SHIVAMOGGA | Dec 29, 2023 | ಬಹಿಷ್ಕಾರವನ್ನೇ ಬ್ಯಾನ್ ಮಾಡಿದ್ರೂ ಊರು ಮನೆಗಳಲ್ಲಿ ಬಹಿಷ್ಕಾರ ಹಾಕೋದು ನಿಂತಿಲ್ಲ. ಶಿವಮೊಗ್ಗ ಜಿಲ್ಲೆ ಚೋರಡಿಯ ಹೊರಬೈಲ್ನಲ್ಲಿ ಸಾಮಾಜಿಕ ಬಹಿಷ್ಕಾರಕ್ಕೊಂದು ಮತ್ತೊಂದು ಉದಾಹರಣೆ ಸಿಕ್ಕಿದೆ.
ಪರಿಶಿಷ್ಟ ವರ್ಗದ ಯುವತಿಯನ್ನ ಮದುವೆಯಾಗಿದ್ದ ಸಮುದಾಯವೊಂದು ಬಹಿಷ್ಕಾರ ಹಾಕಿದ ಬಗ್ಗೆ ಶಿವಮೊಗ್ಗ ಜಿಲ್ಲೆ ಚೋರಡಿಯ ಹೊರಬೈಲ್ನಿಂದ ವರದಿಯೊಂದು ಹೊರಬಿದ್ದಿದೆ. ಈ ಸಂಬಂಧ ಕುಂಸಿ ಪೊಲೀಸ್ ಸ್ಟೇಷನ್ನಲ್ಲಿ ಕೇಸ್ ಸಹ ದಾಖಲಾಗಿದೆ.
READ : Arecanut Rate? ಅಡಿಕೆ ದರ ಎಷ್ಟಿದೆ ! ಯಾವ್ಯಾವ ತಾಲ್ಲೂಕು ಮಾರುಕಟ್ಟೆಯಲ್ಲಿ ಎಷ್ಟಾಗಿದೆ ಅಡಿಕೆ ರೇಟು!?
ದಾಖಲಾದ ಕೇಸ್ನ ಪ್ರಕಾರ, ಜೋಗಿ ಸಮುದಾಯದ ಯುವಕ ಹಾಗೂ ಪರಿಶಿಷ್ಟ ಜಾತಿಯ ಯುವತಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಾರೆ. ಮದುವೆಯಾಗಿ ಆರಂಭದಲ್ಲಿ ಯುವತಿಯನ್ನ ಮನೆ ಸೇರಿಸಿಕೊಂಡ ಕುಟುಂಬ ಯಾವುದೇ ಸಮಸ್ಯೆ ಇಲ್ಲದೇ ಚೆಂದ..ಚೆಂದ ಎಂಬಂತೆ ಇದ್ದರು. ಈ ನಡುವೆ ಯುವತಿಯನ್ನ ಹೊರತು ಪಡಿಸಿ, ಪತಿಯ ಕುಟುಂಬಸ್ಥರು ಊರೊಳಗೆ ಹೋಗಿ ಮನೆಗೆ ವಾಪಸ್ ಬರುವಷ್ಟರಲ್ಲಿ ಬೇಸರದ ಮುಖಹೊತ್ತು ಬರಲು ಆರಂಭಿಸಿದ್ರು. ಆನಂತರ ಯುವತಿಗೆ ಗೊತ್ತಾಗಿದ್ದು, ತನ್ನನ್ನ ಮದುವೆಯಾಗಿದ್ದಕ್ಕೆ ಯುವಕನ ಕುಟುಂಬವನ್ನ ಯಾರು ಸೇರಿಸ್ತಿಲ್ಲ ಎನ್ನುವ ಸಂಗತಿ. ಅಂಗಡಿಗೆ ಸೇರಿಸದೇ ಇರೋದು. ಮನೆಯೊಳಗೆ ಕರೆದುಕೊಳ್ಳದಿರುವುದು. ಊರು ಮನೆಯಲ್ಲಿ ಮಾತನಾಡಿಸದೇ ಇರೋದು. ಹೀಗೆ ಊರೆಲ್ಲಿ ಏನೋ ನಡೆಯುತ್ತಿದೆ ಎಂಬುದು ಯುವತಿಗೆ ಗೊತ್ತಾಗಿದೆ.
ಪ್ರೀತಿಸಿ ಮದುವೆಯಾದ ಯುವಕ ಯುವತಿ ಹಾಗೂ ಅವರ ಪರಿವಾರವನ್ನು ಕಳೆದ ನಾಲ್ಕು ತಿಂಗಳಿನಿಂದ ದೂರವಿಟ್ಟಿದ್ದಾರೆ ಎಂಬುದು ಸಂತ್ರಸ್ತೆಯ ಆರೋಪ. ಯಾವಾಗ ಇದನ್ನ ಸಹಿಸಿಕೊಳ್ಳಲು ಆಗಲಿಲ್ವೋ ಸಿಡಿದ ಯುವತಿ ನೇರವಾಗಿ ತನ್ನ ಪತಿಯ ಜೊತೆಗೆ ಕುಂಸಿ ಪೊಲೀಸ್ ಸ್ಟೇಷನ್ನ ಮೆಟ್ಟಿಲೇರಿದ್ದಾಳೆ. ರಿಜಿಸ್ಟರ್ ಆಗಿರುವ ಅಂತರ್ ಜಾತಿ ವಿವಾಹದ ಕುರಿತಾಗಿ ಊರು ಮನೆಯವರು ಗೌಪ್ಯ ಸಭೆಯನ್ನ ನಡೆಸಿರುವ ಸಂಗತಿಯನ್ನ ಪೊಲೀಸರ ಮುಂದೆ ದಂಪತಿ ವಿವರಿಸಿದ್ದಾರೆ.
ಮಾತನಾಡಿಸಿದರೇ ಸಾವಿರ ರೂಪಾಯಿ ದಂಡ
ಅಂತರ್ ಜಾತಿ ವಿವಾಹವಾದ ಕುಟುಂಬವನ್ನ ಯಾರು ಸಂಪರ್ಕಿಸಬಾರದು ಎಂಬಂತಹ ಗೌಪ್ಯಸಭೆಯೊಂದು ಊರು ಮನೆಯಲ್ಲಿ ನಡೆದಿದೆಯಂತೆ. 30 ಮನೆಯ ಊರವರು ಜಮಾಯಿಸಿದ್ದ ಗೌಪ್ಯ ಸಭೆಯ ವಿವರವನ್ನು ಸಹ ಹೊರಹಾಕಬಾರದು ಎಂದು ಷರತ್ತು ಹಾಕಿದ್ರಂತೆ. ಸಂತ್ರಸ್ತ ಕುಟುಂಬದವರನ್ನ ಹಾಗೂ ಅವರಿಗೆ ಹೆಗಲು ಕೊಟ್ಟಿರುವ ಕುಟುಂಬದ ಸಂಬಂಧಿಕರನ್ನ ಮಾತನಾಡಿಸಬಾರದು. ಹಾಗೆ ಮಾತನಾಡಿಸದರೇ 1000 ರೂಪಾಯಿ ದಂಡ ಹಾಕುವುದು ಮತ್ತು ಕುಟುಂಬಸ್ಥರನ್ನ ಮಾತನಾಡಿಸದವರ ಬಗ್ಗೆ ಮಾಹಿತಿ ಕೊಟ್ರೆ ಐನೂರು ರೂಪಾಯಿ ಬಹುಮಾನ ಕೊಡುವುದು ಮೀಟಿಂಗ್ನಲ್ಲಿ ಆದ ತೀರ್ಮಾನವಂತೆ.
ಕೆಲಸಕ್ಕೂ ಕರೆಯದ, ಮನೆಗೂ ಬಾರದ ಊರು ಮನೆಯಲ್ಲಿ ಬದುಕುವುದು ಕಷ್ಟವಾಗತೊಡಗಿದಾಗ ಇಡೀ ಕುಟುಂಬಸ್ಥರು ಖಿನ್ನತೆಗೆ ಜಾರಿದ್ದಾರೆ. ಒಂದೂರಿನ ಜನರನ್ನ ಎದುರುಹಾಕಿಕೊಂಡು ಬದುಕುವುದು ಹೇಗೆ ಎಂದು ಅರಿಯದೇ ಇದ್ದಾಗ ಯುವಕ ಯುವತಿ ನೆರವಿನ ರಕ್ಷಣೆ ಕೋರಿ ಪೊಲೀಸರ ಮೊರೆಹೋಗಿದ್ದಾರೆ. ವಿಷಯ ತಿಳಿದು ದಲಿತ ಮುಖಂಡರು ಪ್ರಕರಣದಲ್ಲಿ ಎಂಟ್ರಿಕೊಟ್ಟು ಸಂತ್ರಸ್ತರ ರಕ್ಷಣೆಗೆ ನಿಂತಿದ್ದಾರೆ.
ಇಷ್ಟೆಲ್ಲಾ ಆದ ಬೆನ್ನಲ್ಲೆ ಅಲರ್ಟ್ ಆದ ಜಿಲ್ಲಾಡಳಿತ ತಹಸೀಲ್ದಾರ್, ಡಿವೈಎಸ್ಪಿ ನೇತೃತ್ವದಲ್ಲಿ ಅಧಿಕಾರಿಗಳ ತಂಡವನ್ನು ಹೊರಬೈಲ್ಗೆ ಕಳುಹಿಸಿತ್ತು. ಅಲ್ಲಿ ಜನಸಂಪರ್ಕ ಸಭೆ ನಡೆಸಿ ಹೀಗೆಲ್ಲಾ ನಡೀಬಾರದು. ನಡೆದರೇ ಕಾನೂನು ಕ್ರಮ ಕಟ್ಟಿಟ್ಟ ಬುತ್ತಿ ಎಂದು ಕಾನೂನಿನ ಅಸ್ತ್ರವನ್ನು ಅಧಿಕಾರಿಗಳು ಮುಂದಿಟ್ಟಿದ್ದಾರೆ. ಈ ವೇಳೆ ಅಂತಹ ಯಾವುದೇ ಘಟನೆಗಳು ನಡೆದಿಲ್ಲ ಎಂದು ಅಧಿಕಾರಿಗಳ ಸಮ್ಮುಖದಲ್ಲಿ ಗ್ರಾಮದ ಮುಖಂಡರು ವಾದಿಸಿದ್ದಾರೆ. ಎಲ್ಲರ ಅಹವಾಲನ್ನ ಕೇಳಿದ ಅಧಿಕಾರಿಗಳು ಊರು ಮನೆ ಮತ್ತು ಸಂತ್ರಸ್ತ ಕುಟುಂಬದ ನಡುವೆ ಬಾಂಧವ್ಯ ಬೆಳೆಸಲು ಬೆಸುಗೆ ಹಾಕಿ ಬಂದಿದೆ.
ಸದ್ಯದಲ್ಲಿ ಹೊರಬೈಲ್ನಲ್ಲಿ ಮನೆದೇವರ ಹಬ್ಬವಿದೆ. ಆ ಹಬ್ಬದಲ್ಲಿ ಸಾಮೂಹಿಕ ಪೂಜೆ ನಡೆಯುತ್ತದೆ. ಸಮುದಾಯದ ಹಬ್ಬದಲ್ಲಿ ಸಂತ್ರಸ್ತ ಕುಟುಂಬವೂ ಪಾಲ್ಗೊಳ್ಳಬೇಕಿದೆ. ಹಾಗೆ ಆದಲ್ಲಿ ಕಾನೂನಿನ ಹೋರಾಟಕ್ಕೆ ಸಾರ್ಥಕತೆ ಸಿಗಲಿದೆ. ಮತ್ತದು ಮೊದ್ದಾಂ ನಡೆಯಬೇಕಿದೆ.
