Shivamogga Bus Driver Assault ಶಿವಮೊಗ್ಗ:, ಬಸ್ ನಿಲ್ಲಿಸುವ ಜಾಗದಲ್ಲಿ ಅಡ್ಡಲಾಗಿ ಕಾರು ನಿಲ್ಲಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಖಾಸಗಿ ಬಸ್ ಚಾಲಕನ ಮೇಲೆ ಕಾರಿನಲ್ಲಿದ್ದ ಮೂವರು ಯುವಕರು ಮನಸೋಇಚ್ಛೆ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗದ ಬಸ್ ನಿಲ್ದಾಣದ ಮುಂಭಾಗದಲ್ಲಿ ನವದುರ್ಗ ಬಸ್ನ ಚಾಲಕರು ಎಂದಿನಂತೆ ಬಸ್ಸನ್ನು ನಿಲ್ಲಿಸಿದ್ದರು. ಈ ವೇಳೆ, ಕಾರಿನಲ್ಲಿ ಬಂದ ಮೂವರು ಯುವಕರು ಬಸ್ನ ಮುಂಭಾಗದಲ್ಲೇ ತಮ್ಮ ಕಾರನ್ನು ಅಡ್ಡ ನಿಲ್ಲಿಸಿದ್ದಾರೆ. ಇದರಿಂದ ಬಸ್ ಚಾಲಕರು ಕಾರು ತೆಗೆಯುವಂತೆ ಹಾರನ್ ಮಾಡಿದ್ದಾರೆ.
ಬಸ್ ಡ್ರೈವರ್ ಹಾರನ್ ಮಾಡಿದ ಕಾರಣಕ್ಕೆ ಕುಪಿತಗೊಂಡ ಯುವಕರು, ಏಕಾಏಕಿ ಬಸ್ ಚಾಲಕರನ್ನು ಕೆಳಗೆ ಎಳೆದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

