ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಒಲವಿನ ಉಡುಗೊರೆ ಕೊಡಲೇನು ಎಂಬ ಹಾಡು ಹಾಗೆಯೇ ಆ ಚಿತ್ರದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಅಭಿನಯಿಸಿದ್ದು ಯಾರಿಗೆ ಗೊತ್ತಿಲ್ಲ ಹೇಳಿ. ವಿರಹ ವೇದನೆಯನ್ನು ಪ್ರೇಯಸಿಗೆ ತಿಳಿಸಲು ರಕ್ತದಲ್ಲಿ ಪ್ರೇಮ ಪತ್ರವನ್ನು ಬರೆದು ಪ್ರೇಯಸಿಗೆ ಕೊಟ್ಟು, ತಮ್ಮ ಪ್ರೀತಿಯನ್ನು ವಿಭಿನ್ನವಾಗಿ ವ್ಯಕ್ತಪಡಿಸುತ್ತಾರೆ. ಇದೀಗ ಅದೇ ಮಾದರಿಯ ಅಪರೂಪದ ಹಾಗೂ ವಿಭಿನ್ನ ಹಾದಿಯನ್ನು ಶಿಕಾರಿಪುರದ ಶಿಕ್ಷಕರೊಬ್ಬರು ತುಳಿದಿದ್ದಾರೆ. ಆದರೆ, ಇವರು ರಕ್ತದಲ್ಲಿ ಕಾಗದ ಬರೆದಿರುವುದು ಒಲವನ್ನು ನಿವೇದಿಸಲು ಅಲ್ಲ ಬದಲಿಗೆ ತಾವು ಕಾರ್ಯನಿರ್ವಹಿಸುವ ಶಾಲೆಯನ್ನು ಮುಚ್ಚದಂತೆ ತಡೆದು, ಸರ್ಕಾರದಿಂದ ಅನುದಾನ ಕೊಡಿಸಲು.
ಹೌದು, ಘಟನೆ ಏನಪ್ಪಾ ಅಂದರೆ ಶಿಕಾರಿಪುರದ ಶಿಕ್ಷಕರೊಬ್ಬರು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ವಿಭಿನ್ನವಾಗಿ ಮನವಿ ಸಲ್ಲಿಸಿದ್ದಾರೆ. ಶಿಕಾರಿಪುರದ ಸಾಲೇಶ್ವರ ವಿದ್ಯಾಸಂಸ್ಥೆಯ ಶಿಕ್ಷಕ ಪ್ರಶಾಂತ್ ತಮ್ಮ ರಕ್ತದಲ್ಲಿ ಶಿಕ್ಷಣ ಸಚಿವರಿಗೆ ಪತ್ರ ಬರೆದು ವಿಶೇಷ ಬೇಡಿಕೆಯೊಂದನ್ನು ಇಟ್ಟಿದ್ದಾರೆ.
ಅವರ ಬೇಡಿಕೆ ಏನೆಂದರೆ ರಾಜ್ಯ ಸರ್ಕಾರ 1995ರ ನಂತರ ಪ್ರಾರಂಭವಾದ ಕನ್ನಡ ಶಾಲೆಗಳಿಗೆ ಕೂಡಲೇ ಅನುದಾನ ನೀಡಬೇಕು. ನಮ್ಮ ಸಾಲೇಶ್ವರ ವಿದ್ಯಾಸಂಸ್ಥೆ ಕಳೆದ 31 ವರ್ಷಗಳಿಂದ ನಿರಂತರವಾಗಿ ಶೈಕ್ಷಣಿಕ ಸೇವೆ ಸಲ್ಲಿಸುತ್ತಿದೆ. 1987ರಿಂದ ಜೂನ್ 1995ರವರೆಗೆ ಪ್ರಾರಂಭವಾದ ಕನ್ನಡ ಮಾಧ್ಯಮ ಶಾಲೆಗಳಿಗೆ ಕೆಲವು ಷರತ್ತುಗಳ ಮೇಲೆ ಅನುದಾನ ನೀಡಿದ್ದು, ನಮ್ಮ ಸಂಸ್ಥೆ 1995ರಲ್ಲಿಯೇ ಪ್ರಾರಂಭವಾಗಿದ್ದರೂ ಸಹ ಕಳೆದ ವರ್ಷ ಕೇವಲ ಒಂದು ದಿನದ ಕೊರತೆಯಿಂದ ಅನುದಾನ ಕಳೆದುಕೊಂಡಿತ್ತು.
ಆದ್ದರಿಂದ ನಮ್ಮ ಶಾಲೆ ಸರ್ಕಾರದಿಂದ ಅನುದಾನ ಸಿಗದೆ ಇದೀಗ ಮುಚ್ಚುವ ಹಂತ ತಲುಪಿದೆ. ಈ ಹಿನ್ನೆಲೆ ಕನ್ನಡ ಮಾಧ್ಯಮ ಶಾಲೆಯನ್ನು ಉಳಿಸಲು, ಶಿಕಾರಿಪುರದಲ್ಲಿ ಇಂದು ನಡೆಯುತ್ತಿರುವ ಪ್ರಜಾಸೇವಾ ಆಂದೋಲನದ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವರಿಗೆ ನೇರವಾಗಿ ಈ ರಕ್ತದ ಪತ್ರ ಹಸ್ತಾಂತರಿಸಲು ನಿರ್ಧಾರ ಮಾಡಿದ್ದಾರೆ.
