ಮನೆ ಖಾಲಿಮಾಡಿಸಿದ್ರೂ, ಬಹಿಷ್ಕಾರ ಹಾಕಿದ್ರೂ ಕೋವಿಡ್​ನಿಂದ ಮೃತಪಟ್ಟ 450 ಕ್ಕೂ ಹೆಚ್ಚು ಶವಗಳ ಅಂತ್ಯ ಸಂಸ್ಕಾರ ಮಾಡಿದ ಮಹಾನುಭಾವ!

Published: 30 ಜೂನ್ 2021, 5:20 ಫೂರ್ವಾಹ್ನ • 1 min read

Malenadu today special Story : ಈತ ಕಲಿಗಾಲದ ವೀರಬಾಹು! ಮನೆ ಖಾಲಿಮಾಡಿಸಿದ್ರೂ, ಬಹಿಷ್ಕಾರ ಹಾಕಿದ್ರೂ ಕಾಯಕ ಬಿಡದ ಮುಕ್ತಿದಾತ! ಕೋವಿಡ್​ನಿಂದ ಮೃತಪಟ್ಟ 450 ಕ್ಕೂ ಹೆಚ್ಚು ಶವಗಳ ಅಂತ್ಯ ಸಂಸ್ಕಾರ ಮಾಡಿದ ಮಹಾನುಭಾವ!

ಕಾಲೋನಿ ಜನರಿಂದ ಬಹಿಷ್ಕಾರಕೊಳಾಗಾದರೂ, ಮೂರು ಸಲ ಮನೆ ಖಾಲಿ ಮಾಡಿಸಿದರೂ , ಮಹಾಮಾರಿ ಕೋವಿಡ್ ನಿಂದ ಮೃತಪಟ್ಟರವರ ಶವಗಳನ್ನ ತನ್ನ ಕುಟುಂಬದ ಸದಸ್ಯರಂತೆಯೇ ಅವರ ಜಾತಿ, ಧರ್ಮದ, ಪದ್ದತಿಯಂತೆ ಶಾಸ್ತ್ರೋಕ್ತವಾಗಿ ಅಂತ್ಯ ಸಂಸ್ಕಾರ ಮಾಡಿದ ಮಹಾನುಭಾವನ ಕಥೆಯಿದು.

ಆತ 450೦ ಕ್ಕೂ ಹೆಚ್ಚು ಶವಗಳ ಅಂತ್ಯ ಸಂಸ್ಕಾರ ಮಾಡುವ ಮೂಲಕ ತೆರೆ ಮರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾನೆ. ಆತನ ಹೆಸರು ಹುಲುಗಪ್ಪ.

 The story of a man cremating more than 450 bodies during Covid

ಬಳ್ಳಾರಿ ನಗರದ ಹರಿಶ್ಚಂದ್ರ ಘಾಟ್ ನ ಚಿತಾಗಾರದಲ್ಲಿ ಕಳೆದ ಒಂಬತ್ತು ವರ್ಷಗಳಿಂದ ಶವಗಳನ್ನ ದಹನ ಮಾಡುವ ಕಾಯಕವನ್ನ ಅಂತ್ಯಂತ ನಿಷ್ಟೆಯಿಂದ ಮಾಡಿಕೊಂಡು ಬರುತ್ತಿದ್ದಾನೆ.

ಲಾಕ್ಡೌನ್ ಅಗಿ ಎಲ್ಲಾ ಕೆಲಸಗಳಿಗೆ ಬ್ರೇಕ್ ಬಿದ್ದಿತ್ತಾದ್ರು ಹುಲುಗಪ್ಪನ ಕೆಲಸ ದುಪ್ಪಟ್ಟಾಗಿತ್ತು. ಆದರೂ ಹುಲಗಪ್ಪ ನೊಂದುಕೊಳ್ಳಲಿಲ್ಲ. ಆದರೆ ಆಘಾತಕ್ಕೆ ಓಳಗಾಗಿದ್ದ . ಶವಗಳ ಸಂಖ್ಯೆ ಹೆಚ್ಚಾಗುತ್ತಿದ್ದುದ್ದನ್ನ ಕಂಡು, ಮರುಗುತ್ತಿದ್ದ. ಚಿಕ್ಕ ಪ್ರಾಯದ ಯುವಕರ ಯುವತಿಯರ ಮೃತದೇಹ ಕಂಡರಂತೂ ಕಣ್ಣೀರು ಇಡುತ್ತಿದ್ದ.

ಅದ್ಯಾವ ಸುಡುಗಾಡು ಕಾಯಿಲೆಯೋ ತಂದೆ, ಬದುಕಿಸಯ್ಯ ಜನರನ್ನು ಎಂದು ಬೇಡಿಕೊಳ್ಳುತ್ತಾ, ದೇಹಕ್ಕೆ ಮುಕ್ತಿ ನೀಡುವ ಕಾಯಕದಲ್ಲಿ ತೊಡಗಿಕೊಳ್ಳುತ್ತಿದ್ದ.

ವಿಶೇಷ ಅಂದರೆ, ತನ್ನ ಈ ಕಾಯಕದಲ್ಲಿ ಹುಲುಗಪ್ಪ 450 ಕ್ಕು ಹೆಚ್ಚು ಶವಗಳನ್ನು ತಾನೆ ಮುಂದೆ ನಿಂತು ಅಂತ್ಯಕ್ರಿಯೆ ನಡೆಸಿದ್ದಾನೆ. ಈ ಶವಗಳ ಅಂತ್ಯಕ್ರಿಯೆ ನಡೆಸಲು ಅವರ ಕುಟುಂಬಸ್ಥರೆ ಮುಂದಕ್ಕೆ ಬಂದಿರಲಿಲ್ಲ.

ಆದರೆ ಯಾರಿಲ್ಲದವನಿಗೆ ಸ್ಮಶಾನ ಕಾಯುವವನೆ ನೆಂಟನೆಂಬಂತೆ, ಹುಲಗಪ್ಪ ಮುಂದೆ ನಿಂತು ಪ್ರತಿ ಶವಕ್ಕೂ ಶಾಸ್ತ್ರೋಕ್ತವಾಗಿ ಅಂತ್ಯಕ್ರಿಯೆ ನಡೆಸಿದ್ದಾರೆ. ಮೇಲಾಗಿ ಕೊನೆ ಪಕ್ಷ ಆತ್ಮಕ್ಕೆ ಮುಕ್ತಿ ಸಿಗಲಿ ಎನ್ನುವ ಕಾರಣ , ತಾನು ಅಂತ್ಯಕ್ರಿಯೆ ನಡೆಸಿದವರ ಅಸ್ತಿಯನ್ನು ಅವರವರ ಕುಟುಂಬಕ್ಕೆ ತಲುಪಿಸುವ ಕೆಲಸವನ್ನು ಮಾಡಿದ್ದಾರೆ.

ಈ ವಿಷಯದಲ್ಲಿ ಹುಲಗಪ್ಪ ಎಷ್ಟು ಕಷ್ಟ ಅನುಭವಿಸಿದ್ಧಾರೆ ಎಂದರೆ, ಅವರನ್ನ ಮನೆಯಿಂದ ಹೊರಕ್ಕೆ ಹಾಕಲಾಯ್ತು. ಕೋವಿಡ್​ ಸೋಂಕಿತರನ್ನ ಸುಡುತ್ತಾರೆ. ಎಲ್ಲಿ ಸೋಂಕು ಹರಡುತ್ತೋ ಅಂತಾ ಯಾರು ಮನೆಗೆ ಬಿಟ್ಟುಕೊಳ್ಳಲಿಲ್ಲ. ಹಾಗೂ ಹೀಗೂ ಬಾಡಿಗೆ ಹಿಡಿದು ಮನೆ ಮಾಡಿದರೂ, ಮತ್ತೆ ಸಾಮಾನುಗಳನ್ನು ಹೊರಕ್ಕೆ ಹಾಕಿ, ಮನೆಯಿಂದ ಹೊರದಬ್ಬಲಾಯ್ತು.

ಹೀಗೆ ಮೂರು ಸಲ ಮನೆ ಖಾಲಿ ಮಾಡಿಸಿದರೂ ಹುಲುಗಪ್ಪ ಜಗ್ಗಲಿಲ್ಲ. ಎಲ್ಲರೂ ಸೇರುವುದು ಸ್ಮಶಾನಕ್ಕೆ ಕಣ್ರೋ ಅನ್ನುತ್ತಾ ತನ್ನ ಕಾಯಕ ಮಾಡುತ್ತಿದ್ದ. ಈ ಮಧ್ಯೆ ಹುಲಗಪ್ಪನಿಗೆ ಬೆದರಿಕೆ ಹಾಕಿದ್ರು, ಬಹಿಷ್ಕಾರ ವಿಧಿಸಿದರು. ಆದಾಗ್ಯು ಪುಣ್ಯದ ಕಾರ್ಯವನ್ನು ಕೈ ಬಿಡೆನು ಅಂತಾ ಹುಲುಗಪ್ಪ ಹಠ ಹಿಡಿದಿದ್ದ.

ತಂದೆ ಸತ್ತರೆ ಮಗ ಬರುತ್ತಿರಲಿಲ್ಲ. ಗಂಡ ಸತ್ತರೆ ಹೆಂಡತಿ ಬರುತ್ತಿರಲಿಲ್ಲ ಅಲ್ಲೆ ಅಂಬ್ಯುಲೆನ್ಸ್ ಗೆ ಶವ ಏರುತ್ತಲೇ ದೂರದಲ್ಲಿಯೇ ಮುಖ ತೋರಿಸಿ ಅಂತಾ ಪಿಪಿಇ ಕಿಟ್​ ಹಾಕ್ಕೊಂಡವರ ಬಳಿ ಹೇಳಿ, ಆಂಬುಲೆನ್ಸ್​ಗೆ ಮೂರು ಸುತ್ತು ಹಾಕಿ ಸಂಬಂಧಿಕರು ಹೊರಟುಬಿಡುತ್ತಿದ್ದರು.

ಆದರೆ, ಅನಾಥವಾಗಿ ಸ್ಮಶಾನ ಸೇರಿದ ಶವಗಳನ್ನು ಅಸಡ್ಡೆ ತೋರದೆ ಬೇಕಾಬಿಟ್ಟಿಯಾಗಿ ಸುಡದೆ, ಅದಕ್ಕೆ ಸಲ್ಲಬೇಕಾದ ಸಂಸ್ಕಾರವನ್ನು ಮಾಡಿಯೇ ಸುಡುತ್ತಿದ್ದರು.

ಹೀಗೆ ಅಂತ್ಯಸಂಸ್ಕಾರದ ಕಾಯಕದಲ್ಲಿ ದಣಿದು ಬೆವತ ಮೈ, ಬೆಂಕಿಗೆ ಸುಡುತ್ತಿತ್ತು. ಯಾಕೆಂದರೆ ಒಮ್ಮೊಮ್ಮೆ 15 ಕ್ಕೂ ಹೆಚ್ಚು ಶವಗಳನ್ನು ಅಂತ್ಯಸಂಸ್ಕಾರದ ಮಾಡಬೇಕಾದ ಅನಿವಾರ್ಯತೆಯಲ್ಲಿಯು ಹುಲಗಪ್ಪ ಕೆಲಸ ಮಾಡಿದ್ದಾರೆ.

ಬೆಳಗ್ಗೆ ಬಂದು ರಾತ್ರಿ ಕ್ಯಾಲೆಂಡರ್​ನಲ್ಲಿ ದಿನ ಬದಲಾದರೂ ಹುಲಗಪ್ಪ, ಎಲ್ಲರಿದ್ದೂ ಅನಾಥವಾದ ಶವಗಳ ಅಂತ್ಯಕ್ರಿಯೆಯಲ್ಲಿ ತೊಡಗಿಕೊಂಡಿದ್ದ. ಕೊರೊನಾ ಕಾಟಕ್ಕೆ ನಲುಗಿ ನೋಂದು ಸಾವನ್ನಪ್ಪಿದ್ದವರ ಮುಖವನ್ನ ಒಮ್ಮೆ ನೋಡಿ, ದೇವರೆ ಎಂದು ನಿಟ್ಟುಸಿರು ಬಿಟ್ಟು, ಬೆಂಕಿ ಕೊಡುತ್ತಿದ್ದ.

ಎಷ್ಟರ ಮಟ್ಟಿಗೆ ತನಗೆ ಸೋಂಕು ಬಂದರೂ ಪರವಾಗಿಲ್ಲ ಎಂಬಂತಿದ್ದ ಹುಲಗಪ್ಪನಿಗೆ ಅಂತಸಂಸ್ಕಾರ ಕಂಡ ಮೃತದೇಹಗಳ ಆತ್ಮಗಳೇ ಹರಿಸದವೋ ಏನೋ ಕೋವಿಡ್​ ಹುಲಗಪ್ಪನನ್ನ ಕಾಡಲಿಲ್ಲ.

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY

Malenadu Today

Senior Journalist | Malenadu Today
✓ Verified Journalist