ಫಲಪುಷ್ಪಗಳ ಜಗತ್ತಿನಲ್ಲಿ ಶಾಸಕ ಎಸ್‌ಎನ್ ಚನ್ನಬಸಪ್ಪಕೊಟ್ರು ಗುಡ್‌ ನ್ಯೂಸ್

131

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Jan 24, 2025

ವೈವಿಧ್ಯಮಯ ಕರಕುಶಲ ಮತ್ತು ಫಲಪುಷ್ಪಗಳ ಜಗತ್ತು ಇಲ್ಲಿ ಸೃಷ್ಟಿಯಾಗಿದೆ. ಕರಕುಶಲ ಕಲಾವಿದರಿಗೆ ಶಾಶ್ವತವಾಗಿ ಮಾರುಕಟ್ಟೆ ಒದಗಿಸಲು ಮಾಲ್‌ನ್ನು ನಿರ್ಮಿಸಿದರೆ ಅನುಕೂಲವಾಗುತ್ತದೆ. ಇದಕ್ಕೆ ನಮ್ಮ ಸಹಕಾರ ಸಹ ಇದೆ ಎಂದು ಶಾಸಕರಾದ ಎಸ್.ಎನ್.ಚನ್ನಬಸಪ್ಪ ತಿಳಿಸಿದರು.

ಜಿಲ್ಲಾ ಪಂಚಾಯತ್, ತೊಟಗಾರಿಕೆ ಇಲಾಖೆ, ಜಿಲ್ಲಾ ಉದ್ಯಾನ ಕಲಾ ಸಂಘ ಶಿವಮೊಗ್ಗ ಇವರ ಸಹಯೋಗದಲ್ಲಿ ಅಲ್ಲಮಪ್ರಭು ಉದ್ಯಾನವನ(ಫ್ರೀಡಂ ಪಾರ್ಕ್) ಇಲ್ಲಿ ಜನವರಿ 24 ರಿಂದ 26 ರವರೆಗೆ ಏರ್ಪಡಿಸಲಾಗಿರುವ ಮಲೆನಾಡ ಕರಕುಶಲ ಉತ್ಸವ ಸರಸ್ ಮೇಳ ಹಾಗೂ ಪುಷ್ಪಸಿರಿ ಫಲಪುಷ್ಪ ಪ್ರದರ್ಶನವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.ಜಿ.ಪಂ. ಸಿಇಒ ಹೇಮಂತ್ ಅವರ ಮಲೆನಾಡ ಕರಕುಶಲ ಉತ್ಸವದ ಕನಸು ಇಂದು ನನಸಾಗಿದೆ. ಇಚ್ಚಾಶಕ್ತಿ ಇರುವ ಅಧಿಕಾರಗಳಿಂದ ಮಾತ್ರ ಇದು ಸಾಧ್ಯ .ಇಂತಹ ಕಾರ್ಯಕ್ರಮವನ್ನು ನೆನಪು ಮಾಡಿಕೊಂಡಾಗೆಲ್ಲಾ ಕರಕುಶಲ ಕಲಾವಿದರಿಗೆ ಸರಿಯಾದ ನ್ಯಾಯ ಸಿಗುತ್ತಿಲ್ಲ ಎಂದು ಕೊರಗಿತ್ತು. ಆದರೆ ಇವತ್ತು ಅದಕ್ಕೆ ನ್ಯಾಯ ಸಿಕ್ಕಿದೆ ಎಂದೆನಿಸುತ್ತಿದೆ. ಬೆಂಗಳೂರಿನಂತೆಯೇ ನಮ್ಮ ಜಿಲ್ಲೆಯಲ್ಲೂ ಬೃಹತ್ ಮಟ್ಟದಲ್ಲಿ ಕರಕುಶಲ ಮತ್ತು ಫಲ ಪುಷ್ಪ ಪ್ರದರ್ಶನ ಏರ್ಪಟ್ಟಿದೆ. ಕುಪ್ಪಳಿಯಲ್ಲಿನ ಕುವೆಂಪುರವರ ಮನೆಯನ್ನು ಇಡೀ ದೇಶದ ಜನ ನೋಡುವಂತಾಗಿ. ಅಂತಹ ಕುವೆಂಪುರವರ ಮನೆಯ ಕಲಾಕೃತಿಯನ್ನು ಕಲಾವಿದರು ಈ ಪ್ರದರ್ಶನದಲ್ಲಿ ಕಣ್ತುಂಬಿಕೊಳ್ಳಬಹುದಾಗಿದೆ. ಧಾರ್ಮಿಕ ಕೇಂದ್ರವಾದ ಚಂದ್ರಗುತ್ತಿ ದೇವಾಲಯ ಜನರನ್ನು ಸೆಳೆಯುತ್ತಿದೆ ಎಂದರು. 

ಇಲ್ಲಿನ ಉತ್ಪನ್ನಗಳನ್ನು ನಾವು ಕೊಂಡುಕೊಳ್ಳುವುದರ ಮೂಲಕ ಇವರೆಲ್ಲರನ್ನು ಸಹಕರಿಸೊಣ |  ಆರ್.ಎಂ.ಮಂಜುನಾಥ ಗೌಡ

ಮಲೆನಾಡ ಕರಕುಶಲ ಉತ್ಸವವನ್ನು ಬಹಳ ಅರ್ಥಪೂರ್ಣವಾಗಿ ಮಾಡಲಾಗಿದೆ. ಧಾರ್ಮಿಕ, ಸಾಹಿತ್ಯಿಕ ಕಲಾಕೃತಿಗಳು, ಮಹಿಳೆಯರು ತಯಾರಿಸಿದ ಕರಕುಶಲ ವಸ್ತುಗಳಾದ ಟೆರಾಕೊಟ, ಹಸೆ ಚಿತ್ತಾರ, ರೇಶಿಮೆ, ಬಿದಿರು, ರೈತರು ಬೆಳೆದ ಫಲ-ಪುಷ್ಪಗಳು ರಾಷ್ಟ್ರಕವಿ ಕುವೆಂಪುರವರ ಪುಸ್ತಕ ಪ್ರದರ್ಶನ ತುಂಬಾ ವಿಶೇಷವಾಗಿದೆ. ಈ ಉತ್ಸವ 3 ದಿನಗಳ ಕಾಲ ಯಶಸ್ವಿಯಾಗಿ ನಡೆಯಲಿ ಎಂದ ಅವರು ಹಿಂದೆ ಜಿಲ್ಲೆಯಲ್ಲಿ ನಡೆಸಿದ್ದ ಕೊಡಚಾದ್ರಿ ಉತ್ಸವವನ್ನು ನೆನೆದರು. ಆಗ ಕರಕುಶಲ ಉತ್ಪನ್ನಗಳನ್ನು ಉತ್ತೇಜಿಸಲು 400 ಮಳಿಗೆಗಳನ್ನು ತೆರೆದು 7 ದಿನಗಳ ಕಾಲ ಉತ್ಸವವನ್ನು ಯಶಸ್ವಿಯಾಗಿ ನಡೆಸಲಾಗಿತ್ತು ಎಂದರು. ಇಂತಹ ಕಾರ್ಯಕ್ರಮಗಳು ಯಶಸ್ವಿಯಾಗಬೇಕು. ನಾವೆಲ್ಲ ಇಲ್ಲಿನ ಉತ್ಪನ್ನಗಳನ್ನು ಕೊಂಡಕೊಳ್ಳುವುದರ ಮೂಲಕ ಇವರೆಲ್ಲರನ್ನು ಸಹಕರಿಸೊಣ ಎಂದು ಮಲೆನಾಡು ಪ್ರದೇಶ ಅಭಿವೃದ್ದಿ ಮಂಡಳಿ ಅಧ್ಯಕ್ಷರಾದ ಆರ್.ಎಂ.ಮಂಜುನಾಥ ಗೌಡ ತಿಳಿಸಿದರು.  

ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿ, ಈ ಫಲಷುಪ್ಪ ಪ್ರದರ್ಶನದಲ್ಲಿ ಸುಮಾರು 428000 ಹೂಗಳನ್ನು ಬಳಕೆ ಮಾಡಲಾಗಿದೆ. ಹಾಗೂ ಇಂತಹ ಪ್ರದರ್ಶನದಿಂದ ಉತ್ತಮ ವಾತಾವರಣ ನಿರ್ಮಾಣವಾಗಿದೆ. ನಮ್ಮ ಜಿಲ್ಲೆಯಲ್ಲಿ ಉತ್ತಮ ಕರಕುಶಲ ವಸ್ತುಗಳು ಸಿದ್ದವಾಗುತ್ತಿವೆ. ಆದರೆ ಅವುಗಳ ಮಾರಾಟ ಮಾತ್ರ ಕುಂಠಿತವಾಗಿದೆ. ಇಂತಹ ಮೇಳದಲ್ಲಿ ಆನ್‌ಲೈನ್ ಮೂಲಕ ಮಾರಾಟಕ್ಕೆ ಮುಂದಾಗಿದ್ದೇವೆ. ಇದರಿಂದ ಕಲಾವಿದರಿಗೂ ಪ್ರೋತ್ಸಾಹ ನೀಡಿದಂತಾಗುತ್ತದೆ. ಮುಂದಿನ ಬಾರಿ ಮೇಳ ಆರಂಭಕ್ಕಿಂತ ಮಂಚಿತವಾಗಿ ಆನ್‌ಲೈನ್ ಮಾರಾಟದ ವ್ಯವಸ್ಥೆ ಕಲ್ಪಿಸಲು ಎಲ್ಲಾ ರೀತಿಯ ತಯಾರಿ ಮಾಡಲಾಗುತ್ತದೆ. ಈ ಕಾರ್ಯಕ್ರಮ ಯಶಸ್ಸಿಗೆ ಕಾರಣರಾದ ಜಿ.ಪಂ ಸಿಇಒ ಎನ್. ಹೇಮಂತ್ ಮತ್ತು ಅವರ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.

ಜಿ.ಪಂ ಸಿಇಓ ಹೇಮಂತ್ ಎನ್ ಮಾತನಾಡಿ, ಜಿಲ್ಲೆಯಲ್ಲಿ ತೋಟಗಾರಿಕೆ ಇಲಾಖೆ ಸದೃಢವಾಗಿದ್ದು, ಉತ್ತಮವಾಗಿ ಕಾರ್ಯವೆಸುತ್ತಿದೆ. ಮುಂದಿನ ದಿನಗಳಲ್ಲಿ ಮಹಿಳೆಯರು ತಯಾರಿಸಿದ ಕರಕುಶಲ ಉತ್ಪನ್ನಗಳಿಗೆ ಶಾಶ್ವತವಾಗಿ ಮಳಿಗೆ ಸ್ಥಾಪನೆ ಮಾಡುವ ಯೋಚನೆ ಇದೆ. ಒಳಾಂಗಣ ಮತ್ತು ಹೊರಾಂಗಣ ಅಲಂಕಾರಿಕ ವಸ್ತುಗಳು ಒಂದೇ ಸೂರಿನಡಿ ಹಾಪ್‌ಕಾಮ್ಸ್ ರೀತಿಯಲ್ಲಿ ಮಾರಾಟ ಮಾಡುವ ಪರಿಕಲ್ಪನೆ ಇದೆ. ಇಂದಿನ ಮೇಳಕ್ಕಾಗಿ ಜಿ.ಪಂ, ತಾ.ಪಂ ಹಾಗೂ ಎನ್‌ಆರ್‌ಎಲ್‌ಎಂ ತಂಡಗಳು ಶ್ರಮಿಸಿದ್ದಾರೆಂದು ಸ್ಮರಿಸಿದರು.

ಕಣ್ಮನ ಸೆಳೆದ ಕರಕುಶಲ ಮತ್ತು ಫಲಪುಷ್ಪಗಳ ಜಗತ್ತು

ಮಲೆನಾಡ ಕರಕುಶಲ ಉತ್ಸವ ಹಾಗೂ ಫಲಪುಷ್ಪ ಮೇಳದಲ್ಲಿ ಬೆಳಿಗ್ಗಿನಿಂದಲೇ ಸಾರ್ವಜನಿಕರು, ವಿದ್ಯಾರ್ಥಿಗಳು ಬಂದು ಭೇಟಿ ನೀಡುತ್ತಿದ್ದರು. ಮೇಳದ ಮುಂಭಾಗ ಐ ಲವ್ ಶಿವಮೊಗ್ಗ, ಚಂದ್ರಗುತ್ತಿ ದೇವಾಲಯ ಹಾಗೂ ಕವಿಶೈಲದ ಕಲಾಕೃತಿಗಳ ಮುಂದೆ ಜನರು, ವಿದ್ಯಾರ್ಥಿಗಳು ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸುತ್ತಿದ್ದರು.

 ಉತ್ಸವದಲ್ಲಿ ರೈತರು ಬೆಳೆದ ವಿವಿಧ ಫಲ-ಪುಷ್ಪಗಳು, ಕರಕುಶಲ ಮಳೆಗೆಗಳಾದ ಮಲೆನಾಡ ಕರಕುಶಲತೆಗಳು, ಸಹ್ಯಾದ್ರಿ ಕರಕುಶಲತೆ, ಬಂಜಾರ ಲಂಬಾಣಿ ಉಡುಪು, ಕಲ್ಲಿನ ಆಭರಣಗಳು, ಮಲೆನಾಡು ಸವಿರುಚಿ ತಿನಿಸು, ಅಕ್ಕ ಕೆಫೆ, ಮ್ಯೂರಲ್ ಕಲಾ ಚಿತ್ರಗಳು, ಹಸೆ ಚಿತ್ತಾರೆ, ಮಣ್ಣಿನ ಅಲಂಕಾರಿಕ ಮಳಿಗೆ, ಸ್ವದೇಶಿ, ಕೌದಿ, ಈಚಲು ಚಾಪೆ, ಮರದ ಉತ್ಪನ್ನಗಳು, ಟೆರಾಕೋಟ, ಖಾದಿ ಉಡುಪುಗಳು ಸೇರಿದಂತೆ ಒಳಾಂಗಣದಲ್ಲಿ 30 ಕ್ಕೂ ಹೆಚ್ಚು ಮಳಿಗೆ ಹಾಗೂ ಹೊರಾಂಗಣದಲ್ಲಿ ನರ್ಸರಿ ಗಿಡಗಳು, ವಿವಿಧ ಇಲಾಖೆಗಳ ಮಳಿಗೆಗಳು, ಕೃಷಿ ಪರಿಕರಗಳು, ತಿಂಡಿ-ತಿನಿಸು, ಸೀರೆ-ಬಟ್ಟೆ ಇನ್ನೂ ವಿವಿಧ ರೀತಿಯ 20 ಕ್ಕೂ ಹೆಚ್ಚು ಮಾರಾಟ ಮಳಿಗೆಗಳನ್ನು ಸ್ಥಾಪಿಸಲಾಗಿದೆ. 

SUMMARY | A world of diverse handicrafts and flowers has been created here. It would be beneficial if a mall is built to provide a permanent market for the artisans

KEYWORDS | handicrafts,  flowers, mla channabasappa, shivamogga,

Share This Article