ಸಾಗರ : ತಾಲೂಕಿನ ತಾಳಗುಪ್ಪದ ಮನೆಯೊಂದರಲ್ಲಿ ಸೋಮವಾರ ತಡರಾತ್ರಿ ಕಳ್ಳತನಕ್ಕೆ ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಸಾರ್ವಜನಿಕರೇ ಖುದ್ದಾಗಿ ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ ಘಟನೆ ವರದಿಯಾಗಿದೆ.
ಶಿವಮೊಗ್ಗಕ್ಕೆ ವಾಯಸೇನೆಯ ವಿಶೇಷ ವಿಮಾನ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್ನಲ್ಲಿ
ತಾಳಗುಪ್ಪದ ಮಸೀದಿಯ ಸಮೀಪವಿರುವ ಪ್ರದೇಶದಲ್ಲಿ ಭಟ್ಕಳ ಮೂಲದ ಇಬ್ಬರು ವ್ಯಕ್ತಿಗಳು ಮನೆಗಳ ಮೇಲೆ ಟಾರ್ಚ್ ಬೆಳಕು ಹಾಕಿ ಇಣುಕಿ ನೋಡುತ್ತಿದ್ದರು. ಈ ಅನುಮಾನಾಸ್ಪದ ವರ್ತನೆಯನ್ನು ಗಮನಿಸಿದ ಸ್ಥಳೀಯರು, ಒಟ್ಟಾಗಿ ಸೇರಿ ಅವರನ್ನು ಬೆನ್ನಟ್ಟಿ ಹಿಡಿದಿದ್ದಾರೆ ಹಾಗೂ ಸಾರ್ವಜನಿಕರು ಸಿಕ್ಕಿಬಿದ್ದ ಇಬ್ಬರಿಗೂ ಚೆನ್ನಾಗಿ ಧರ್ಮದೇಟು ನೀಡಿದ್ದಾರೆ.
ಈ ವೇಳೆ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಆರೋಪಿಗಳು, ತಪ್ಪಿಸಿಕೊಳ್ಳುವ ಉದ್ದೇಶದಿಂದ ಪರಸ್ಪರ ಒಬ್ಬರ ಮೇಲೊಬ್ಬರು ಆರೋಪ ಮಾಡಿಕೊಳ್ಳುತ್ತಿದ್ದರು ಎನ್ನಲಾಗಿದೆ. ಅಲ್ಲದೆ, ರಾತ್ರಿ ವೇಳೆ ತಾವು ಕಳ್ಳತನ ಮಾಡುವುದರ ಜೊತೆಗೆ ಮಹಿಳೆಯರ ಚಿತ್ರಗಳನ್ನು ಸಹ ಸೆರೆಹಿಡಿಯುತ್ತಿದ್ದುದಾಗಿ ಹಾಗೂ ವಿವಿಧ ಭಾಗಗಳಲ್ಲಿ ಕಳವು ಮಾಡಿರುವುದಾಗಿ ಅವರು ಬಾಯಿಬಿಟ್ಟಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಘಟನಾ ಸ್ಥಳಕ್ಕೆ ತಕ್ಷಣವೇ ಆಗಮಿಸಿದ ತಾಳಗುಪ್ಪ ಪೊಲೀಸರು, ಇಬ್ಬರೂ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಈ ಕುರಿತು ನಡೆಸಿರುವ ಪ್ರಾಥಮಿಕ ತನಿಖೆಯಲ್ಲಿ, ಆರೋಪಿಗಳ ವಿರುದ್ಧ ದಕ್ಷಿಣ ಕನ್ನಡ, ಉಡುಪಿ ಹಾಗೂ ಕುಂದಾಪುರ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಈಗಾಗಲೇ ಪ್ರಕರಣಗಳು ದಾಖಲಾಗಿರುವುದು ತಿಳಿದುಬಂದಿದೆ.
