ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ : ಸಚಿವ ಬಸವರಾಜ ರಾಯರೆಡ್ಡಿ ಮತ್ತು ಶಾಸಕ ಯತೀಂದ್ರ ಸಿದ್ದರಾಮಯ್ಯ ನೀಡುತ್ತಿರುವ ಧಾರ್ಮಿಕ ಹೇಳಿಕೆಗಳ ವಿರುದ್ಧ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಶಿವಮೊಗ್ಗದಲ್ಲಿ ಇಂದು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ನಗರದ ಪತ್ರಿಕಾ ಭವವದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಚಿವ ರಾಯರೆಡ್ಡಿ ಹೇಳಿಕೆಯನ್ನು ಉಲ್ಲೇಖಿಸಿ, ಅಯೋಗ್ಯರ ಹಾಗೂ ಧರ್ಮಾಂಧರ ಕೈಗೆ ಶಿಕ್ಷಣ ಇಲಾಖೆ ಸಿಕ್ಕಿದೆ. ಡಿಕೆಶಿ ಕ್ಯಾಬಿನೆಟ್ನಲ್ಲಿ ಇಂಥವರು ಹಲವರಿದ್ದಾರೆ. ತಾವೇ ದೊಡ್ಡ ವಿದ್ವಾಂಸರು ಎಂಬ ಭ್ರಮೆಯಲ್ಲಿ ಧರ್ಮಗಳ ನಡುವೆ ಸಂಘರ್ಷ ತರುವ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇಸ್ಲಾಂ ಶ್ರೇಷ್ಠ, ಮಠ-ಮಂದಿರಗಳಿಗೆ ಹೋಗಬಾರದು ಎಂದು ಹೇಳಲು ಇವರಿಗೆ ಅಧಿಕಾರ ಕೊಟ್ಟವರು ಯಾರು ಮಠಗಳಿಗೆ ಹೋದರೆ ಕನಿಷ್ಠ ಒಳ್ಳೆಯ ಬುದ್ಧಿಯಾದರೂ ಬರುತ್ತದೆ ಎಂದು ಕಿಡಿಕಾರಿದರು.
ಹಾಗೆಯೇ ಸಾವಿರಾರು ವರ್ಷಗಳ ಇತಿಹಾಸವಿರುವ, ವಿಶ್ವಕ್ಕೆ ಶಾಂತಿ ಬೋಧಿಸಿದ ಸನಾತನ ಹಿಂದೂ ಧರ್ಮವನ್ನು ಟೀಕಿಸಲು ನಿಮಗೇನು ಹಕ್ಕಿದೆ, ಹಿಂದೂ ಮಠಗಳ ವಿರುದ್ಧ ಮಾತನಾಡಿದ ಬಸವರಾಜ ರಾಯರೆಡ್ಡಿ ಮೇಲೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಕ್ಷಣ ಸುಮೊಟೊ ಎಫ್ಐಆರ್ ದಾಖಲಿಸಿ ಜೈಲಿಗೆ ಕಳುಹಿಸಬೇಕು. ಒಂದೇ ಮಾತರಂ ಅಥವಾ ಭಾರತ್ ಮಾತಾ ಕೀ ಜೈ ಅಂದ ತಕ್ಷಣ ಎಫ್ಐಆರ್ ಹಾಕುವ ಪೊಲೀಸರು ಈಗೇಕೆ ಸುಮ್ಮನಿದ್ದಾರೆ ಇಂದು ಬೆಳಿಗ್ಗೆ ಆಂಜನೇಯ ಸ್ವಾಮಿ ದೇಗುಲಕ್ಕೆ ಹೋಗಿದ್ದ ರಾಯರೆಡ್ಡಿಗೆ ರಾತ್ರಿ ಕನಸಿನಲ್ಲಿ ಸ್ವಾಮಿ ಬಂದು ಜಾಡಿಸಿರಬೇಕು, ಅದಕ್ಕೆ ಭಯಬಿದ್ದು ಹೋಗಿದ್ದಾರೆ ಎಂದು ವ್ಯಂಗ್ಯವಾಡಿದರು.
ಇದೇ ವೇಳೆ ಶಾಸಕ ಯತೀಂದ್ರ ಸಿದ್ದರಾಮಯ್ಯ ವಿರುದ್ಧವೂ ವಾಗ್ದಾಳಿ ನಡೆಸಿದ ಈಶ್ವರಪ್ಪ, ಸಿದ್ದರಾಮಯ್ಯನವರ ಮಗ ಭಾರತವನ್ನು ಹಿಂದೂ ರಾಷ್ಟ್ರ ಮಾಡಲು ಬಿಡಲ್ಲ ಎನ್ನುತ್ತಾರೆ. ಹಾಗಾದರೆ ಇದನ್ನು ಮುಸ್ಲಿಂ ರಾಷ್ಟ್ರ ಮಾಡುತ್ತೀರಾ,ಹಿಂದೂ ಯುವಕರ ತಾಳ್ಮೆ ಪರೀಕ್ಷಿಸಬೇಡಿ, ಅವರು ತಿರುಗಿ ಬಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ. ಉನ್ನತ ಶಿಕ್ಷಣ ಇಲಾಖೆಯಲ್ಲಿದ್ದುಕೊಂಡು ಈ ರೀತಿ ಮಾತನಾಡಲು ರಾಯರೆಡ್ಡಿಗೆ ಅರ್ಹತೆಯಿಲ್ಲ, ಅವರನ್ನು ತಕ್ಷಣ ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಮುಖ್ಯಮಂತ್ರಿಗಳಿಗೆ ಆಗ್ರಹಿಸುತ್ತೇನೆ ಎಂದರು.
