ಶಿವಮೊಗ್ಗ: ಆರ್.ಎಸ್.ಎಸ್ ನಾಯಕರು ನೀಡುತ್ತಿರುವ ಸಂವಿಧಾನ ವಿರೋಧಿ ಹೇಳಿಕೆಗಳಿಂದ ಪ್ರಚೋದಿತರಾಗಿ ಸಮಾಜದಲ್ಲಿ ಮರ್ಯಾದಾ ಹತ್ಯೆಗಳು ಹೆಚ್ಚುತ್ತಿವೆ ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಗುರುಮೂರ್ತಿ ಗಂಭೀರ ಆರೋಪ ಮಾಡಿದ್ದಾರೆ.

ಟ್ರೇಡಿಂಗ್ ಹೆಸರಿನಲ್ಲಿ ಶಿವಮೊಗ್ಗದ ವ್ಯಕ್ತಿಗೆ 4 ಲಕ್ಷ ವಂಚನೆ : ಹೀಗೂ ಯಾಮಾರಿಸ್ತಾರೆ ಹುಷಾರ್
ಇಂದು ನಗರದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ನಡೆದ ಮಾನ್ಯತಾ ಪಾಟೀಲ್ ಹತ್ಯೆಯು ಅತ್ಯಂತ ಖಂಡನೀಯವಾಗಿದ್ದು, ದಲಿತ ಯುವಕನನ್ನು ಮದುವೆಯಾಗಿದ್ದಕ್ಕಾಗಿಯೇ ಆಕೆಯ ತಂದೆ ಕೊಲೆ ಮಾಡಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಿದೆ. ಭಾರತವನ್ನು ಹಿಂದೂ ರಾಷ್ಟ್ರ ಮಾಡುವ ಹಂಬಲ ಹಾಗೂ ಜಾತಿ ವ್ಯವಸ್ಥೆ ಕುರಿತು ಆರ್.ಎಸ್.ಎಸ್ ಮುಖ್ಯಸ್ಥ ಮೋಹನ್ ಭಾಗವತ್ ನೀಡುತ್ತಿರುವ ಭಿನ್ನವಾದ ಹೇಳಿಕೆಗಳು ಇಂತಹ ಕೃತ್ಯಗಳಿಗೆ ಪರೋಕ್ಷವಾಗಿ ಪ್ರಚೋದನೆ ನೀಡುತ್ತಿವೆ ಎಂದು ಅವರು ಆರೋಪಿಸಿದರು. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿದ ಸಂವಿಧಾನವನ್ನು ಬುಡಮೇಲು ಮಾಡುವ ಹುನ್ನಾರದ ಭಾಗವಾಗಿ ಇಂತಹ ಘಟನೆಗಳು ನಡೆಯುತ್ತಿವೆ ಎಂದರು.
ಹುಬ್ಬಳ್ಳಿಯ ಈ ಘಟನೆಯಲ್ಲಿ ಮೃತಪಟ್ಟ ಮಾನ್ಯತಾ ಪಾಟೀಲ್ ಲಿಂಗಾಯತ ಸಮುದಾಯಕ್ಕೆ ಸೇರಿದವಳಾಗಿದ್ದು, ಬಸವಣ್ಣನವರ ತತ್ವಗಳನ್ನು ಪಾಲಿಸುವ ಸ್ವಾಮೀಜಿಗಳು ಮತ್ತು ಸಂಘ ಪರಿವಾರದ ನಾಯಕರು ಈ ಕೊಲೆಯ ಬಗ್ಗೆ ಮೌನ ವಹಿಸಿರುವುದು ಸರಿಯಲ್ಲ. ಕೂಡಲೇ ಸಂತ್ರಸ್ತ ಕುಟುಂಬಕ್ಕೆ ಮತ್ತು ದಲಿತ ಯುವಕನಿಗೆ ಸೂಕ್ತ ಭದ್ರತೆ ಒದಗಿಸಬೇಕು ಹಾಗೂ ಜಿಲ್ಲಾಧಿಕಾರಿಗಳು ಘೋಷಿಸಿರುವ ಐದು ಲಕ್ಷ ರೂಪಾಯಿಗಳ ಪರಿಹಾರವು ಅತ್ಯಲ್ಪವಾಗಿದ್ದು, ಸರ್ಕಾರ ಕೂಡಲೇ ಕನಿಷ್ಠ ಒಂದು ಕೋಟಿ ರೂಪಾಯಿಗಳ ಪರಿಹಾರ ನೀಡಬೇಕು ಎಂದು ಅವರು ಆಗ್ರಹಿಸಿದರು. ಜಾತಿ ಮತ್ತು ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ರಾಜಕಾರಣವು ಸಮಾಜದ ಶಾಂತಿಯನ್ನು ಕದಡುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ವಕೀಲ ಶ್ರೀಪಾಲ್ ಅವರು ಮಾತನಾಡಿ, ಮರ್ಯಾದಾ ಹತ್ಯೆಗಳಂತಹ ಘೋರ ಕೃತ್ಯಗಳು ನಡೆದಾಗ ಸಮಾಜದ ದೊಡ್ಡ ನಾಯಕರು ಮೌನ ವಹಿಸುವುದು ಕೂಡ ಅಪರಾಧವೇ ಆಗಿದೆ. ಧಾರವಾಡದಲ್ಲಿ ನಡೆದ ಘಟನೆ ಮತ್ತು ಬಾಂಗ್ಲಾದೇಶದಲ್ಲಿ ನಡೆದ ಹಿಂಸಾಚಾರ ಎರಡೂ ಸಮಾನವಾಗಿ ಖಂಡನೀಯವಾಗಿದ್ದು, ಸರ್ಕಾರವು ಜಾತಿಯ ಮುಳ್ಳನ್ನು ಕಿತ್ತುಹಾಕಲು ಪ್ರಾಮಾಣಿಕ ಶ್ರಮ ವಹಿಸಬೇಕು ಎಂದು ಒತ್ತಾಯಿಸಿದರು. ತನಿಖೆಗಳು ನಿಷ್ಪಕ್ಷಪಾತವಾಗಿ ನಡೆಯಬೇಕು ಮತ್ತು ಸಮಾಜದಲ್ಲಿ ಸಮಾನತೆ ಕಾಪಾಡಲು ಆಡಳಿತ ವ್ಯವಸ್ಥೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
dss Blames RSS for Honor Killings in Karnataka
ಇದೇ ವೇಳೆ, ನ್ಯಾಯಾಂಗದ ಪಾವಿತ್ರ್ಯತೆಯ ಬಗ್ಗೆ ಮಾತನಾಡಿದ ವಕೀಲ ಶ್ರೀಪಾಲ್ ಅವರು, ನ್ಯಾಯಾಧೀಶರು ಕ್ರಿಮಿನಲ್ ಆರೋಪ ಎದುರಿಸುತ್ತಿರುವವರ ಜೊತೆ ವೇದಿಕೆ ಹಂಚಿಕೊಳ್ಳುವುದು ತಪ್ಪು ಎಂಬ ಬಗ್ಗೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಗೆ ಪತ್ರ ಬರೆದಿರುವುದಾಗಿ ತಿಳಿಸಿದರು. ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರ ವಿರುದ್ಧ ಹಲವು ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿ ಇರುವಾಗ, ಡಿಸೆಂಬರ್ 25 ರಂದು ಶಿವಮೊಗ್ಗದಲ್ಲಿ ನಡೆಯುವ ಶ್ರೀಗಂಧ ಸಂಸ್ಥೆಯ ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ಶ್ರೀ ಶಾನಂದ್ ಅವರು ಭಾಗವಹಿಸುತ್ತಿರುವುದು ಸರಿಯಲ್ಲ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಆರೋಪಿತರೊಂದಿಗೆ ನ್ಯಾಯಾಧೀಶರು ಸಾರ್ವಜನಿಕವಾಗಿ ಗುರುತಿಸಿಕೊಳ್ಳುವುದರಿಂದ ಜನಸಾಮಾನ್ಯರಿಗೆ ನ್ಯಾಯಾಂಗದ ಮೇಲಿರುವ ನಂಬಿಕೆ ಕುಸಿಯಬಹುದು ಎಂಬ ಕಾರಣಕ್ಕೆ ಈ ಪತ್ರ ಬರೆಯಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
