#Gandhadagudi / ಮಲೆನಾಡು ಟುಡೆ, ಅಪ್ಪುರವರು ಅಭಿನಯಿಸಿದ ಗಂಧದಗುಡಿ ಸಿನಿಮಾ ಹಾಗೂ ಪುನೀತ್ ರಾಜಕುಮಾರ್ ಹಾಗೂ ಸಿನಿಮಾದ ಶಿವಮೊಗ್ಗದ ಲಿಂಕ್ಗಳನ್ನು ಹುಡುಕುಲು ಆರಂಭಿಸಿದಾಗ ಸಿಕ್ಕಿದ್ದು , ನಮ್ಮ ಮಲೆನಾಡಿನ ವಿಶೇಷ ವ್ಯಕ್ತಿ ಗೌರಿಶಂಕರ್..
ವೈಲ್ಡ್ಲೈಫ್ ಬಗ್ಗೆ ಕನ್ನಡದಲ್ಲಿಯೇ ಕರುನಾಡಿನ ಜನರಿಗೆ ತಿಳಿಸಬೇಕು ಎಂಬ ಹಂಬಲ ಹೊಂದಿರುವ ಗೌರಿಶಂಕರ್ರವರು ಕಾಳಿಂಗ ಸರ್ಪದ ವಿಚಾರದಲ್ಲಿ ವಿಶ್ವಮಟ್ಟದ ಪ್ರಖ್ಯಾತಿ ಹೊಂದಿದ್ದಾರೆ.
ಅವರನ್ನು ಸಂಪರ್ಕಿಸಿದಾಗ, ಪುನೀತ್ರಾಜಕುಮಾರ್ರವರ ಬಗ್ಗೆ ಮಾತನಾಡಲು ತುಂಬಾನೇ ಇದೆ ಎಂದರು. ಅದನ್ನು ಹಂಚಿಕೊಳ್ಳಬಹುದೇ ಎಂದಾಗ ಒಂದು ಸಣ್ಣ ಸಂದರ್ಶನವೇ ನಡೆಯಿತು. ಇಲ್ಲಿಂದ ಮುಂದೆ ನಮ್ಮ ಪ್ರತಿನಿಧಿ ಜೆಪಿ ಕೇಳಿದ ಪ್ರಶ್ನೆ ಹಾಗೂ ಅದಕ್ಕೆ ಗೌರಿಶಂಕರ್ ರವರು ನೀಡಿದ ಉತ್ತರಗಳಿವೆ.


ಪುನೀತ್ ರಾಜ್ ಸರ್ ಜೊತೆಗಿನ ನಿಮ್ಮ ಕಾಡಿನ ಅನುಭವ ಹೇಗಿತ್ತು
ಪುನೀತ್ ರವರು ಆಗುಂಬೆಯ ಕಾಡನ್ನು ಹಾಗು ನನ್ನ ರೀಸರ್ಚ್ ಸ್ಷೇಷನ್ ನೋಡುತ್ತಿದ್ದಂತೆ ತುಂಬಾ ಖುಷಿಪಟ್ಟರು, ಕಾಡಿನಲ್ಲಿ ಮನೆ ಕಟ್ಟಿಕೊಂಡಿದ್ದೀರಾ ಎಂದು ಕುತೂಹಲದಿಂದ ಮನೆಯ ಪರಿಸರವನ್ನು ವೀಕ್ಷಿಸಿದರು.
ನಮ್ಮ ಸ್ಟೂಡೆಂಟ್ಸ್ ಗಳ ಜೊತೆ ಮಾತಾಡಿದ್ರು, ಕಾಡಿನ ಒಳಗೆ ಅವರನ್ನು ಕರ್ಕೊಂಡು ಹೋದಾಗ, ಅದು ಅವರಿಗೆ ಮೊದಲ ಅನುಭವವಾಗಿತ್ತು. ಪುನೀತ್ ಕಾಡನ್ನು ನೋಡಿದ್ದಾರೆ. ಆದ್ರೆ ಕಾಡಿನ ಒಳ ಹೊಕ್ಕು ಓಡಾಡಿದ ಅನುಭವ ಅವರಿಗಿರಲಿಲ್ಲ. ಹಾಗಾಗಿ ಆಗುಂಬೆಯ ಪರಿಸರವನ್ನು ಅವರು ತುಂಬಾ ಸಂತೋಷ ಪಟ್ಟರು.
ಅವರನ್ನು ಕರೆದುಕೊಂಡು ಹೋದ ಸಂದರ್ಭದಲ್ಲಿಯೇ ಕಾಳಿಂಗ ಸರ್ಪವೊಂದು ಕೂಡ ಕಾಣಸಿಕ್ತು. ಕಾಳಿಂಗ ಸರ್ಪವನ್ನು ಮೊದಲ ಬಾರಿ ಹತ್ತಿರದಿಂದ ನೋಡಿದ ಅವರು ಅಚ್ಚರಿ ಪಟ್ಟಿದ್ರು.
ಇಷ್ಟೊಂದು ದೊಡ್ಡ ಹಾವಾ ಇದು. ನಾವು ಟಿವಿಯಲ್ಲಿ ನೋಡೋವಾಗ ಸಣ್ಣಕ್ಕೆ ಕಾಣುತ್ತಿತ್ತು. ನಿಜವಾಗ್ಲೂ ನಾನು ಲೈಫ್ ನಲ್ಲಿ ಇಷ್ಟೊಂದು ದೊಡ್ಡ ಹಾವು ನೋಡೇ ಇರ್ಲಿಲ್ಲ ಎನ್ನುತ್ತಾ ಅಚ್ಚರಿ ಕಣ್ಗಳಲ್ಲಿ ಮಾತನಾಡುತ್ತಿದ್ರು. ಅಂದು 12 ಅಡಿ ಹಾವನ್ನು ಹಿಡಿದು,ಕಾಡಿಗೆ ಬಿಟ್ಟಿದ್ವಿ.

ಕಾಳಿಂಗ ಸರ್ಪ ಕಾರ್ಯಾಚರಣೆ ಯಲ್ಲಿ ಖುದ್ದಾಗಿ ನಿಮ್ಮ ಜೊತೆಗಿದ್ದ ಪುನೀತ್ ಸರ್ಗೆ ಆದ ಅನುಭವ ಹೇಗಿತ್ತು
ಕಾಳಿಂಗ ಸರ್ಪದ ಕಾರ್ಯಾಚರಣೆಗೆ ಹೊರಟಾಗ ಅದು ಮನೆಯೊಂದರಲ್ಲಿ ಅಡಗಿ ಕೂತಿತ್ತು. ಪುನೀತ್ ರವರು ನನ್ನೊಂದಿಗೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾಗ ಅವರಿಗೆ ಕಾಳಿಂಗ ಸರ್ಪದ ಗಾತ್ರದ ಬಗ್ಗೆ ಗೊತ್ತಿರಲಿಲ್ಲ.
ಅವರು ಸಹಜವಾಗಿಯೇ ನಮ್ಮ ಜೊತೆ ಇದ್ರು, ಯಾವಾಗ ಕಾಳಿಂಗ ಸರ್ಪವನ್ನು ನಾನು ಅದು ಅಡಗಿದ್ದ ಜಾಗದಿಂದ ಹೊರತೆಗೆದೆನೋ..ಆಗ ಪುನೀತ್ ಅಬ್ಬಬ್ಬಾ ಎಷ್ಟು ದೊಡ್ಡ ಹಾವು..ನಾನೆಂದು ನೋಡಿರಲಿಲ್ಲ ಎನ್ನುತ್ತಾ ಕೆಲ ಹೆಜ್ಜೆ ಹಿಂದೆ ಸರಿದರು.
ಕಾಳಿಂಗ ಉಸಿರುಬಿಡುವ ಶಬ್ಧ ಮತ್ತು ಅದರ ರೌದ್ರತೆ ಪುನೀತ್ರನ್ನು ಮೂಕವಿಸ್ಮಿತಗೊಳಿಸಿತ್ತು. ಹಾವು ಅಟ್ಯಾಕಿಂಗ್ ನೇಚರ್ ತೋರಿಸಿತ್ತು. ಹಾಗಿದ್ದರೂ ಅದನ್ನು ಹಿಡಿದು ಸಂರಕ್ಷಿಸಿದ್ದನ್ನ ನೋಡಿ ಅಪ್ಪುರವರು, ನನಗೆ ತುಂಬಾನೆ ಇಷ್ಟವಾಯ್ತು ಹಾವು ಹಿಡಿದ ರೀತಿ ಎಂದರು.

ಕಾಳಿಂಗ ಸರ್ಪಗಳ ಬಗ್ಗೆ ಅವರು ಹೇಳಿದ್ದೇನು
ಹಿಡಿದ ಕಾಳಿಂಗವನ್ನು ಪುನಃ ಕಾಡಿಗೆ ಬಿಟ್ಟಾಗ ಪುನೀತ್ರ ಮನಸ್ಸಿಗೆ ಸಮಾಧಾನವಾಯ್ತು. ತಂದೆ ರಾಜಕುಮಾರ್ರವರ ಕಾಡಿನ ಅನುಭವವನ್ನು ಪುನೀತ್ ರವರು ನಮ್ಮ ಜೊತೆ ಮುಕ್ತವಾಗಿ ಹಂಚಿಕೊಂಡಿದ್ರು. ಸಿನಿಮಾದಲ್ಲಿ ತಂದೆಯವರು ನಾಗರ ಹಾವನ್ನು ಮುಟ್ಟುವ ಸಂದರ್ಭದಲ್ಲಿ, ಆನೆ ಏರುವಂತಹ ಸಂದರ್ಭದಲ್ಲಿ ನಾನು ಹೆದರಿ ಓಡುತ್ತಿದ್ದೆ ಎಂದು ಹಳೆಯ ಘಟನೆಗಳನ್ನು ನೆನಪು ಮಾಡಿಕೊಂಡರು.
ತಂದೆಯವರ ಕಾಡಿನ ಪ್ರೀತಿ ಬಗ್ಗೆ ತುಂಬಾ ಮಾತನಾಡಿದರು. ನನ್ನ ಜೊತೆ ಮೂರು ನಾಲ್ಕು ದಿನ ಕಾಡು ಸುತ್ತಿದಾಗ ಅವರಿಗೂ ಕೂಡ ಧೈರ್ಯ ಬಂತು. ಕಾಳಿಂಗ ಸರ್ಪದ ವಿಷದ ಬಗ್ಗೆ ಕೇಳಿದ್ರು. ಕಾಳಿಂಗ ಸರ್ಪದ ವಿಷದಿಂದ ಏಳರಿಂದ ಹತ್ತು ಮಂದಿ ಸಾಯುತ್ತಾರೆ.
ಒಂದು ಆನೆಯನ್ನು ಸಾಯಿಸಬಲ್ಲ ಶಕ್ತಿ ಕಾಳಿಂಗ ಸರ್ಪದ ವಿಷಕ್ಕಿರುತ್ತೆ ಎಂದು ಹೇಳಿದಾಗ ಅವರು ಚಕಿತರಾದರು. ಅವರೇ..ಕಾಳಿಂಗ ಗೂಡು ಕಟ್ಟಿ ಮೊಟ್ಟೆಗಳನ್ನಿಡುತ್ತೆ ಅಲ್ವಾ ಅಂದಾಗ, ಒಬ್ಬ ನಟ ಕಾಳಿಂಗ ಸರ್ಪದ ಬಗ್ಗೆ ಇಷ್ಟು ಮಾಹಿತಿ ತಿಳಿದುಕೊಂಡಿದ್ದಾರಲ್ಲ ಎಂದನಿಸಿತು.
ಗೂಡುಕಟ್ಟಿ ಮೊಟ್ಟೆಯಿಡುವ ಪ್ರಪಂಚದ ಏಕೈಕ ಹಾವು ಅಂದ್ರೆ ಅದು ಕಾಳಿಂಗ ಸರ್ಪ. ಅದರ ಬಗ್ಗೆ ಅವರು ತಿಳಿದುಕೊಂಡಿದ್ರೂ, ನನ್ನಿಂದ ಹೆಚ್ಚಿನ ಮಾಹಿತಿ ಪಡೆದಿದ್ದು ನಿಜಕ್ಕೂ ಖುಷಿಯಾಯ್ತು. ಕಾಡಿನ ಬಗ್ಗೆ ಹೆಚ್ಚೆಚ್ಚು ತಿಳಿದುಕೊಳ್ಳುವ ತವಕ ಅವರಲ್ಲಿತ್ತು. ಅದು ನನಗೆ ಇಷ್ಟವಾಯ್ತು. ಮಡದಿ ಮಕ್ಕಳನ್ನು ಮಾರ್ಚ್ ಮತ್ತು ಎಪ್ರಿಲ್ ತಿಂಗಳಲ್ಲಿ ಆಗುಂಬೆಗೆ ಕರ್ಕೊಂಡು ಬರ್ತೀನಿ ಅಂತಾ ಹೇಳಿದ್ರು. ಆದ್ರೆ ಗಂಧದ ಗುಡಿಯೇ ಅವರ ಕೊನೆಯ ಸಿನಿ ಜರ್ನಿಯಾಗಿತ್ತು.

ಸಿನಿಮಾದಲ್ಲಿ ನಿಮ್ಮ ಕ್ಯಾರೆಕ್ಟರ್ ಏನು
ಅಮೋಘ್ ನನ್ನ ನೋಡಲು ಬರ್ತಾರೆ. ಕಾಳಿಂಗ ಸರ್ಪವೊಂದು ಮನೆಯಲ್ಲಿ ಅಡಗಿರುವ ಫೋನ್ ಕಾಲ್ ನನಗೆ ಬರುತ್ತೆ. ನನ್ನ ಅನುಭವ ಮತ್ತು ಸಂಶೋಧನೆ ಜೊತೆಗೆ ಕಾಳಿಂಗ ಸರ್ಪ ಹಿಡಿಯುವ ಕಾರ್ಯಾಚರಣೆ ಆರಂಭಿಸುತ್ತೇವೆ. ಅದನ್ನು ಪುನಃ ಕಾಡಿಗೆ ಬಿಡುವ ಸನ್ನಿವೇಶದಲ್ಲಿ ನಾನು ಪುನೀತ್ ಜೊತೆ ಕಾಣಿಸಿಕೊಳ್ತಿನಿ. ಅವರು ಒಬ್ಬ ರೀಸರ್ಚರ್ ಆಗಿ ಕಾಳಿಂಗ ಸರ್ಪಗಳ ಬಗ್ಗೆ ತಿಳಿದುಕೊಳ್ಳಲು ನನ್ನ ರೀಸರ್ಚ್ ಸೆಂಟರ್ಗೆ ಬರುತ್ತಾರೆ. ನಮ್ ಜೊತೆ ಇದ್ದು ಮಾತಾನಾಡಿಕೊಂಡು ಹೋಗುವ ಸನ್ನಿವೇಶ. ಈ ದೃಶ್ಯಗಳು ಸಿನಿಮಾದಲ್ಲಿ ಹೇಗೆ ಮೂಡಿಬಂದಿದೆಯೋ ಎಂಬ ಕುತೂಹಲ ನನಗೂ ಇದೆ. ನಾನು ಸಿನಿಮಾ ನೋಡಲು ಕಾತುರನಾಗಿದ್ದೇನೆ

ಅಮೋಘ್ ಜೊತೆಗಿನ ನಿಮ್ಮ ಸ್ನೇಹ ಸಂಬಂಧ ಹೇಗಿತ್ತು
ಅಮೋಘ್ ಬಹಳ ವರ್ಷಗಳಿಂದ ನನಗೆ ಪರಿಚಯ. ಅವರೊಬ್ಬ ಅದ್ಬುತ ಕಾಡಿನ ಪ್ರೇಮಿ, ಇಂಜಿನಿಯರಿಂಗ್ ಪದವಿ ಮುಗಿಸಿ, ವೈಲ್ಡ್ ಲೈಫ್ ಗೆ ಎಂಟ್ರಿಕೊಟ್ಟವರು. ಫಿಲ್ಮ್ ಕ್ರಿಯೇಷನ್ ಗೆ ಸಂದೇಶ್ ಪ್ರಭು ಎಂಬುವರ ಜೊತೆ ಒಂದು ಪ್ರಾಜೆಕ್ಟ್ಗೆ ಇಂಟರ್ನಿಯಾಗಿ ಬಂದಿದ್ರು.
2008 ರಲ್ಲಿ ನಾನಾಗ ಸೀಕ್ರೆಟ್ ಆಫ್ ಕಿಂಗ್ ಕೋಬ್ರಾ ಡಾಕ್ಯುಮೆಂಟರಿ ಶೂಟ್ ಮಾಡ್ತಿದ್ದೆವು. ಆ ಸಮಯಲ್ಲಿ ನಮ್ಮಲಿಗೆ ಬಂದು ಒಂದು ದಿನ ಉಳಿದಿದ್ರು. ಅಲ್ಲಿಂದ ಶುರುವಾದ ನಮ್ಮಿಬ್ಬರ ಸ್ನೇಹ ಈಗನವರೆಗೂ ಮುಂದುವರೆದಿದೆ.
ಅಮೋಘವರ್ಷ ಫೋಟೋಗ್ರಾಫಿ ಅಂತಾ ಮಾಡ್ಕೊಂಡು ನಮ್ ಜೊತೆ ಫೋಟೋಗ್ರಾಫಿ ಕೂಡ ಮಾಡಿದ್ರು. ನಂತ್ರ ವೈಲ್ಡ್ ಕರ್ನಾಟಕ ಅಂತಾ ಡಾಕ್ಯುಮೆಂಟರಿ ಮಾಡಿ, ದೇಶದೆಲ್ಲೆಡೆ ಮೆಚ್ಚುಗೆ ಗಳಿಸಿದ್ರು.
ವೈಲ್ಡ್ ಕರ್ನಾಟಕರಿಂದ ಅವಾರ್ಡ್ ವಿನ್ನಿಂಗ್ ಡಾಕ್ಯುಮೆಂಟರಿ ಮಾಡಿ, ದೇಶದ ಗಮನ ಸೆಳೆದ, ಅಮೋಘ್ ರನ್ನು ಪುನೀತ್ ರಾಜ್ ಕುಮಾರ್ ರವರೇ ಖುದ್ದಾಗಿ ಬರ ಮಾಡಿಕೊಂಡಿದ್ದರು. ಪುನೀತ್ ರವರ ಲೆವೆಲ್ ವರೆಗೆ ಸಿನಿಮಾ ಮಾಡುವಷ್ಟರ ಮಟ್ಟಿಗೆ ಅಮೋಘ್ ಬೆಳೆದಿರುವುದೇ ನಮಗೆ ಹೆಮ್ಮೆ.


ಗಂಧದ ಗುಡಿ ಸಿನಿಮಾ ಮೂಲಕ ಅಪ್ಪು ಸರ್ ಸಮಾಜಕ್ಕೆ ಯಾವ ಸಂದೇಶ ನೀಡಲು ಬಯಸಿದ್ದರು
- ಅಮೋಘ್ ಗವರ ವೈಲ್ಡ್ ಕರ್ನಾಟಕ ಡಾಕ್ಯುಮೆಂಟರಿ ನೋಡಿ ಪುನೀತ್ ತುಂಬಾ ಇಂಪ್ರೆಸ್ ಆಗಿದ್ರು. ಪುನೀತ್ ರವರಿಗೆ ನಾನೆ ಕಾಡಿನ ಆಸಕ್ತಿಯ ಬಗ್ಗೆ ಕೇಳಿದಾಗ ಅವರು ನನಗೆ ಹೇಳಿದ್ದೇನೆಂದರೆ, ನಾನು ವೈಲ್ಡ್ ಕರ್ನಾಟಕ ನೋಡಿದೆ.
- ನಮ್ಮ ಕನ್ನಡದ ಹುಡುಗರು ಈ ರೀತಿ ಡಾಕ್ಯುಮೆಂಟರಿ ಮಾಡಿರುವುದನ್ನ ನೋಡಿ ಅಚ್ಚರಿಯಾಯ್ತು. ನಾನೇ ಅವರನ್ನು ಕರೆದು ಮಾತಾಡಿಸಿದೆ. ವೈಲ್ಡ್ ಲೈಫ್ ಬಗ್ಗೆ ನಿಮ್ಮದು ಯಾವುದಾದ್ರೂ ಮುಂದಿನ ಪ್ರಾಜೆಕ್ಟ್ ಇದ್ರೆ ಹೇಳಿ. ಮಾಡೋಣ ಎಂದು ಹೇಳಿದ್ರಂತೆ.
- ಅದರಂತೆ ಅಮೋಘ್ ಸಿನಿಮಾಗೆ ಸಿದ್ದತೆ ನಡೆಸಿದ್ರು. ಪುನೀತ್ ರವರಿಗೆ ವೈಲ್ಡ್ ಲೈಫ್ ಬಗ್ಗೆ ಸಿನಿಮಾ ಮಾಡುವ ಆಸಕ್ತಿ ಇದ್ರೂ, ಅವರಿಗೆ ಸೂಕ್ತ ಕಾಡಿನ ಸಾರಥಿ ಬೇಕಾಗಿತ್ತು. ಅಮೋಘ್ ಅದಕ್ಕೆ ನೆರವಾದರು. ಫೀಲ್ಡ್ ವರ್ಕ್ಗೆ ಸಾಥ್ ನೀಡಿದ್ರು. ರಾಜ್ಯದ ಕಾಡು ಮತ್ತು ವನ್ಯಜೀವಿ ಶ್ರೀಮಂತಿಕೆಯನ್ನು ವಿಶ್ವದರ್ಶನ ಮಾಡಿಸಬೇಕು.
- ನಮ್ಮ ಲ್ಯಾಂಡ್ ಸ್ಕೇಪ್, ಬಯೋಡೈವರ್ಸಿಟಿ, ವನ್ಯಜೀವಿ ಶ್ರೀಮಂತಿಕೆಯನ್ನು ಕನ್ನಡದಲ್ಲಿ ತೋರಿಸಬೇಕು ಎಂದು ಕನಸು ಕಂಡಿದ್ರು. ಡಿಸ್ಕವರಿ, ನ್ಯಾಷನಲ್ ಜಿಯೋಗ್ರಫಿಕ್ಚಾನಲ್ ನಲ್ಲಿ ನಮ್ಮ ದೇಶದ ಶ್ರೀಮಂತಿಕೆ ಅನಾವರಣಗೊಂಡಿದೆ.
- ಆದ್ರೆ ಕರ್ನಾಟಕದಲ್ಲಿ ಕನ್ನಡದಲ್ಲಿ ವನ್ಯಜೀವಿಗಳ ಬಗ್ಗೆ ಯಾರು ಡಾಕ್ಯುಮೆಂಟರಿ ಮಾಡಿಲ್ಲ. ನಮ್ಮ ಸ್ಥಳೀಯ ಕಾಡು ವನ್ಯಜೀವಿ ಮಹತ್ವ ಸಾರಿ ಹೇಳಬೇಕಿತ್ತು. ಅವರಿಗೆ ಅಮೋಘ್ ಒಳ್ಳೆಯ ಜೋಡಿ ಆದ್ರು. ನಮ್ಮಂತಯೇ ಹಲವರ, ರಾಜ್ಯದ ಆಯಾ ಕಾಡಿನ ಸ್ಥಳಗಳಲ್ಲಿ ಸಿಕ್ಕು,ಅವರಿಗೆ ಕೈ ಜೋಡಿಸಿದ್ದೇವೆ.


