elephant: ಸಕಲೇಶಪುರ ತಾಲೂಕಿನ ಹಲಸುಲಿಗೆ ಬಳಿಯ ಮಾಗಡಿ ಎಸ್ಟೇಟ್ನಲ್ಲಿ 20 ವರ್ಷದ ಒಂಟಿ ಸಲಗವೊಂದು ಖೆಡ್ಡಾಗೆ ಬಿದ್ದಿದೆ. ಕರ್ನಾಟಕ ಭೀಮ ಸೇರಿದಂತೆ ಇತರೆ ಆನೆಗಳ ಸಹಯೋಗದಿಂದ ಅರಣ್ಯ ಇಲಾಖೆ ಸಿಬ್ಬಂದಿಗಳು ಸಲಗವನ್ನು ಹಿಡಿಯಲು ಕಾರ್ಯಾಚರಣೆ ಆರಂಬಿಸಿದ್ದು, ಕಾರ್ಯಾಚರಣೆ ಆರಂಭಿಸಿದ ಮೊದಲ ದಿನವೇ ಸಲಗ ಖೆಡ್ಡಾಗೆ ಬಿದ್ದಿದೆ.
ಗುರುವಾರ ಅರಣ್ಯ ಇಲಾಖೆ ಅಧಿಕಾರಿಗಳು ಸಾಕು ಆನೆಗಳಾದ ಕಂಜನ್, ಸುಗ್ರೀವ, ಧನಂಜಯ, ಮಹೇಂದ್ರ, ಏಕಲವ್ಯ ಮತ್ತು ಕರ್ನಾಟಕ ಭೀಮ ಆನೆಗಳನ್ನು ಬಳಸಿಕೊಂಡು ಕಾರ್ಯಾಚರಣೆ ಆರಂಭಿಸಿದ್ದರು ಆವೇಳೆ ಒಂಟಿ ಸಲಗ ಕಾಫಿ ತೋಟದ ಮಧ್ಯೆ ಅಡಗಿ ಕುಳಿತಿತ್ತು. ಅದನ್ನು ಗಮನಿಸಿದ ಸಿಬ್ಬಂದಿಗಳು ವೈದ್ಯರಿಗೆ ಮಾಹಿತಿ ನೀಡಿದರು. ವೈದ್ಯರಾದ ಮುಜೀಬ್, ವಾಸಿಂ ಅವರು ಸಲಗಕ್ಕೆ ಅರವಳಿಕೆ ಚುಚ್ಚುಮದ್ದು ನೀಡಿದರು. ಇಂಜೆಕ್ಷನ್ ನೀಡುತ್ತಿದ್ದಂತೆ ಸಲಗ ಓಡಲು ಅರಂಭಿಸಿತು. ಸ್ವಲ್ಪ ದೂರ ಓಡಿ ಚುಚ್ಚುಮದ್ದು ದೇಹ ಸೇರುತ್ತಿದ್ದಂತೆಯೇ ಪ್ರಜ್ಞೆ ತಪ್ಪಿ ಬಿದ್ದಿತು.
ನಂತರ ಆ ಪ್ರದೇಶದಲ್ಲಿ ಬಿಸಿಲು ಹೆಚ್ಚಾಗಿದ್ದರಿಂದ ಸಿಬ್ಬಂದಿಗಳು ಆನೆಗೆ ಗೋಣಿಚೀಲ ಹೊದಿಸಿ ನೀರು ಸುರಿದು ಆರೈಕೆ ಮಾಡಿದರು. ನಂತರ ಎಲ್ಲರೂ ಸೇರಿ ಸೆರೆ ಸಿಕ್ಕ ಆನೆ ಕಾಲಿಗೆ ಹಗ್ಗ ಕಟ್ಟಿದ ನಂತರ ವೈದ್ಯರು ರಿವರ್ಸಲ್ ಇಂಜೆಕ್ಷನ್ ನೀಡಿದರು.ಆನೆ ಸುಧಾರಿಸಿಕೊಂಡ ನಂತರ ಅದನ್ನು ಸಾಕಾನೆಗಳು ಎಳೆದು ತಂದುವು.
elephant: ಅನೇಕರನ್ನು ಬಲಿ ಪಡೆದಿದ್ದ ಸಲಗ
ಈ ಸಲಗ ಈ ಹಿಂದೆ ಅಲ್ಲಿನ ಜನರಿಗೆ ಬಹಳಾ ಉಪಟಳವನ್ನು ನೀಡುತ್ತಿತ್ತು. ಅಲ್ಲದೆ ಏಪ್ರಿಲ್ 25 ರಂದು ಬೈಕೆರೆಯಲ್ಲಿ ಷಣ್ಮುಕ ಎಂಬುವವರನ್ನು ಬಲಿಪಡೆದಿತ್ತು. ಅಷ್ಟೇ ಅಲ್ಲದೆ ಅದಕ್ಕೂ ಮುನ್ನ ತಾಲೂಕಿನ ಹೆಬ್ಬನಹಳ್ಳಿ ಗ್ರಾಮದಲ್ಲಿ ರಾಜು ಎಂಬುವರನ್ನು ತುಳಿದು ಗಂಭೀರವಾಗಿ ಗಾಯಗೊಳಿಸಿತ್ತು. ಇಂದು ಈ ಸಲಗ ಖೆಡ್ಡಾಗೆ ಬಿದ್ದಿದ್ದು, ಇದರಿಂದ ಅಲ್ಲಿನ ಕಾಫಿ ಬೆಳೆಗಾರರು ಕಾರ್ಮಿಕರು ನಿಟ್ಟುಸಿರು ಬಿಟ್ಟಂತಾಗಿದೆ.
ಹೀಗೆ ತಾಲೂಕಿನಲ್ಲಿ ಮೂರರಿಂದ ನಾಲ್ಕು ಪುಂಡಾನೆಗಳನ್ನು ಸೆರೆ ಹಿಡಿದು ಸ್ಥಳಾಂತರ ಮಾಡಲು ಅರಣ್ಯ ಇಲಾಖೆ ನಿರ್ಧರಿಸಿದೆ. ಕಳೆದ ಮಾರ್ಚ್ನಲ್ಲಿ ಬೇಲೂರು ತಾಲೂಕಿನಲ್ಲಿ ಕಾರ್ಯಾಚರಣೆ ನಡೆಸಿ ಮೂರು ಪುಂಡಾನೆಗಳನ್ನು ಸೆರೆ ಹಿಡಿದು ಸ್ಥಳಾಂತರ ಮಾಡಿ, ಅಷ್ಟೇ ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸಲಾಗಿತ್ತು.