ಮಲೆನಾಡು ಟುಡೆ ಸುದ್ದಿ / ಭದ್ರಾವತಿ / ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ಕೆಲವು ವರ್ಷಗಳ ಹಿಂದೆ ನಡೆದಿದ್ದ ಯುವಕನ ಆತ್ಮಹತ್ಯೆ ಪ್ರಕರಣದ ವಿಚಾರಣೆ ಪೂರ್ಣಗೊಂಡಿದ್ದು, 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಮಹತ್ವದ ತೀರ್ಪು ಪ್ರಕಟಿಸಿದೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿತರಿಗೆ ಬರೋಬ್ಬರಿ 10 ವರ್ಷಗಳ ಕಾಲ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ಭಾರಿ ಮೊತ್ತದ ದಂಡ ವಿಧಿಸಿ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.

ಭದ್ರಾವತಿಯಲ್ಲಿ ನಡೆದಿದ್ದ ಪ್ರಕರಣ
2021ರ ಮೇ 5ರಂದು ಭದ್ರಾವತಿ ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ಈ ಘಟನೆ ನಡೆದಿತ್ತು. ಮಲ್ಲಾಪುರ ಗ್ರಾಮದ ನಿವಾಸಿ ರುದ್ರೇಶಪ್ಪ ಎಂಬುವರ ಅಣ್ಣನ ಮಗ 22 ವರ್ಷ ವಯಸ್ಸಿನ ನವೀನ್ ಕುಮಾರ್ ಎಂಬಾತ ಈ ಪ್ರಕರಣದ ಸಂತ್ರಸ್ತ.
ಇದೇ ಗ್ರಾಮದ ನಿವಾಸಿಗಳಾದ 26 ವರ್ಷ ವಯಸ್ಸಿನ ನಾಗರಾಜ್ ರಾವ್ ಹಾಗೂ 50 ವರ್ಷ ವಯಸ್ಸಿನ ಮಂಜೋಜಿ ರಾವ್ ಎಂಬವರು ನವೀನ್ ಕುಮಾರ್ ಬಳಿ ಜಗಳ ತೆಗೆದಿದ್ದರು. ನಮ್ಮ ಮನೆಯ ಹುಡುಗಿಗೆ ಮೇಸೆಜ್ ಕಳುಸುತ್ತಿದ್ದಿಯಾ ಎಂದು ಬೈದು ನಿಂದಿಸಿದ್ದರು. ಅಲ್ಲದೆ ಮನಬಂದಂತೆ ಥಳಿಸಿ ಹಲ್ಲೆ ನಡೆಸಿದ್ದರು. ಬಳಿಕ ನವೀನ್ ಕುಮಾರ್ ಬಳಿ ಇದ್ದ ಮೊಬೈಲ್ ಫೋನ್ ಅನ್ನು ಬಲವಂತವಾಗಿ ಕಸಿದುಕೊಂಡಿದ್ದ ಆರೋಪಿತರು, ಒಂದೊ ಊರು ಬಿಡು, ಇಲ್ಲ ಸಾಯಿ ಎಂದು ಬೆದರಿಕೆ ಹಾಕಿದ್ದರು.
ತನ್ನ ಜೀವ ಕಳೆದುಕೊಂಡ ಸಂತ್ರಸ್ತ
ಸಾರ್ವಜನಿಕವಾಗಿ ಮಾಡಿದ ಅವಮಾನ, ಹಲ್ಲೆ ಹಾಗೂ ಹಾಕಿದ ಜೀವಬೆದರಿಕೆಯ ಮಾತುಗಳನ್ನು ನವೀನ್ ಕುಮಾರ್ ತೀವ್ರವಾಗಿ ಮನಸ್ಸಿಗೆ ಹಚ್ಚಿಕೊಂಡಿದ್ದ. ಘಟನೆ ನಡೆದ ಮರುದಿನವೇ ಅಂದರೆ 2021ರ ಮೇ 6ರಂದು ವಿಷ ಸೇವಿಸಿ ತನ್ನ ಪ್ರಾಣ ಕಳೆದುಕೊಂಡಿದ್ದ. ಈ ಸಂಬಂಧ ಮೃತನ ಕುಟುಂಬಸ್ಥರು ನೀಡಿದ ದೂರಿನ ಆಧಾರದ ಮೇಲೆ, ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಆರೋಪಿತರ ವಿರುದ್ಧ ಪ್ರಕರಣ ದಾಖಲಾಗಿತ್ತು. ಭಾರತೀಯ ದಂಡ ಸಂಹಿತೆಯ ಕಲಂ 341, 504, 323, 306 ಹಾಗೂ 34ರ ಅನ್ವಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದರು.
ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ಹೊತ್ತಿದ್ದ ಅಂದಿನ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮೋಹನ್ ಜಿ ತನಿಖೆ ಪೂರೈಸಿ ನ್ಯಾಯಾಲಯಕ್ಕೆ ವಿಸ್ತೃತವಾದ ಚಾರ್ಜ್ ಶೀಟ್ ಸಲ್ಲಿಸಿದ್ದರು.

ಭದ್ರಾವತಿ ಕೋರ್ಟ್ನಲ್ಲಿ ವಿಚಾರಣೆ
ಭದ್ರಾವತಿಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಈ ಪ್ರಕರಣದ ನಡೆಯಿತು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ರತ್ನಮ್ಮ ಪಿ. ವಾದ ಮಂಡಿಸಿದ್ದರು. ತನಿಖಾಧಿಕಾರಿ ಒದಗಿಸಿದ ಸಾಕ್ಷ್ಯಾಧಾರ ಹಾಗೂ ಅಭಿಯೋಜಕರ ವಾದವನ್ನು ಆಲಿಸಿದ ನ್ಯಾಯಾಲಯವು, ಆರೋಪಿತರ ಮೇಲಿನ ಆರೋಪಗಳು ದೃಢಪಟ್ಟಿವೆ ಎಂದು ತೀರ್ಮಾನಿಸಿದೆ.
ಅಂತಿಮ ತೀರ್ಪು
ಈ ಹಿನ್ನೆಲೆಯಲ್ಲಿ, 2026ರ ಏಪ್ರಿಲ್ 1ರಂದು ಮಾನ್ಯ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ಅವರು ಅಂತಿಮ ತೀರ್ಪನ್ನು ಪ್ರಕಟಿಸಿದರು. ಆರೋಪಿತರಿಗೆ ಐಪಿಸಿ ಸೆಕ್ಷನ್ 341, 504, 323, 306 ಹಾಗೂ 34ರ ಅಡಿಯಲ್ಲಿ 10 ವರ್ಷಗಳ ಕಠಿಣ ಕಾರಾವಾಸದ ಶಿಕ್ಷೆಯನ್ನು ವಿಧಿಸಲಾಗಿದೆ. ಇದರ ಜೊತೆಗೆ ಒಟ್ಟಾರೆಯಾಗಿ 2,23,000 ರೂಪಾಯಿಗಳ ದಂಡವನ್ನು ಪಾವತಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.
ಅಲ್ಲದೆ, ಮೃತ ನಾಗರಾಜ್ ರವರ ತಂದೆ ಗುಡುಮಲ್ಲಪ್ಪ ರವರಿಗೆ 1,50,000 ರೂಪಾಯಿಗಳನ್ನು ಪರಿಹಾರದ ರೂಪದಲ್ಲಿ ನೀಡುವಂತೆಯೂ ನ್ಯಾಯಾಧೀಶರು ಆದೇಶಿಸಿದ್ದಾರೆ.

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw