Karnataka 108 Ambulance ಶಿವಮೊಗ್ಗ : ಇನ್ಮುಂದೆ ತುರ್ತು ಕರೆ ಬಂದ ಕೇವಲ 15 ನಿಮಿಷಗಳಲ್ಲಿ ಆ್ಯಂಬುಲೆನ್ಸ್ ನಿಗದಿತ ಜಾಗಕ್ಕೆ ಕಡ್ಡಾಯವಾಗಿ ತಲುಪಬೇಕು ಎಂಬ ಹೊಸ ರೂಲ್ಸ್ನ್ನುಆರೋಗ್ಯ ಸಚಿವ ಯುಟಿ ಖಾದರ್ ಜಾರಿಗೆ ತಂದಿದ್ದಾರೆ.
ತುರ್ತು ಸಂದರ್ಭಗಳಲ್ಲಿ ರೋಗಿಗಳಿಗೆ ಸಕಾಲದಲ್ಲಿ ಸ್ಪಂದಿಸುವ ನಿಟ್ಟಿನಲ್ಲಿ ಆ್ಯಂಬುಲೆನ್ಸ್ ಚಾಲಕರಿಗೆ ಈ ಹೊಸ ಕಾಲಮಿತಿಯನ್ನು ನಿಗದಿಪಡಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಒಂದು ವೇಳೆ ತುರ್ತು ಕರೆ ಬಂದ 15 ನಿಮಿಷಗಳ ಒಳಗೆ 108 ಆ್ಯಂಬುಲೆನ್ಸ್ ಸ್ಥಳಕ್ಕೆ ಆಗಮಿಸದಿದ್ದರೆ, ಸಂಬಂಧಪಟ್ಟ ಚಾಲಕರಿಗೆ 5,000 ವರೆಗೆ ದಂಡ ವಿಧಿಸಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ. ಕೇಂದ್ರ ಸರ್ಕಾರದ ರಾಷ್ಟ್ರೀಯ ಆ್ಯಂಬುಲೆನ್ಸ್ ಸೇವೆಗಳ ಗೈಡ್ಲೈನ್ಸ್ ಪ್ರಕಾರ 20 ನಿಮಿಷಗಳ ಕಾಲಾವಕಾಶ ಇದೆ. ಆದರೆ, ರಾಜ್ಯದಲ್ಲಿ ಇದನ್ನು ಮತ್ತಷ್ಟು ಕಡಿತಗೊಳಿಸಿ ಜನಸ್ನೇಹಿಯಾಗಿಸಲಾಗುತ್ತಿದೆ.
ಅಪಘಾತ ಅಥವಾ ತೀವ್ರ ಅನಾರೋಗ್ಯದ ಸಂದರ್ಭದಲ್ಲಿ ಮೊದಲ ಒಂದು ಗಂಟೆಯ ಅವಧಿ ಅತಿ ಮುಖ್ಯವಾಗಿದ್ದು, ಇದನ್ನು ವೈದ್ಯಕೀಯ ಲೋಕದಲ್ಲಿ ಗೋಲ್ಡನ್ ಅವರ್ ಎನ್ನಲಾಗುತ್ತದೆ. ಈ ಅವಧಿಯಲ್ಲೇ ಸೂಕ್ತ ಚಿಕಿತ್ಸೆ ಸಿಕ್ಕರೆ ಶೇ. 90 ರಷ್ಟು ರೋಗಿಗಳ ಪ್ರಾಣ ಉಳಿಸಬಹುದು. ಇದೇ ಕಾರಣಕ್ಕೆ ರಾಜ್ಯದಲ್ಲಿ 15 ನಿಮಿಷದ ನಿಯಮವನ್ನು ಕಡ್ಡಾಯವಾಗಿ ಜಾರಿಗೊಳಿಸಲಾಗುತ್ತಿದೆ ಎಂದು ಸಚಿವರು ವಿವರಿಸಿದ್ದಾರೆ.
ಪ್ರಸ್ತುತ ರಾಜ್ಯಾದ್ಯಂತ ಸುಮಾರು 700 ರಿಂದ 800 ಆ್ಯಂಬುಲೆನ್ಸ್ಗಳು ಕಾರ್ಯನಿರ್ವಹಿಸುತ್ತಿವೆ. ಈ ಇಡೀ ನೆಟ್ವರ್ಕ್ ಅನ್ನು ಇನ್ನಷ್ಟು ವ್ಯವಸ್ಥಿತವಾಗಿ ರೂಪಿಸಲು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಹೊಸ ಗೈಡ್ಲೈನ್ಸ್ ಬಿಡುಗಡೆ ಮಾಡಲಾಗುತ್ತದೆ. ಈ ಇಡೀ ಪ್ರಕ್ರಿಯೆ ಪೂರ್ಣಗೊಂಡು ಅಧಿಕೃತವಾಗಿ ಜಾರಿಗೆ ಬರಲು ಕನಿಷ್ಠ ಮೂರು ತಿಂಗಳ ಸಮಯಾವಕಾಶ ಬೇಕಾಗಬಹುದು ಎಂದು ಸಚಿವರು ಮಾಹಿತಿ ನೀಡಿದ್ದಾರೆ.





