STATE NEWS

ನಗರದ ಮಧ್ಯೆಯೇ ದಟ್ಟ ಕಾಡಿನ ಅನುಭವ: ಸ್ಮಾರ್ಟ್ ಸಿಟಿ ಶಿವಮೊಗ್ಗದ ಈ ಅದ್ಭುತ ಲೋಕ ನೋಡಿದ್ದೀರಾ?

Prathapa thirthahalli ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

Shivamogga Wildlife ಶಿವಮೊಗ್ಗ:  ನಗರದ ಹೃದಯಭಾಗದಲ್ಲಿರುವ ಐತಿಹಾಸಿಕ ಗಾಂಧಿ ಪಾರ್ಕ್ ಈಗ ಕೇವಲ ವಾಕಿಂಗ್ ಮಾಡುವ ತಾಣವಾಗಿ ಉಳಿದಿಲ್ಲ. ಇದು ಕಲೆ, ಸಾಹಿತ್ಯ ಮತ್ತು ವಿಜ್ಞಾನದ ಅದ್ಭುತ ಲೋಕವನ್ನು ತೆರೆದಿಡುವ ಮೂಲಕ ಪ್ರವಾಸಿಗರಿಗೆ ಹೊಸದೊಂದು ಅನುಭವ ನೀಡುತ್ತಿದೆ. ದಕ್ಷಿಣ ಭಾರತದ ಮೊಟ್ಟಮೊದಲ ‘ವನ್ಯಜೀವಿ ವ್ಯಾಖ್ಯಾನ ಕೇಂದ್ರ ಇಲ್ಲಿ ಸಾರ್ವಜನಿಕರ ವೀಕ್ಷಣೆಗೆ ಸಿದ್ಧವಾಗಿದ್ದು, ಜ್ಞಾನಾರ್ಜನೆಯ ಕೇಂದ್ರವಾಗಿ ಹೊರಹೊಮ್ಮಿದೆ. 

ಶಿವಮೊಗ್ಗ ಗ್ರಾಮಾಂತರ : ರಾಗಿ ಗುಡ್ಡದ ವೈನ್​ಶಾಪ್​ನಲ್ಲಿ ಜಗಳ ಬಿಡಿಸಲು ಹೋದ ಯುವಕನಿಗೆ ಚಾಕು ಇರಿತ

ಸುಮಾರು 8.58 ಕೋಟಿ ರೂಪಾಯಿ ವೆಚ್ಚದಲ್ಲಿ ಕೇಂದ್ರ ಸರ್ಕಾರದ ಪರಿಸರ ಶಿಕ್ಷಣ ಕೇಂದ್ರ ಹಾಗೂ ಶಿವಮೊಗ್ಗ ಸ್ಮಾರ್ಟ್ ಸಿಟಿ ಯೋಜನೆಯ ಅಡಿಯಲ್ಲಿ ಈ ಸುಸಜ್ಜಿತ ಕಟ್ಟಡವನ್ನು ನಿರ್ಮಿಸಲಾಗಿದೆ. ಬಿಳಿ ಬಣ್ಣದ ಈ ಸುಂದರ ಸಂಕೀರ್ಣದ ಒಳಗೆ ಪ್ರವೇಶಿಸಿದರೆ, ನೀವು ನಗರದ ಗದ್ದಲವನ್ನು ಮರೆತು ಪಶ್ಚಿಮಘಟ್ಟದ ದಟ್ಟ ಅರಣ್ಯದೊಳಗೆ ವಿಹರಿಸುತ್ತಿರುವ ಭಾವನೆ ಮೂಡುತ್ತದೆ.

ಕೇಂದ್ರದ ಹೊರಭಾಗದಲ್ಲಿ ವಿಜ್ಞಾನದ ಕೌತುಕಗಳು ಸ್ವಾಗತಿಸುತ್ತವೆ. ಇಸ್ರೋದ ಜಿಎಸ್‌ಎಲ್‌ವಿ ರಾಕೆಟ್ ಮಾದರಿ, ಡಿಎನ್‌ಎ ರಚನೆ ಮತ್ತು ಭಾರತದ ಶ್ರೇಷ್ಠ ವಿಜ್ಞಾನಿಗಳ ಜೀವನ ಚರಿತ್ರೆಯ ಮಾಹಿತಿ ಫಲಕಗಳು ಇಲ್ಲಿವೆ. ವಿಶೇಷವಾಗಿ ಮಕ್ಕಳು ಆಟವಾಡುತ್ತಲೇ ವಿಜ್ಞಾನದ ತತ್ವಗಳನ್ನು ಕಲಿಯಲು ಅನುಕೂಲವಾಗುವಂತೆ ಇಲ್ಲಿನ ವಿಜ್ಞಾನ ಉದ್ಯಾನವನವನ್ನು ವಿನ್ಯಾಸಗೊಳಿಸಲಾಗಿದೆ. 

ಈ ಜ್ಞಾನ ಕೇಂದ್ರದ ಐದು ವಿಭಾಗಗಳಲ್ಲಿ ಪಶ್ಚಿಮಘಟ್ಟದ ಜೀವವೈವಿಧ್ಯಕ್ಕೆ ಮೊದಲ ಆದ್ಯತೆ ನೀಡಲಾಗಿದೆ. ತುಂಗಾ-ಭದ್ರಾ ನದಿಗಳ ಉಗಮದಿಂದ ಹಿಡಿದು, ಮಲೆನಾಡಿನ ಅಪರೂಪದ ಹಕ್ಕಿಗಳು, ಪ್ರಾಣಿಗಳು ಮತ್ತು ಸರೀಸೃಪಗಳ ಬಗ್ಗೆ ಸವಿವರವಾದ ಮಾಹಿತಿ ಇಲ್ಲಿದೆ. ಇಲ್ಲಿನ ಪ್ರಾಣಿ-ಪಕ್ಷಿಗಳ ಮಾದರಿಗಳು ಎಷ್ಟು ನೈಜವಾಗಿವೆ ಎಂದರೆ ನೀವು ನಿಜವಾದ ಕಾಡಿನ ಮಧ್ಯೆ ನಿಂತಿರುವಂತೆ ಭಾಸವಾಗುತ್ತದೆ. 

ಕೇವಲ ಪ್ರಕೃತಿ ಮಾತ್ರವಲ್ಲದೆ, ಕರ್ನಾಟಕದ ಸಾಂಸ್ಕೃತಿಕ ಇತಿಹಾಸವನ್ನು ಇಲ್ಲಿ ಸೊಗಸಾಗಿ ಕಟ್ಟಿಕೊಡಲಾಗಿದೆ. ಮೈಸೂರು ಒಡೆಯರ ಕಾಲದ ವೈಭವ, ಕನ್ನಡ ಲಿಪಿಯ ವಿಕಾಸ, ಅಕ್ಕಮಹಾದೇವಿಯ ವಚನ ಸಾಹಿತ್ಯ ಮತ್ತು ಯಕ್ಷಗಾನ, ಡೊಳ್ಳುಕುಣಿತದಂತಹ ಜಾನಪದ ಕಲೆಗಳ ಗೊಂಬೆಗಳು ನೋಡುಗರನ್ನು ಮಂತ್ರಮುಗ್ಧಗೊಳಿಸುತ್ತವೆ. ಹಳೆಯ ಕಾಲದ ನಾಣ್ಯಗಳು ಮತ್ತು ಆಭರಣಗಳ ಪ್ರದರ್ಶನ ನಾಡಿನ ಪರಂಪರೆಯನ್ನು ನೆನಪಿಸುತ್ತದೆ.

ಮೂರನೇ ವಿಭಾಗವು ರೋಮಾಂಚನಕಾರಿ ಅನುಭವ ನೀಡುವ ‘ಕತ್ತಲೆ ಅರಣ್ಯ’. ಈ ಕೊಠಡಿಯಲ್ಲಿ ಕಾಳಿಂಗ ಸರ್ಪ, ಚಿರತೆ, ಕಾಡುಕೋಣ ಮತ್ತು ಜಿಂಕೆಗಳ ಮಾದರಿಗಳನ್ನು ಪ್ರಾಣಿಗಳ ಸಹಜ ಕೂಗಿನ ಧ್ವನಿಯೊಂದಿಗೆ ಪ್ರದರ್ಶಿಸಲಾಗಿದೆ. ಇದು ಪ್ರೇಕ್ಷಕರಿಗೆ ಕಾಡಿನ ನೈಜ ವಾತಾವರಣದ ಅನುಭೂತಿಯನ್ನು ನೀಡುತ್ತದೆ. “ಮುಟ್ಟಬೇಡಿ” ಎಂಬ ಎಚ್ಚರಿಕೆಯ ಫಲಕಗಳು ಇಲ್ಲಿನ ಸೂಕ್ಷ್ಮತೆಯನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತವೆ. 

ಅಂತಿಮ ವಿಭಾಗಗಳಲ್ಲಿ ಭವಿಷ್ಯದ ನಾಗರಿಕರಿಗೆ ಬೇಕಾದ ಹವಾಮಾನ ಬದಲಾವಣೆಯ ಅರಿವು ಮತ್ತು ‘ಸ್ಮಾರ್ಟ್ ಸಿಟಿ’ಯ ಕಲ್ಪನೆಯನ್ನು ಪರಿಚಯಿಸಲಾಗಿದೆ. ಒಂದು ಆದರ್ಶ ನಗರ ಹೇಗಿರಬೇಕು, ಅಲ್ಲಿನ ಸಾರಿಗೆ ಮತ್ತು ಪರಿಸರ ವ್ಯವಸ್ಥೆ ಹೇಗಿರಬೇಕು ಎಂಬುದನ್ನು ಬೃಹತ್ ಮಾದರಿಯ ಮೂಲಕ ತೋರಿಸಲಾಗಿದೆ. ಒಟ್ಟಾರೆಯಾಗಿ ಗಾಂಧಿ ಪಾರ್ಕ್‌ನ ಈ ನೂತನ ಕೇಂದ್ರವು ರಜಾ ದಿನಗಳಲ್ಲಿ ಕುಟುಂಬದೊಂದಿಗೆ ಭೇಟಿ ನೀಡಲು ಅತ್ಯುತ್ತಮ ಜ್ಞಾನದ ಗಣಿಯಾಗಿದೆ.

Shivamogga Wildlife Interpretation Centre

shivamogga car decor sun control house
shivamogga car decor sun control house
Shivamogga Wildlife Interpretation Centre
Shivamogga Wildlife Interpretation Center


Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.