radio color elephant siddapura capture 150 ಜನರ ತಂಡ, 6 ಆನೆಗಳ ಕಾರ್ಯಾಚರಣೆ: ಸಿದ್ದಾಪುರದಲ್ಲಿ ರೆಡಿಯೋ ಕಾಲರ್ ಆನೆ ಖೆಡ್ಡಾಕ್ಕೆ
ಶಿವಮೊಗ್ಗ/ ಸಿದ್ದಾಪುರ: ಮೂರು ದಿನಗಳ ಹಿಂದೆ ಶಿವಮೊಗ್ಗ ಕುಂದಾಪುರ ರೋಡ್ನಲ್ಲಿಯೇ ಬಾಳೆಬರೆ ಘಾಟಿ ಇಳಿದು ಹೊಸಂಗಡಿ ಸಿದ್ದಾಪುರ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆತಂಕ ಮೂಡಿಸಿದ್ದ ಒಂಟಿ ಸಲಗ ಕೊನೆಗೂ ಅರಣ್ಯ ಇಲಾಖೆಯ ಕಾರ್ಯಾಚರಣೆಯಲ್ಲಿ ಸೆರೆ ಸಿಕ್ಕಿದೆ. ಈ ಆನೆಯನ್ನು ಹಿಡಿಯಲು 150ಕ್ಕೂ ಹೆಚ್ಚು ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಹರಸಾಹಸಪಟ್ಟರು. ಚಿಕ್ಕಮಗಳೂರು ಎಲಿಫೆಂಟ್ ಟಾಸ್ಕ್ ಫೋರ್ಸ್ (ETF) ತಂಡದ ಜೊತೆಗೆ ಕುದುರೆಮುಖ ವನ್ಯಜೀವಿ ವಿಭಾಗ, ಕುಂದಾಪುರ ಪ್ರಾದೇಶಿಕ ಅರಣ್ಯ ವಿಭಾಗ, ಸಿದ್ದಾಪುರ, ಅಮಾಸೆಬೈಲು, ನಗರ ವನ್ಯಜೀವಿ ವಿಭಾಗದ ಅರಣ್ಯಾಧಿಕಾರಿಗಳು ಹಾಗೂ ಶಂಕರನಾರಾಯಣ ವಲಯ ಅರಣ್ಯಾಧಿಕಾರಿಗಳ ತಂಡವೂ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು.


ಹೇಗಿತ್ತು ಕಾರ್ಯಾಚರಣೆ radio color elephant siddapura capture
ಕಾಡಾನೆಯನ್ನು ಹಿಡಿಯುವ ಸಲುವಾಗಿ ನಿನ್ನೆ ಅಂತಿಮಘಟ್ಟದ ಕಾರ್ಯಾಚರಣೆ ಆರಂಭಿಸಲಾಗಿತ್ತು. ಮೊದಲು ಆನೆಯನ್ನು ಸುರಕ್ಷಿತವಾಗಿ ಕಾಡಿಗೆ ಅಟ್ಟುವ ಯೋಜನೆ ಹಾಕಿಕೊಳ್ಳಲಾಗಿತ್ತು. ಕಾಡಾನೆಯನ್ನು ಆಗುಂಬೆ ಘಾಟಿಯ ಮೂಲಕ ಮೇಲಕ್ಕೆ ಹತ್ತಿಸಿ, ಅಲ್ಲಿಂದ ಕುದುರೆ ಮುಖ ಕಾಡಿಗೆ ಹೋಗುವಂತೆ ಮಾಡಿ ಆನಂತರ ಸಕಲೇಶಪುರ ಕಾಡಿಗೆ ಅಟ್ಟುವ ಯೋಚನೆ ಇತ್ತು. ಆದರೆ ಈ ಕಾಡಾನೆ ಕಾಡು ಬಿಟ್ಟು ರೋಡಿನ ಮೇಲೆಯೇ ಹೆಚ್ಚು ಓಡಾಡುತ್ತಿರುವುದು ಅರಣ್ಯ ಅಧಿಕಾರಿಗಳಿಗೆ ದೊಡ್ಡ ಸಮಸ್ಯೆ ಉಂಟು ಮಾಡಿತ್ತಷ್ಟೆ ಅಲ್ಲದೆ ಘಾಟಿ ರಸ್ತೆಯಲ್ಲಿಯೇ ಕಾಡಾನೆಯನ್ನು ಘಟ್ಟದ ಮೇಲೆ ಹತ್ತಿಸುವುದು ಸವಾಲಿನ ಕೆಲಸವಾಗಿತ್ತು. ಹಾಗಾಗಿ ಅಂತಿಮವಾಗಿ ಸೆರೆ ಹಿಡಿಯುವ ನಿರ್ಧಾರಕ್ಕೆ ಬರಲಾಗಿತ್ತು.


ಅದರಂತೆ ಅಧಿಕಾರಿಗಳು ಸಿಬ್ಬಂಧಿ ಕಾರ್ಯಾಚರಣೆಗೆ ಇಳಿದಿದ್ದರು. ಆನೆಯ ಕತ್ತಿಗೆ ಅಳವಡಿಸಲಾಗಿದ್ದ ರೇಡಿಯೋ ಕಾಲರ್ ಐಡಿ ಮೂಲಕ ಅದರ ಚಲನವಲನಗಳ ಮೇಲೆ ನಿರಂತರ ನಿಗಾ ಇರಿಸಲಾಗಿತ್ತು. ಇದರ ಆಧಾರದ ಮೇಲೆ ಅರಣ್ಯ ಇಲಾಖೆಯ ಅಧಿಕಾರಿಗಳು ನಿನ್ನೆ ಗುರುವಾರ ಮಧ್ಯಾಹ್ನದಿಂದಲೇ ಕಾರ್ಯಾಚರಣೆಯನ್ನು ಆರಂಭಿಸಿದರು.

ಸಕ್ರೆಬೈಲು ಆನೆ ಬಿಡಾರದಿಂದ ಬಂದ ಮೂರು ಆನೆಗಳು, ನಾಗರಹೊಳೆಯ ಮೂರು ಆನೆಗಳು ಕಾರ್ಯಾಚರಣೆಯ ಮುಂದಾಳತ್ವ ವಹಿಸಿದವು. ರೇಡಿಯೋ ಕಾಲರ್ ಮತ್ತು ಡ್ರೋನ್ನಿಂದಾಗಿ ಸಿದ್ದಾಪುರ ಗ್ರಾಮದ ಮತ್ತಿಬೇರು ಕಾಡಿನಲ್ಲಿ ಆನೆ ಪತ್ತೆಯಾಯಿತು. ಇದರ ಬೆನ್ನಲ್ಲೆ ಸಕ್ರೆಬೈಲಿನ ಬಹದ್ದೂರು, ಬಾಲಚಂದ್ರ, ಸೋಮಣ್ಣ ಆನೆಗಳು, ಮಾವುತರು, ಕಾವಾಡಿಗರು, ಅರಣ್ಯಾಧಿಕಾರಿಗಳು ಮತ್ತು ಪಶುವೈದ್ಯರು ಕಾಡಿನೊಳಗೆ ಪ್ರವೇಶಿಸಿದರು. ಸಂಜೆ 5:30ಕ್ಕೆ ಪಶುವೈದ್ಯರಾದ ಸಕ್ರೆಬೈಲಿನ ಡಾ. ಕಲ್ಲಪ್ಪ, ಮಂಗಳೂರಿನ ಡಾ. ಯಶಸ್ವಿ ಮತ್ತು ನಾಗರಹೊಳೆಯ ಡಾ. ರಮೇಶ್ ಅವರು ಆನೆಗೆ ಅರಿವಳಿಕೆ ನೀಡಿದರು. 1.2 ಎಂ.ಎಲ್. ಅರಿವಳಿಕೆ ಡೋಸ್ ನೀಡಲಾಗಿತ್ತು. ಡೋಸ್ ಚುಚ್ಚಿಸಿಕೊಂಡ ಬಳಿಕವೂ ಕಾಡಾನೆ ಕಡಾನೆಯು ಸುಮಾರು 1.5 ಕಿ.ಮೀ. ದೂರ ಕಾಡಿನಲ್ಲಿ ಸಾಗಿದೆ. ಅಂದಾಜು 20 ನಿಮಿಷಗಳ ನಂತರ ಹೆನ್ನಾಬೈಲು ಸಮೀಪದ ಉರಪಾಲು ಬಳಿ ಆನೆ ಪ್ರಜ್ನೆ ತಪ್ಪಿದೆ. ಆನಂತರ ನಾಗರಹೊಳೆಯಿಂದ ಆಗಮಿಸಿದ್ದ ದಸರ ಆನೆ ಭೀಮಾ, ಮಲಗಿದ್ದ ಕಾಡಾನೆಯನ್ನು ಎಬ್ಬಿಸಿ ನಿಲ್ಲಿಸಿತು. ಇದಕ್ಕೆ ಮಹೇಂದ್ರ ಮತ್ತು ಏಕಲವ್ಯ ಆನೆಗಳು ಕೂಡ ಸಹಕಾರ ನೀಡಿದವು. ಸಕ್ರೆಬೈಲ್ನ ಆನೆಗಳು ಕಾಡಾನೆಯನ್ನು ಲಾರಿಗೆ ಲೋಡ್ ಮಾಡಿದವು.

ಈ ಕಾಡಾನೆಯನ್ನು ಹಿಂದೊಮ್ಮೆ ಸೆರೆಹಿಡಿದು ಸುರಕ್ಷಿತ ಕಾಡಿಗೆ ಬಿಡಲಾಗಿತ್ತಾದರೂ, ಅದು ಪುನಃ ಜನವಸತಿ ಪ್ರದೇಶಗಳಿಗೆ ನುಗ್ಗಿ ತೊಂದರೆ ಕೊಡುತ್ತಿರುವುದರಿಂದ ಅದನ್ನು ಹಿಡಿಯುವುದಕ್ಕೆ ಅರಣ್ಯ ಕಾನೂನಿನಲ್ಲಿ ಅವಕಾಶ ಸುಲಭವಾಗಿ ಸಿಗುತ್ತದೆ. ಈ ನಿಟ್ಟಿನಲ್ಲಿ ಕಾಡಾನೆಯನ್ನು ಹಿಡಿದ ಅರಣ್ಯ ಇಲಾಖೆ, ಆ ಬಳಿಕ ಅದನ್ನು ಸಕ್ರೆಬೈಲ್ ಆನೆ ಬಿಡಾರಕ್ಕೆ ರವಾನೆ ಮಾಡಿದೆ. ವಿಶೇಷ ಅಂದರೆ ಈ ಕಾಡಾನೆಯನ್ನು ಸಕಲೇಶಪುರದಲ್ಲಿ ಹಿಡಿಯಲಾಗಿತ್ತು. ಅಲ್ಲಿಂದ ಭದ್ರಾ ಅಭಯಾರಣ್ಯಕ್ಕೆ ಬಿಡಲಾಗಿತ್ತು. ಲಕ್ಕವಳ್ಳಿ ವನ್ಯಜೀವಿ ವಿಭಾಗದಲ್ಲಿ ಇರದ ಆನೆಯು ಅಲ್ಲಿಂದ ತೀರ್ಥಹಳ್ಳಿಗೆ ಬಂದು ಆನಂತರ ಮೇನ್ ರೋಡ್ನಲ್ಲಿ ಘಾಟಿ ಇಳಿದು ಸಿದ್ದಾಪುರದ ಆನೆ ಎನಿಸಿತ್ತು.
