ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ನಗರದಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಿಗೆ ಸಂಬಂಧಿಸಿದಂತೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ. ನ್ಯೂ ಮಂಡ್ಲಿಯಲ್ಲಿ ಸಹೋದರರ ನಡುವಿನ ಗಲಾಟೆಯಲ್ಲಿ ಗಾಯಗೊಂಡ ವ್ಯಕ್ತಿ ಮೃತಪಟ್ಟಿದ್ದರೆ, ಕಸ್ತೂರಬಾ ರಸ್ತೆಯಲ್ಲಿ ವ್ಯಾಪಾರಿಯೊಬ್ಬರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಆರೋಪ ಕೇಳಿಬಂದಿದೆ.
ನ್ಯೂ ಮಂಡ್ಲಿಯಲ್ಲಿ ಸಹೋದರರ ಗಲಾಟೆ; ಅಮೀರ್ ಸಾವು
ನ್ಯೂ ಮಂಡ್ಲಿ ಸರ್ಕಲ್ ಸಮೀಪ ಸೆಪ್ಟೆಂಬರ್ 5ರಂದು ನಡೆದ ಕೌಟುಂಬಿಕ ಗಲಾಟೆಯಲ್ಲಿ , ಅಮೀರ್ (35) ಮತ್ತು ರಫೀಕ್ (33) ನಡುವೆ ಹೊಡೆದಾಟ ಆಗಿದೆ. ಈ ವೇಳೆ ರಫೀಕ್ ಗೋಡೆಯಲ್ಲಿದ್ದ ಕನ್ನಡಿ ಒಡೆದು, ಅಮೀರ್ನನ್ನ ಆ ಕಡೆಗೆ ದಬ್ಬಿದ ಪರಿಣಾಮ, ಆತನ ಹೊಟ್ಟೆಗೆ ಒಡೆದ ಕನ್ನಡಿಯ ಗಾಜು ಚುಚ್ಚಿದೆ. ಈ ವೇಳೆ ಗಂಭೀರವಾಗಿ ಗಾಯಗೊಂಡ ಅಮೀರ್ರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಸೆಪ್ಟೆಂಬರ್ 7ರಂದು ಬೆಳಗಿನ ಜಾವ ಸುಮಾರು 1.15ಕ್ಕೆ ಮೃತಪಟ್ಟಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.
ಕಸ್ತೂರಬಾ ರಸ್ತೆಯಲ್ಲಿ ವ್ಯಾಪಾರಿ ಮೇಲೆ ಹಲ್ಲೆ ಆರೋಪ
ಗಾಂಧಿ ಬಜಾರ್ನ ಕಸ್ತೂರಬಾ ರಸ್ತೆಯಲ್ಲಿ ಸೆಪ್ಟೆಂಬರ್ 5ರಂದು ಸಂಜೆ ಅಂಗಡಿ ಮುಂಭಾಗ ಸ್ಕೂಟಿ ನಿಲ್ಲಿಸುವ ವಿಚಾರವಾಗಿ ವ್ಯಾಪಾರಿಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ವ್ಯಾಪಾರಿಯೊಬ್ಬರು ತಮ್ಮ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಮತ್ತೊಬ್ಬ ವ್ಯಾಪಾರಿ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ BNS ಕಲಂ 126(2), 352, 115(2) ಮತ್ತು 351(2) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
