KARNATAKA NEWS/ ONLINE / Malenadu today/ SHIVAMOGGA / Apr 23, 2023 GOOGLE
ಶಿಕಾರಿಪುರ ಶಿವಮೊಗ್ಗ / ವರುಣಾದಲ್ಲಿ ಸಿದ್ದರಾಮಯ್ಯ ವಿಜಯೇಂದ್ರ ನಿಲ್ಲೋದಿಲ್ಲ, ಶಿಕಾರಿಪುರದಲ್ಲಿ ಕಾಂಗ್ರೆಸ್ನಿಂದ ಬಲಿಷ್ಟ ಅಭ್ಯರ್ಥಿ ಹಾಕೋದಿಲ್ಲ! ಹೀಗೊಂದು ಮ್ಯಾಚ್ ಫಿಕ್ಸಿಂಗ್ ಆಗಿದೆ ಎನ್ನುತ್ತೆ ಆರೋಪ.
ಶಿಕಾರಿಪುರದಲ್ಲಿ ಎದ್ದಿರೋ ಕಾಂಗ್ರೆಸ್ ಬಂಡಾಯದಲ್ಲಿ ಸಾರಿ ಸಾರಿ ಇದೇ ಆರೋಪವನ್ನ ದೂರಲಾಗ್ತಿದೆ. ಸಾಲದ್ದಕ್ಕೆ ಕೈ ಪಾರ್ಟಿಗೆ ಬೆನ್ನು ತೋರಿಸಿ ಸಾಲು ಸಾಲು ಮಂದಿ ಶಿಕಾರಿಪುರ ಬಂಡಾಯಕ್ಕೆ ಜೊತೆಯಾಗುತ್ತಿದ್ಧಾರೆ. ಹೆಬ್ಬಲಿಯ ಶಿಕಾರಿ ಮಾಡಿಯೇ ಸಿದ್ಧವೆಂದು ತೊಡೆ ತಟ್ಟುತ್ತಿದ್ದಾರೆ.
ಚಿಕ್ಕಪ್ಪನ ಬಂಡಾಯ
ನಾಗರಾಜ್ ಗೌಡ ರಿಗೆ ಕೊಟ್ಟಿಲ್ಲ ಅಂತಾ ಚಿಕ್ಕಪ್ಪ ಹಾಗೂ ಕೆಪಿಸಿಸಿ ವಕ್ತಾರ ಶಾಂತವೀರಪ್ಪ ಗೌಡ ಪ್ರ ಅಭಯ ಹಸ್ತಕ್ಕೆ ಗುಡ್ ಬೈ ಹೇಳಿದ್ದಾರೆ.. ರಾಜೀನಾಮೆ ಘೋಷಿಸಿ, ಸಿದ್ದರಾಮಯ್ಯ ಮತ್ತು ಬಿಎಸ್ ಯಡಿಯೂರಪ್ಪನವರ ನಡುವೆ ಮ್ಯಾಚ್ ಫಿಕ್ಸಿಂಗ್ ಆಗಿದೆ ಅಂತಾ ಮೈಕ್ ಹಿಡಿದು ಸಾರುತ್ತಿದ್ದಾರೆ.

ಕೈ ಕೊಟ್ಟು ಕೈ ಜೋಡಿಸಿದ ಕಾಂಗ್ರೆಸಿಗರು
ಶಾಂತವೀರಪ್ಪ ಗೌಡರ ರಾಜಕೀಯ ಜೀವನದಲ್ಲಿ ರಾಜೀನಾಮೆ ಹಾಗೂ ಪಕ್ಷ ಸೇರ್ಪಡೆ ಬೆಂಬಲ ಬಂಡಾಯಗಳೆಲ್ಲವೂ ಸಾಮಾನ್ಯವೇ ಆದರೆ ಇಲ್ಲಿ ಅಚ್ಚರಿಗೆ ಕಾರಣವಾಗಿರುವುದು ಇಬ್ಬರು ಬಂಡಾಯಗಾರರು ಕೈ ಮೀಲಾಯಿಸಿ ಹೆಬ್ಬುಲಿಯ ಶಿಕಾರಿಗೆ ನಿಂತಿರೋದು.!
ವಿಜಯೇಂದ್ರ ವಿಜಯ ಸುಲಭವಲ್ಲ
ಶಿಕಾರಿಪುರದ ಬಂದ ವರ್ತಮಾನದಲ್ಲಿ ಬಿ.ವೈ ವಿಜಯೇಂದ್ರರ ಮೊದಲ ಚುನಾವಣೆಯು ಕೇವಲ ಅವರ ಪ್ರಖ್ಯಾತಿಗೆ ನಿಲುಕುವ ತುತ್ತಲ್ಲ. ಇದಕ್ಕೆ ಮೊದಲ ಕಾರಣ ಎಸ್ಸಿ ಒಳ ಮೀಸಲಾತಿಯ ಪರಿಷ್ಕರಣೆಯಲ್ಲಿ ಎದ್ದಿರುವ ಆಕ್ರೋಶ. ಎರಡನೇ ಕಾರಣ ಕಾಂಗ್ರೆಸ್ನಲ್ಲಿನ ಬಂಡಾಯ!

ತೆನೆ ಇಳಿಸಿದ ಜೆಡಿಎಸ್
ಜೆಡಿಎಸ್ ಇಲ್ಲಿ ತನ್ನನ್ನ ಅಪ್ರಸ್ತುತಗೊಳಿಸಿಕೊಂಡು ಪಕ್ಷೇತರ ಅಭ್ಯರ್ಥಿ ನಾಗರಾಜ್ ಗೌಡರಿಗೆ ಬೆಂಬಲ ಕೊಟ್ಟಿದೆಯಂತೆ. ಆ ಪಕ್ಷದ ಅಭ್ಯರ್ಥಿಯಾಗಬೇಕಿದ್ದರೂ ಚುನಾವಣಾ ಪ್ರವರ ಆರಂಭಕ್ಕೂ ಮೊದಲೇ ಬಿಎಸ್ವೈ ಬಣ ಸೇರಿದ್ದರು.. ತೆನೆ ಇಳಿಸಿದ ಶಿಕಾರಿಪುರದಲ್ಲಿ ನೇರಾನೇರಾ ಹಣಾಹಣಿಯಾಗಬೇಕಿದ್ದಿದ್ದು ಕಾಂಗ್ರೆಸ್ ಮತ್ತು ಬಿಜೆಪಿಯ ನಡುವೆಯೇ ಆಗಿತ್ತು. ಆದರೆ ಸದ್ಯ ಪಕ್ಷೇತರ ಹಾಗೂ ವಿಜಯೇಂದ್ರರ ನಡುವೆ ಶಿಕಾರಿಪುರದ ಶಿಕಾರಿಗೆ ಪೈಪೋಟಿ ನಡೆಯುತ್ತಿದೆ.
ಕೈ ಜೋಡಿಸಿದ ಎದುರಾಳಿ
ಟಿಕೆಟ್ ಕೊಡದಿದ್ದಕ್ಕೆ ನಾಗರಾಜ್ ಗೌಡ ಬಂಡಾಯವೆದ್ದು ಕಾಂಗ್ರೆಸ್ ವಿರುದ್ಧ ಕಹಳೆ ಮೊಳಗಿಸುತ್ತಲೇ ಅವರ ಸಮುದಾಯ ಅವರನ್ನ ದೇಣಿಗೆ ಕೊಟ್ಟು ಚುನಾವಣೆಯ ದೋಣಿ ಹತ್ತಿಸಿದೆ. ಬೆಂಬಲಿಗರು ಹುಟ್ಟುಹಾಕುತ್ತಾ ದೋಣಿ ಮುನ್ನಡೆಸ್ತಿರುವಾಗ ನಾಗರಾಜ್ ಗೌಡರಿಗೆ ಎದುರಾಳಿಯ ಸಾಂಗತ್ಯವೂ ಜೊತೆಯಾಗಿದೆ.
ಸ್ವಾಭಿಮಾನಿ ತಂಡ
ಸ್ವಾಮಿಭಾನಿ ಅಭಿಮಾನಿಗಳ ಹೆಸರಿನಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ನಾಗರಾಜ್ ಗೌಡರಿಗೆ ಬೆಂಬಲ ಘೋಷಿಸಿರುವ ಮತ್ತೊಬ್ಬ ಬಂಡಾಯ ಅಭ್ಯರ್ಥಿ ರಾಘವೇಂದ್ರ ನಾಯ್ಕ್ ತಮ್ಮ ನಾಮಪತ್ರ ವಾಪಸ್ ಪಡೆದಿದ್ದಾರೆ. ಸಾರಸಗಟಾಗಿ ತಮ್ಮ ಸಪೋರ್ಟ್ ಕೊಟ್ಟು ನಾಗರಾಜ್ ಗೌಡರ ಕೈ ಮೇಲಕ್ಕೆತ್ತಿದ್ದಾರೆ. ಸದ್ಯ ಶಿಕಾರಿಪುರದ ಈ ನೂತನ ಸಂಗ್ಯಬಾಳ್ಯರ ಬಗ್ಗೆ ಬಾಳ ಚರ್ಚೆ ಆರಂಭವಾಗಿದೆ.
ಹೆಬ್ಬುಲಿಯು ಸುಮ್ಮನೆ ಇಲ್ಲ
ಅತ್ತ ಕಾಂಗ್ರೆಸ್ ತನ್ನ ಮನೆ ಮಕ್ಕಳಿಂದಲೇ ಕೊರಗುತ್ತಿದೆ, ಚೂರು ಸೊರಗುತ್ತಿದೆ. ಆದರೆ ರಾಜುಹುಲಿಯ ಮಗ ಹೆಬ್ಬುಲಿಗೆ ಕ್ಷೇತ್ರದಲ್ಲಿನ ಪೈಪೋಟಿಯ ಟೆನ್ಶನ್ ತಟ್ಟಿದಂತೆ ಕಾಣುತ್ತಿಲ್ಲ.
ಸರ್ ಅಡ್ಜೆಸ್ಟ್ಮೆಂಟ್ ಆಗಿದೆಯಂತೆ ಹೌದಾ ಎಂದರೆ, ನಮಗೆ ಸಿದ್ದರಾಮಯ್ಯ ಜತೆ ಒಳ ಒಪ್ಪಂದದ ಅವಶ್ಯಕತೆ ಇಲ್ಲ, ಶಿಕಾರಿಪುರದಲ್ಲಿ ಹಿಂದಿನಿಂದಲೂ ಸುಲಭದ ಗೆಲುವು ಸಾಧಿಸುತ್ತಿದ್ದೇವೆ.
ಹಿಂದೊಮ್ಮೆ ಸರ್ಕಾರದ ಇಡೀ ಮಂತ್ರಿ ಮಂಡಲವೇ ಶಿಕಾರಿಪುರದಲ್ಲಿ ನಿಂತರೂ ಬಿ.ವೈ ರಾಘವೇಂದ್ರ ಅವರನ್ನು ಸೋಲಿಸಲು ಸಾಧ್ಯವಾಗಿರಲಿಲ್ಲ. ಮ್ಯಾಚ್ ಫಿಕ್ಸಿಂಗ್ ಆಗಿದ್ದರೇ ನ್ಯಾನಾಕೆ ವರುಣಕ್ಕೆ ಬರುತ್ತಿದೆ ಎಂದು ಮೈಸೂರಿನಲ್ಲಿ ಸವಾಲ್ ಹಾಕಿದ್ದಾರೆ.

ರಾಜಾಹುಲಿಗೆ ಸವಾಲ್
ಬಿಜೆಪಿ ಹೈಕಮಾಂಡ್ ಕಾಂಗ್ರೆಸ್ ನಾಯಕರಿಗೆ ಅವರರವರ ಕ್ಷೇತ್ರದಲ್ಲಿಯೇ ಕಟ್ಟು ಹಾಕಿ, ತನ್ನದೆ ಕಟ್ಟಾಳುಗಳಿಗೆ ನಿವೃತ್ತಿ ಕೊಟ್ಟು, ಬಂಡಾಯ ಎದ್ದವರ ವಿರುದ್ಧ ಸಂಘ ಧಕ್ಷ ಎನ್ನುತ್ತಿದೆ.
ಅಲ್ಲದೆ ಅಮಿತ್ ಶಾ ಮೋದಿ ತಂತ್ರಗಳನ್ನು ಹೂಡಿ ಗೆಲುವಿನ ಸಾಪ್ಟ್ವೇರ್ ಗೆ ಹೊಸ ರೂಪ ಕೊಡಲು ಹೊರಟಿದೆ.
ಪಕ್ಷವೊಂದು ಕೈಗೊಳ್ಳಬೇಕಾದ ಈ ರಣತಂತ್ರವೂ ಶಿಕಾರಿಪುರದಲ್ಲಿ ಪಕ್ಷೇತರರಿಂದ ಜಾರಿಯಾಗಿದೆ. ನಾಗರಾಜ್ ಗೌಡ ರಾಘವೇಂದ್ರ ನಾಯ್ಕ್ ರಾಜ್ಯ ರಾಜಕಾರಣದ ಪವರ್ ಸ್ಟಾರ್ಗಳನ್ನು ಅವರ ತವರಲ್ಲಿಯೇ ಕಟ್ಟಿಹಾಕಲು ಮುಂದಾಗಿದ್ದಾರೆ.
ಇದು ಬಿಎಸ್ ಯಡಿಯೂರಪ್ಪನವರಿಗೆ ಸುಲಭವಾಗಿ ಅರ್ಥವಾಗುವಂತದ್ದು. ಹಾಗಂತ ಅವರು ತಮ್ಮೆದುರು ಬಂದು ಬೀಳುತ್ತಿರುವ ಈ ಸವಾಲುಗಳಿಗೆ ಪ್ರತ್ಯುತ್ತರ ನೀಡುತ್ತಿಲ್ಲ.ಬದಲಾಗಿ ತಮ್ಮ ಹಳೆಯ ಕಾರ್ಯತಂತ್ರಗಳಿಗೆ ಚೂರು ಸಾಣೆ ಕೊಡುತ್ತಿದ್ದಾರೆ.
ಒಟ್ಟಾರೆ, ಶಿಕಾರಿಪುರ ಕದನದಲ್ಲಿ ಪಕ್ಷಗಳು ಗೌಣವಾದರೂ ವಿಜಯೇಂದ್ರ ಶಿಕಾರಿ ಮಾಡಿಯೇ ತೀರುತ್ತೇವೆ ಅಂತಾ ಪಕ್ಷೇತರರು ಹೊರಟಿದ್ದಾರೆ. ಆದರೆ, ಅಪ್ಪ ಮತ್ತು ಅಣ್ಣನ ಸಾರಥ್ಯದಲ್ಲಿ ಅಶ್ವಮೇದಕ್ಕೆ ಹೊರಟಿರುವ ವಿಜಯೇಂದ್ರರನ್ನು ಕಟ್ಟಿ ಹಾಕುವುದು ಸಾಧ್ಯನಾ? ಎನ್ನುತ್ತಿದೆ ಹೆಬ್ಬುಲಿ ಬಳಗ
