ಮಲೆನಾಡು ಟುಡೆ ಸುದ್ದಿ / ರಿಪ್ಪನ್ಪೇಟೆ / ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ವಾಹನಕ್ಕೆ ಕಾರೊಂದು ಹಿಂಬದಿಯಿಂದ ಡಿಕ್ಕಿ ಹೊಡೆದ ಘಟನೆ ಸೋಮವಾರ ರಿಪ್ಪನ್ಪೇಟೆ ಸಮೀಪದ ಚಿಕ್ಕಜೇನಿ ಬಳಿ ನಡೆದಿದೆ.
ಪಿಎಸ್ಐ ರಾಜುರೆಡ್ಡಿ ಮತ್ತು ಸಿಬ್ಬಂದಿ ಹರತಾಳು, ಬಟ್ಟೆಮಲ್ಲಪ್ಪ ಹಾಗೂ ಕೋಡೂರು ಮಾರ್ಗವಾಗಿ ಪಟ್ಟಣಕ್ಕೆ ಆಗಮಿಸುತ್ತಿದ್ದ ವೇಳೆ ಚಿಕ್ಕಜೇನಿ ಸಮೀಪ ಈ ಘಟನೆ ಸಂಭವಿಸಿದೆ. ಪೊಲೀಸ್ ಜೀಪ್ ಸಾಗುತ್ತಿದ್ದಾಗ ಹಿಂದಿನಿಂದ ವೇಗವಾಗಿ ಬಂದ ಕಾರು ಜೀಪ್ಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಜೀಪ್ ಚಾಲಕನ ನಿಯಂತ್ರಣ ತಪ್ಪಿದ್ದು, ರಸ್ತೆ ಬದಿಯ ಬೃಹತ್ ಮರಕ್ಕೆ ತಾಗಿ ವಾಹನ ಜಖಂಗೊಂಡಿದೆ. ಏರ್ಬ್ಯಾಗ್ ತೆರೆದುಕೊಂಡ ಪರಿಣಾಮ ಜೀಪ್ನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಅಪಘಾತದ ಬಳಿಕ ಕಾರಿನ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆ ಸಂಬಂಧ ರಿಪ್ಪನ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
