ಶಿವಮೊಗ್ಗ: ಜಿಲ್ಲೆಯಲ್ಲಿ ಗಾಂಜಾ ಹಾಗೂ ಓಸಿ ಆಟಗಳ ಹಾವಳಿ ಹೆಚ್ಚಾಗುತ್ತಿದ್ದು ಈ ಕುರಿತು ಐಜಿಗೆ ಮಾತನಾಡುತ್ತೇನೆ ಎಸ್.ಪಿ. ಯವರ ಬಳಿ ಚರ್ಚಿಸಿ ಕೂಡಲೆ ಕ್ರಮ ಕೈಗೊಳ್ಳುವಂತೆ ಹೇಳುತ್ತೇನೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಇಂದು ಶಿವಮೊಗ್ಗದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ (KDP) ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಕುರಿತು ಪ್ರಮುಖ ಚರ್ಚೆ ನಡೆಯಿತು. ಈ ಸಂದರ್ಭದಲ್ಲಿ ಶಿವಮೊಗ್ಗ ನಗರ ಶಾಸಕ ಚನ್ನಬಸಪ್ಪ ಮತ್ತು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರು ಗಾಂಜಾ ಮತ್ತು ಓಸಿ ಸೇರಿದಂತೆ ಇನ್ನಿತರ ಅನೈತಿಕ ಚಟುವಟಿಕೆಗಳ ಹಾವಳಿಯನ್ನು ನಿಯಂತ್ರಿಸುವಂತೆ ಧ್ವನಿ ಎತ್ತಿದರು.
ಚರ್ಚೆಯ ವೇಳೆ ಸಚಿವ ಮಧು ಬಂಗಾರಪ್ಪ ಅವರು ಪೊಲೀಸರಿಗೆ ಓಸಿ ಮತ್ತು ಗಾಂಜಾ ಹಾವಳಿಯನ್ನು ನಿಯಂತ್ರಿಸುವಂತೆ ಸೂಚನೆ ನೀಡಿದರು. ಆಗ ಪ್ರತಿಕ್ರಿಯಿಸಿದ ಶಾಸಕ ಆರಗ ಜ್ಞಾನೇಂದ್ರ, “ಬೀಟ್ ಪೊಲೀಸರ ಗಮನಕ್ಕೆ ಬಾರದೆ ಯಾವುದೇ ಅನೈತಿಕ ಚಟುವಟಿಕೆ ನಡೆಯಲು ಸಾಧ್ಯವಿಲ್ಲ. ಅಪರಾಧಿಗಳ ಜೊತೆ ಅಧಿಕಾರಿಗಳೂ ಶಾಮೀಲಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡು ಸಚಿವರು, ಮಕ್ಕಳ ಭವಿಷ್ಯ ರೂಪಿಸುವ ದೃಷ್ಟಿಯಿಂದ ಇದನ್ನು ನಿಯಂತ್ರಿಸಬೇಕು ಎಂದರು.
ಈ ವೇಳೆ ಧ್ವನಿ ಗೂಡಿಸಿ ಶಾಸಕ ಚನ್ನಬಸಪ್ಪ ಬಸವನಗುಡಿ ಕೃಷಿ ನಗರದಲ್ಲಿ ಹೆಣ್ಣುಮಗಳೊಬ್ಬಳು ಡ್ರಗ್ ಮಾಫಿಯಾದಲ್ಲಿ ಸಿಲುಕಿಕೊಂಡಿದ್ದಳು. ಆಕೆಯನ್ನು ನಿಯಂತ್ರಿಸಲು ಹೋದ ತಂದೆ-ತಾಯಿಯನ್ನೇ ಆ ಮಗಳು ಅಡ್ಡಕಟ್ಟಿದ್ದಳು. ನಂತರ ಆಕೆಯ ಮೊಬೈಲ್ ಪರಿಶೀಲನೆ ನಡೆಸಿದಾಗ, ಮೊಬೈಲ್ನ ಕಾಲ್ ರೆಕಾರ್ಡ್ಗಳು ಭಯ ಹುಟ್ಟಿಸುವಂತಿವೆ ಎಂದರು.

ಹಾಗೆಯೇ ಗಾಂಜಾ ವಿಚಾರದಲ್ಲಿ ದೂರು ನೀಡಲು ಹೋದವರ ಮೇಲೆಯೇ ಹಲ್ಲೆ ನಡೆಸಲಾಗುತ್ತಿದೆ ಎಂದು ಶಾಸಕರು ದೂರಿದಾಗ, ಸಭೆಯಲ್ಲಿದ್ದ ಹೆಚ್ಚುವರಿ ರಕ್ಷಣಾಧಿಕಾರಿ (Additional SP) ಅವರು, “ಕಳೆದ ವರ್ಷ 431 ಗಾಂಜಾ ಪ್ರಕರಣಗಳಿದ್ದರೆ, ಈ ಬಾರಿ 231 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದೇವೆ. ಕಳೆದ ಬಾರಿಗಿಂತ ಈ ಬಾರಿ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ” ಎಂದು ಮಾಹಿತಿ ನೀಡಿದರು. ಈ ಪ್ರತಿಕ್ರಿಯೆಯಿಂದ ಗರಂ ಆದ ಶಾಸಕ ಚನ್ನಬಸಪ್ಪ ಈ ಪ್ರಕರಣಗಳು ಪತ್ತೆಯಾಗದಂತೆ ತಡೆಯಬೇಕು. ಇದನ್ನು ನಿಯಂತ್ರಿಸಲು ಪೊಲೀಸ್ ಇಲಾಖೆಗೆ ಸಾಧ್ಯವಾಗದಿದ್ದರೆ, ಇಲಾಖೆ ಏಕೆ ಬೇಕು? ಮುಚ್ಚಿಬಿಡಿ” ಎಂದು ಆಕ್ರೋಶ ಹೊರಹಾಕಿದರು.
ಶಿವಮೊಗ್ಗ: ಕಾರಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ
ಶಾಸಕರ ಅಭಿಪ್ರಾಯಗಳನ್ನು ಆಲಿಸಿದ ಸಚಿವ ಮಧು ಬಂಗಾರಪ್ಪ ಅವರು, ಈ ಹಾವಳಿಯನ್ನು ಇಗಲೇ ಚಿವುಟಬೇಕು, ಇಲ್ಲದಿದ್ದರೆ ಇನ್ನೂ ದೊಡ್ಡದಾಗಿ ಬೆಳೆಯುತ್ತದೆ. ಸಭೆ ಮುಗಿದ ಕೂಡಲೇ ಐಜಿ ಅವರೊಂದಿಗೆ ಮಾತನಾಡುವುದಾಗಿ ಮತ್ತು ಎಸ್ಪಿ ಅವರೊಂದಿಗೆ ಚರ್ಚಿಸಿ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.







