ಶಿವಮೊಗ್ಗ: ಶಿವಮೊಗ್ಗದ ವ್ಯಕ್ತಿಯೊಬ್ಬರಿಗೆ ಸೈಬರ್ ವಂಚಕರು ಆದಿತ್ಯ ಬಿರ್ಲಾ ಕ್ಯಾಪಿಟಲ್ ಹೆಸರಲ್ಲಿ ಲಾಬಾಂಶ ನೀಡುವುದಾಗಿ ನಂಬಿಸಿ ಬರೊಬ್ಬರಿ 12 ಲಕ್ಷ ರೂಪಾಯಿ ವಂಚಿಸಿದ್ದಾರೆ. ಈ ಹಿನ್ನೆಲೆ ಶಿವಮೊಗ್ಗದ ಸಿ ಇ ಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ವಿವರ
ದೂರುದಾರರು ಮೊಬೈಲ್ನಲ್ಲಿ ಜಾಹೀರಾತೊಂದನ್ನು ನೋಡುತ್ತಿದ್ದರು. ಅದರಲ್ಲಿ ಸ್ಟಾಕ್ ಟ್ರೇಡಿಂಗ್ ಮತ್ತು ಆದಿತ್ಯ ಬಿರ್ಲಾ ಕ್ಯಾಪಿಟಲ್ ಹೆಸರಿನಲ್ಲಿ ಹೂಡಿಕೆ ಮಾಡಿದರೆ ದೊಡ್ಡ ಮೊತ್ತದ ಲಾಭಾಂಶ ದೊರೆಯುತ್ತದೆ ಎಂದು ಹೇಳಲಾಗಿತ್ತು. ಇದನ್ನು ನಿಜವೆಂದು ನಂಬಿದ ಸಂತ್ರಸ್ತರು, ಜನವರಿ 26 ರಿಂದ ಫೆಬ್ರವರಿ 10 ರ ಅವಧಿಯಲ್ಲಿ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು 12.15 ಲಕ್ಷ ರೂಪಾಯಿಗಳನ್ನು ವರ್ಗಾವಣೆ ಮಾಡಿದ್ದರು.
ಸಂತ್ರಸ್ತ ವ್ಯಕ್ತಿ ತಾವು ಹೂಡಿಕೆ ಮಾಡಿದ್ದ ಹಣದಲ್ಲಿ 10 ಲಕ್ಷ ರೂಪಾಯಿಗಳನ್ನು ಹಿಂಪಡೆಯಲು ಪ್ರಯತ್ನಿಸಿದಾಗ ತಾಂತ್ರಿಕ ತೊಂದರೆ ಎದುರಾಗಿದೆ. ಈ ಬಗ್ಗೆ ವಂಚಕರನ್ನು ಸಂಪರ್ಕಿಸಿದಾಗ, ಪೂರ್ತಿ ಹಣ ಬಿಡುಗಡೆಯಾಗಬೇಕಾದರೆ ಒಟ್ಟು ಮೊತ್ತದ ಶೇಕಡಾ 30 ರಷ್ಟು ಹಣವನ್ನು ಹ್ಯಾಂಡ್ಲಿಂಗ್ ಚಾರ್ಜ್’ ರೂಪದಲ್ಲಿ ಪಾವತಿಸಬೇಕು ಎಂಬ ಬೇಡಿಕೆಯನ್ನು ಇಟ್ಟಿದ್ದಾರೆ. ಇದರಿಂದ ಅನುಮಾನಗೊಂಡ ವ್ಯಕ್ತಿ ಪರಿಚಯಸ್ಥರ ಬಳಿ ವಿಚಾರಿಸಿದಾಗ ತಾವು ವಂಚನೆಗೆ ಒಳಗಾಗಿರುವುದು ದೃಢಪಟ್ಟಿದೆ. ತಕ್ಷಣವೇ ಎಚ್ಚೆತ್ತುಕೊಂಡ ಅವರು ಶಿವಮೊಗ್ಗ ಸೈಬರ್ ಪೊಲೀಸರಿಗೆ ದೂರನ್ನು ನೀಡಿದ್ದಾರೆ.
Shimoga Cyber Fraud Man Loses 12 Lakhs

