂದ್ರ ಎಂಬಾತನ ಮೇಲೆ ವಂಚನೆ ಮತ್ತು ದುರುಪಯೋಗದ ಆರೋಪದಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Bank Account Misuse Shivamogga Cyber Scam




