Jungle mangal movie : ಜಂಗಲ್ ಮಂಗಲ್ ಚಿತ್ರಕ್ಕೆ ತೇಜಸ್ಚಿ ಕಥೆಗಳೇ ಸ್ಫೂರ್ತಿ
Jungle mangal movie : ಶಿವಮೊಗ್ಗ : ಯಶ್ ಶೆಟ್ಟಿ ನಟಿಸಿ, ರಕ್ಷಿತ್ ನಿರ್ದೇಶನದ ಜಂಗಲ್ ಮಂಗಲ್ ಚಲನಚಿತ್ರವು ಜುಲೈ 4 ರಂದು ರಾಜ್ಯಾದ್ಯಂತ ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಇಂದು ಶಿವಮೊಗ್ಗಕ್ಕೆ ಆಗಮಿಸಿದ ಚಿತ್ರತಂಡ, ಚಿತ್ರ ನಿರ್ಮಾಣದ ಕುರಿತು ಮಾಹಿತಿಗಳನ್ನು ಹಂಚಿಕೊಂಡಿದೆ.
ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನಿರ್ದೇಶಕ ರಕ್ಷಿತ್, ತಾನು ಪೂರ್ಣಚಂದ್ರ ತೇಜಸ್ವಿಯವರ ಕಥೆ-ಕಾದಂಬರಿಗಳನ್ನು ಓದುತ್ತಾ ಬೆಳೆದವನು ಎಂದು ತಿಳಿಸಿದರು. ತೇಜಸ್ವಿಯವರು ಕಥೆಯನ್ನು ಹೆಣೆಯುವ ರೀತಿ ನನಗೆ ಬಹಳ ಇಷ್ಟ. ನಮ್ಮ ಸುತ್ತಮುತ್ತ ನಡೆಯುವ ಕಥೆಯನ್ನು ಬರಹದ ಮೂಲಕ ಅಥವಾ ಚಿತ್ರದ ಮೂಲಕ ಜನರಿಗೆ ತಲುಪಿಸಿದಾಗ ಅದು ಹೆಚ್ಚು ಜನರನ್ನು ತಲುಪುತ್ತದೆ. ನಾನು ‘ಜಂಗಲ್ ಮಂಗಲ್ ಚಿತ್ರವನ್ನು ಇದೇ ರೀತಿ ತಯಾರಿಸಿದ್ದೇನೆ” ಎಂದು ಹೇಳಿದರು.
ಸುಮಾರು ಒಂದೂವರೆ ಗಂಟೆ ಅವಧಿಯ ಈ ಚಿತ್ರದಲ್ಲಿ ಯಾವುದೇ ಹಾಡುಗಳಿಲ್ಲ. ಚಿತ್ರವನ್ನು ನೋಡುತ್ತಾ ನೋಡುತ್ತಾ ಪ್ರೇಕ್ಷಕರು ಕಥೆಯೊಂದಿಗೆ ಬೆರೆತುಹೋಗುವಂತೆ ಭಾಸವಾಗುತ್ತದೆ ಎಂದು ರಕ್ಷಿತ್ ವಿವರಿಸಿದರು. ಇದು ತಮ್ಮ ಮೊದಲ ನಿರ್ದೇಶನದ ಚಿತ್ರವಾಗಿದ್ದು, ಪ್ರೇಕ್ಷಕರು ಚಿತ್ರವನ್ನು ಬೆಂಬಲಿಸುವಂತೆ ಮನವಿ ಮಾಡಿದರು.


Jungle mangal movie : ನಂತರ ಚಿತ್ರದ ನಾಯಕಿ ಹರ್ಷಿತಾ ರಾಮಚಂದ್ರ ಮಾತನಾಡಿ, ತಾವು ಈ ಚಿತ್ರದಲ್ಲಿ ದಿವ್ಯಾ ಎಂಬ ಅಂಗನವಾಡಿ ಶಿಕ್ಷಕಿಯ ಪಾತ್ರವನ್ನು ನಿರ್ವಹಿಸಿರುವುದಾಗಿ ತಿಳಿಸಿದರು. ಈ ಹಿಂದೆ ಧಾರಾವಾಹಿಗಳಲ್ಲಿ ನಟಿಸಿದ್ದ ತಾನು, ಇದೇ ಮೊದಲ ಬಾರಿಗೆ ಚಿತ್ರವೊಂದರಲ್ಲಿ ನಾಯಕಿಯಾಗಿ ನಟಿಸಿದ್ದೇನೆ, ನಮ್ಮ ಚಿತ್ರ ಇದೀಗ ಎರಡನೇ ವಾರಕ್ಕೆ ಕಾಲಿಟ್ಟಿದ್ದು, ಇಂತಹ ಉತ್ತಮ ಚಿತ್ರಗಳು ಇನ್ನೂ ಹೆಚ್ಚಿನ ಜನರನ್ನು ತಲುಪಬೇಕು ಎಂಬುದು ನಮ್ಮ ಆಶಯ” ಎಂದರು.
ನಂತರ ಮಾತನಾಡಿದ ಉಗ್ರಂ ಮಂಜು, “ಬೇರೆ ಭಾಷೆಯ ಚಿತ್ರಗಳು ಇಲ್ಲಿ ಬಿಡುಗಡೆಯಾದಾಗ, ನಮ್ಮಲ್ಲಿ ಏಕೆ ಇಂತಹ ಚಿತ್ರಗಳು ಬಿಡುಗಡೆಯಾಗುತ್ತಿಲ್ಲ ಎಂಬ ಮಾತುಗಳು ಪ್ರೇಕ್ಷಕರಲ್ಲಿ ಕೇಳಿ ಬರುತ್ತಿದ್ದವು. ಆದರೆ, ನಮ್ಮ ಕನ್ನಡದಲ್ಲಿಯೂ ಸಹ ಅಂತಹ ಹಲವಾರು ಚಿತ್ರಗಳು ಬಿಡುಗಡೆಯಾಗಿವೆ. ಅದರಲ್ಲಿ ನಮ್ಮ ‘ಜಂಗಲ್ ಮಂಗಲ್’ ಚಿತ್ರವೂ ಒಂದು. ಪರಿಸರವನ್ನು ಹಿನ್ನೆಲೆಯಾಗಿಟ್ಟುಕೊಂಡು, ನಿರ್ದೇಶಕರು ಹೊಸ ರೀತಿಯ ಕಥೆಯನ್ನು ಹೆಣೆದಿದ್ದಾರೆ, ತಾವು ಈ ಸಿನಿಮಾದಲ್ಲಿ ‘ಬಾಬು’ ಎಂಬ ನೆಗೆಟಿವ್ ಪಾತ್ರ ಮಾಡಿದ್ದು, ಈ ಸಿನಿಮಾ ನಿಜ ಜೀವನದಲ್ಲಿ ನಡೆಯುತ್ತಿರುವ ಕಥೆಗಳಿಗೆ ಬಹಳ ಹತ್ತಿರವಾಗಿದೆ ಎಂದು ಅವರು ಹೇಳಿದರು.
